ಸರ್ಕಾರಿ ಆಸ್ತಿ ನುಂಗಲು ಸರ್ಕಾರದಿಂದಲೇ ಕುಮ್ಮಕ್ಕು, ಅತಿದೊಡ್ಡ ಅಕ್ರಮದ ಬಗ್ಗೆ ದಾಖಲೆ ಬಿಡುಗಡೆ: ಎಚ್ ಡಿಕೆ

ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರದ ಆಸ್ತಿಯನ್ನು ನುಂಗುವ ಮಹಾ ಹುನ್ನಾರದ ಬಗ್ಗೆ ಸ್ಫೋಟಕ ಮಾಹಿತಿ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರ್ಕಾರದ ಅತಿದೊಡ್ಡ ಹಗರಣವನ್ನು...
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರದ ಆಸ್ತಿಯನ್ನು ನುಂಗುವ ಮಹಾ ಹುನ್ನಾರದ ಬಗ್ಗೆ ಸ್ಫೋಟಕ ಮಾಹಿತಿ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರ್ಕಾರದ ಅತಿದೊಡ್ಡ ಹಗರಣವನ್ನು ವಿಧಾನಸಭೆ ಕಲಾಪದಲ್ಲಿ ಬಯಲು ಮಾಡುವುದಾಗಿ ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಕೊಡಿ, ದಾಖಲೆಗಳನ್ನು ಕೊಡಿ ಎಂದು ಪದೇಪದೆ ನನ್ನನ್ನು ಕೆಣಕಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ  ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ಹೊರಟ ಅತಿದೊಡ್ಡ ಅಕ್ರಮದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು. ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಲು‌‌ ಕಾಂಗ್ರೆಸ್ ಪಕ್ಷ ಸಹಕರಿಸಬೇಕು. ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ಗೊತ್ತಾಗಬೇಕು. ನಾನು ಈ ದಾಖಲೆಗಳನ್ನು ಬಿಡುಗಡೆ ಮಾಡುತ್ತಿರುವುದು ಈ ಸರ್ಕಾರದ ಹಗರಣಗಳ ಒಂದು ಸ್ಯಾಂಪಲ್ ಮಾತ್ರ. ಇದನ್ನು ಬಿಜೆಪಿಯವರು ಅರಗಿಸಿಕೊಳ್ಳಲಿ ಸಾಕು ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

ನಾನು ಸುಖಾಸುಮ್ಮನೆ ಸದನ ಸಮಯವನ್ನು ಹಾಳು ಮಾಡಲಾರೆ. ಇವತ್ತಿನ ಜೆಡಿಎಲ್ ಪಿ ಸಭೆಯಲ್ಲಿಯೂ ಈ ವಿಷಯ ಸೇರಿ ಹಲವಾರು ವಿಚಾರವಾಗಿ ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ಇತ್ತಿಚೆಗೆ ಬೆಂಗಳೂರು ನಗರ ಸೇರಿ 22 ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದರಿಂದ ದೊಡ್ಡ ಮಟ್ಟದ ನಷ್ಟವಾಗಿದೆ. ಬೆಳೆ ಹಾನಿ, ಮನೆ ಕುಸಿತವೂ ಆಗಿದೆ. ಈ ಬಗ್ಗೆ ಸದನದಲ್ಲಿ ವಿವರವಾಗಿ ಚರ್ಚೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.

ಪರ್ಸೆಂಟೇಜ್ ಬಗ್ಗೆ ರಾಜ್ಯದ ಉದ್ದಗಲಕ್ಕೂ ಬೀದಿಲಿ ಚರ್ಚೆ ನಡೆಯುತ್ತಿದೆ. ಅಧಿಕೃತ ವಿರೋಧ ಪಕ್ಷ, ಆಳುವ ಪಕ್ಷಗಳ ನಡುವೆ ರಾಜ್ಯದಲ್ಲಿ ನಡೆಯುತ್ತಿರುವ ಲೂಟಿ ಬಗ್ಗೆ ಬರೀ ಮಾತಿನಲ್ಲಿ ಪೈಪೋಟಿ ನಡೆಯುತ್ತಿದೆ. ನಿಖರವಾಗಿ ದಾಖಲೆಗಳು ಇದ್ದರೆ ಚರ್ಚೆ ಮಾಡಿ ಎಂದು ನಾನು ನಮ್ಮ ಶಾಸಕರಿಗೆ ತಿಳಿಸಿದ್ದೇನೆ. ನಾನು ಕೂಡ ದಾಖಲೆ ಇಟ್ಟುಕೊಂಡೇ ಮಾತನಾಡುತ್ತೇನೆ. ಸುಖಾಸುಮ್ಮನೆ ಸದನದಲ್ಲಿ ಸಂತೆ ಭಾಷಣ ಮಾಡಿದರೆ ಪ್ರಯೋಜನವಿಲ್ಲ. ಸದನದ ಅಮೂಲ್ಯ ಸಮಯ ಸದುಪಯೋಗ ಮಾಡಿಕೊಳ್ಳುವಂತೆ ಶಾಸಕರಿಗೆ ಸಲಹೆ ನೀಡಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇಂದು ಸಂತಾಪ ಚರ್ಚೆ ನಂತರ ನಾಳೆಯಿಂದ 9 ದಿನಗಳ ಕಾಲ ಅಧಿಕೃತ ವಿರೋಧ ಪಕ್ಷ ಚರ್ಚೆಗೆ ಯಾವ ರೀತಿ ಆದ್ಯತೆ ಕೊಡಲಿದೆ ಎಂಬುದನ್ನು ನೋಡುತ್ತೇವೆ. ಉತ್ತಮ ರೀತಿಯ ಕಲಾಪಕ್ಕೆ ಅವಕಾಶ ಯಾವ ರೀತಿ ಇರುತ್ತದೆ ಎಂದು ಗಮನಿಸುತ್ತೇವೆ. ಸುಮ್ಮನೆ ವಿಚಾರ ಇಲ್ಲದೆ, ದಾಖಲೆ ಇಲ್ಲದೇ ಮಾತಾಡೋದ್ರಿಂದ ಸದನದ ಕಲಾಪಕ್ಕೆ ಧಕ್ಕೆ ಆಗಲಿದೆ. ಇತ್ತೀಚೆಗೆ ನಾನು ಸದನದ ಕಲಾಪದಲ್ಲಿ ದೊಡ್ಡ ಮಟ್ಟದ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ. ಯಾವುದಾದರೂ ಮುಖ್ಯ ವಿಚಾರ ಇದ್ದಾಗ ಭಾಗಿಯಾಗಿದ್ದೇನೆ. ನಾನು ಭಾಗಿಯಾದಾಗ ದಾಖಲೆ ಸಮೇತ ಮಾತನಾಡಿದ್ದೇನೆ. ಒಂದಿಷ್ಟು ಜನ ಹೇಳ್ತಾ ಇದ್ದಾರೆ, ಸದನದಲ್ಲಿ ಕುಮಾರಸ್ವಾಮಿ ಏನು ಮಾತಾಡಿ ಬಿಟ್ಟಾರು ಅಂತ. ಒಂದಿಷ್ಟು ದಾಖಲೆಗಳನ್ನು ನಾನು ಸ್ಯಾಂಪಲ್ ಆಗಿ ಬಹಿರಂಗ ಮಾಡುತ್ತೇನೆ. ಇದನ್ನು ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇನೆ. ಸಾರ್ವಜನಿಕ ಆಸ್ತಿಯನ್ನು ಹಣಕ್ಕೋಸ್ಕರ ಮಾರಾಟಕ್ಕೆ ಇಡ್ತಾ ಇದ್ದಾರೆ. ಇದಕ್ಕೆ ತಡೆ ಹಾಕಬೇಕಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಯಾವ ರೀತಿ ಇದೆ ಎನ್ನುವುದು ನಾಡಿನ‌ ಜನತೆಗೆ ಹಾಗೂ ಪ್ರಧಾನಿ ಮೋದಿ ಅವರಿಗೂ ಗೊತ್ತಾಗಲಿ. ಅದಕ್ಕೇ ಎಲ್ಲದಕ್ಕೂ ದಾಖಲೆ ಇಟ್ಟು ಮಾತನಾಡುತ್ತೇನೆ. ಇದು ಭಾರೀ ಹಗರಣ. ಸರ್ಕಾರಕ್ಕೆ ಬರಬೇಕಾದ ಎಂಟತ್ತು ಸಾವಿರ ಕೋಟಿ ರೂಪಾಯಿ ಕಬಳಿಸುವ ಹುನ್ನಾರ ನಡೆದಿದೆ. 1957ನೇ ಇಸವಿಯಿಂದ ಈ ವಿಷಯ ಇದೆ. ಈ ಸರಕಾರಿ ಆಸ್ತಿಗೆ 2008-09ರಲ್ಲೇ 5 ಸಾವಿರ ಕೋಟಿ ಅಂತ ಅಂದಾಜು ಕಟ್ಟಿದ್ದರು. ಆದರೆ, ಈ ಬಗ್ಗೆ ಸರಕಾರ ಮಾಡಿರುವ ಆದೇಶ ದಿಗ್ಭ್ರಮೆ ಉಂಟು ಮಾಡುವ ರೀತಿಯಲ್ಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ತೃತೀಯ ರಂಗವಲ್ಲ, ಪರ್ಯಾಯ ಶಕ್ತಿ
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಜತೆಗಿನ ಭೇಟಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ತೃತೀಯ ರಂಗ ಅನ್ನೋದು ಪ್ರಶ್ನೆ ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯ ಶಕ್ತಿಯ ಕನಸು ಅವರದ್ದು ಎಂದರು. ಕೆಸಿಆರ್ ಅವರು ದೇಶದ ಸಮಸ್ಯೆ ಪರಿಹಾರಕ್ಕೆ ಅವರದ್ದೇ ಆದ ಒಂದು ಕಲ್ಪನೆ ಇಟ್ಟುಕೊಂಡಿದ್ದಾರೆ. ರೈತರ ವಿಚಾರದಲ್ಲಿ ಯಾವ ರೀತಿ ಸಹಾಯ ಆಗಬೇಕು, ರಾಷ್ಟ್ರ ಮಟ್ಟದಲ್ಲಿ ಯಾವ ರೀತಿ ಹೋಗಬೇಕು ಎಂಬ ವಿಚಾರ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ನಮ್ಮ ಬೆಂಬಲ ಕೋರಿದ್ದಾರೆ. ನಾವು ಅವರ ಜೊತೆ ಕೈ ಜೋಡಿಸುವ ನಿಟ್ಟಿನಲ್ಲಿ ಯೋಚಿಸಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com