ಒಂದೂವರೆ ಅಡಿ ನೀರಿನಲ್ಲಿ ನಿಮ್ಮನ್ನು ದೋಣಿಯಲ್ಲಿ ಕರೆದುಕೊಂಡು ಹೋದ ಪುಣ್ಯಾತ್ಮ ಯಾರು? ಸಿದ್ದರಾಮಯ್ಯಗೆ ಸಿಎಂ ಪ್ರಶ್ನೆ

ರಾಜಧಾನಿಯಲ್ಲಿ ಭಾರೀ ಮಳೆಯಿಂದಾಗಿ ನೆರೆ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಅವರು ಬೋಟ್‌ನಲ್ಲಿ ಭೇಟಿ ನೀಡಿದ ಪ್ರಸಂಗ ಸದನದಲ್ಲಿ ಹಾಸ್ಯ ಚಟಾಕಿಗೆ ಕಾರಣವಾಯಿತು.
ಸಿದ್ದರಾಮಯ್ಯ ದೋಣಿಯಲ್ಲಿ ಪ್ರಯಾಣ
ಸಿದ್ದರಾಮಯ್ಯ ದೋಣಿಯಲ್ಲಿ ಪ್ರಯಾಣ

ಬೆಂಗಳೂರು: ರಾಜಧಾನಿಯಲ್ಲಿ ಭಾರೀ ಮಳೆಯಿಂದಾಗಿ ನೆರೆ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಅವರು ಬೋಟ್‌ನಲ್ಲಿ ಭೇಟಿ ನೀಡಿದ ಪ್ರಸಂಗ ಸದನದಲ್ಲಿ ಹಾಸ್ಯ ಚಟಾಕಿಗೆ ಕಾರಣವಾಯಿತು.

ವಿಧಾನಸಭೆಯಲ್ಲಿ ರಾಜ್ಯದಲ್ಲಿನ ಅತಿವೃಷ್ಟಿ ಸಂಬಂಧ  ಚರ್ಚೆ ನಡೆಯಿತು. ಬೆಂಗಳೂರಿನಲ್ಲಿ ಮಳೆ ಅವಾಂತರಗಳ ಕುರಿತು ಸಿದ್ದರಾಮಯ್ಯ ಅವರು ಮಾತನಾಡುವಾಗ ಬೋಟ್‌ ಪ್ರಸಂಗ ಮುನ್ನೆಲೆಗೆ ಬಂತು

ಒಂದೂವರೆ ಅಡಿ ನೀರಿರುವ ಜಾಗದಲ್ಲಿ ನಿಮ್ಮನ್ನು ಬೋಟಲ್ಲಿ ಕರೆದುಕೊಂಡು ಹೋಗಿದ್ದ ಪುಣ್ಯಾತ್ಮ ಯಾರಪ್ಪ? ನಾವೆಲ್ಲ ರಸ್ತೆಯಲ್ಲೇ ಹೋಗಿದ್ದು ಎಂದು ಸಿದ್ದುಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್‌ ಕೊಟ್ಟರು. 3 ಅಡಿ ನೀರಿದ್ದ ಜಾಗದಲ್ಲಿ ನಾವು ನಡೆದಕೊಂಡು ಹೋಗಿದ್ದೇವು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ನಾನು ಹೋದಾಗ ಐದು ಅಡಿ ನೀರಿತ್ತು ಎಂದರು.

ಸೆಲೆಬ್ರಿಟಿಗಳು ಇರುವ ಯಮಲೂರಿನಲ್ಲಿ ಬೋಟ್‌ನಲ್ಲೇ ಹೋಗಬೇಕು ಎಂದು ಸಿದ್ದರಾಮಯ್ಯ ಹೇಳುವಾಗ ಮಧ್ಯೆ ಪ್ರವೇಶಿಸಿದ ಶಾಸಕ ಅರವಿಂದ್‌ ಲಿಂಬಾವಳಿ, ರೋಡಲ್ಲೇ ಹೋಗಬಹುದಿತ್ತು. ನೀವ್ಯಾಕೆ ಬೋಟಲ್ಲಿ ಹೋದಿರಿ ಗೊತ್ತಿಲ್ಲ ಎಂದು ಸಿದ್ದು ಕಾಲೆಳೆದರು, ನೀವು ಬರೋದಾಗಿ ಹೇಳಿದ್ರೆ ನಾನೇ ವೆಲ್ ಕಮ್ ಮಾಡ್ತಿದ್ದೆ. ರಸ್ತೆ ತೋರಿಸಬಹುದಿತ್ತು . ನಿಮ್ಮನ್ನ ದಿಕ್ಕು ತಪ್ಪಿಸೋರು ತುಂಬಾ ಜನ ಇದಾರೆ, ಹುಷಾರಾಗಿರಿ ಸಾರ್ ಎಂದು ಮತ್ತೆ ಕಾಳೆದರು.

ಕೃಷ್ಣ ಬೈರೇಗೌಡ ಮಾತನಾಡಿ, ಎನ್‌ಡಿಆರ್‌ಎಫ್ ಬೋಟ್‌ನಲ್ಲೇ ಹೋಗಿದ್ದೆವು. ಸುಮಾರು ಲೇಔಟ್ ನೀರಿನಲ್ಲಿ ಮುಳುಗಿತ್ತು. ಅಲ್ಲಿ ಜನ ಕಷ್ಟ ಅನುಭವಿಸಿದ್ದು, ಸುಳ್ಳಾ? ನಾವು ಬೋಟಲ್ಲ, ನೆಡೆದುಕೊಂಡೇ ಹೋಗಿದ್ದೆವು ಎಂದ ಸಿಎಂ ಮಾತಿಗೆ ತಿರುಗೇಟು ನೀಡಿದರು. ಇದೇ ವೇಳೇ ಅರವಿಂದ ಲಿಂಬಾವಳಿ ಮಾತನಾಡಿ ಲೇಔಟ್ ಮಾಡಿದವನ ತಪ್ಪಿಂದ ನೀರು ನಿಂತಿದ್ದು ನಿಜ. ದೊಡ್ಡ ದೊಡ್ಡ ಐಷಾರಾಮಿ ಕಾರಿನಲ್ಲಿ ಓಡಾಡ್ತಿದ್ದವರನ್ನ, ಟ್ರಾಕ್ಟರ್‌ನಲ್ಲಿ ಕರೆದುಕೊಂಡು ಬರುವ ಪರಿಸ್ಥಿತಿ ಬಂತು ಎಂದರು.

ನಾನು ನನ್ನ ಸ್ವಂತ ಬೋಟ್ ತಗೊಂಡ್ ಹೋಗಿರಲಿಲ್ಲ. ಎನ್‌ಡಿಆರ್‌ಎಫ್ ಬೋಟ್ ತೆಗೆದುಕೊಂಡು ಹೋಗಿದ್ದೆ. ಲಿಂಬಾವಳಿ ಅವರನ್ನೇ ಕೇಳಿ, ಮೋಟಾರ್ ಬೋಟ್ ತೆಗೆದುಕೊಂಡು ಹೋಗಿದ್ದೆ. ಒಂದೂವರೆ ಅಡಿ ನೀರು ಇರಲಿಲ್ಲ, 10-12 ಅಡಿ ನೀರು ನಿಂತಿತ್ತು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಅರವಿಂದ್ ಲಿಂಬಾವಳಿ ಮಧ್ಯಪ್ರವೇಶಿಸಿ, ಸಿಎಂ ಯಂಗ್ ಆಗಿದ್ದಾರೆ. ಹಾಗಾಗಿ ನಡೆದುಕೊಂಡು ಹೋದ್ರು, ನಿಮಗೆ ಸ್ವಲ್ಪ ವಯಸ್ಸಾಗಿದೆ ಹಾಗಾಗಿ ಬೋಟಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಕಾಲೆಳೆದರು.

ನಾನು ಹೋದಾಗ ನೀರು ಹೆಚ್ಚಿತ್ತೋ, ಕಡಿಮೆ ಇತ್ತೋ ಗೊತ್ತಿಲ್ಲ. ಆದ್ರೆ ನಾನು ನಡೆದುಕೊಂಡು ಹೋಗಿದ್ದು. ನನ್ನ ಬೋಟಲ್ಲಿ ಬರೋದಕ್ಕೆ ಹೇಳಿದ್ರು, ಆದ್ರೆ ನಾನು ಜೀಪಲ್ಲಿ ಹೋದೆ ಎಂದು ಸಿಎಂ ಹೇಳಿದರು. ಬೋಟಲ್ಲಿ ಹೋಗಿದ್ದು ನಿಜ, ನೀರೆದ್ದರೇನೇ ಬೋಟಲ್ಲಿ ಹೋಗೋಕೆ ಸಾಧ್ಯ, ಅದು ಒಂದೂವರೆ ಅಡಿಯಾದ್ರೂ ಇರಲಿ, ಹತ್ತೂವರೆ ಅಡಿಯಾದ್ರೂ ಇರಲಿ. ಮಳೆಯಿಂದ ಹಾನಿಯಾಗಿರೋದು ಸತ್ಯವಾಗಿದ್ದು, ಅಲ್ಲಿ ಭೇಟಿ ಕೊಟ್ಟಾಗ ಜನ ಸಮಸ್ಯೆ ಹೇಳಿಕೊಂಡ್ರು, ಕಾರು, ಸ್ಕೂಟರ್ ಎಲ್ಲ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮಳೆ ಹಾನಿಯಾದ ಪ್ರದೇಶದಲ್ಲಿ ಪರಿಹಾರ ಕೊಡುವಂತೆ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಅಶೋಕ್ ಸಿದ್ದರಾಮಯ್ಯ ಅವರು ಪಂಚೆ ಹಾಕಿದ್ದರಲ್ಲ ಹೀಗಾಗಿ  ದೋಣಿಯಲ್ಲಿ ತೆರಳಿದರು ಎಂದು ಲೇವಡಿ ಮಾಡಿದರು., ಎನ್‌ಡಿಆರ್‌ಎಫ್ ನಾರ್ಮ್ಸ್ ಪ್ರಕಾರ, ಮಳೆ ನಿಂತ ಬಳಿಕವೇ ಸರ್ವೆ ಮಾಡಬೇಕು. ಪ್ರತಿದಿನ ಹೋಗಿ ಪರಿಶೀಲನೆ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಂತೆ ಸಿದ್ದರಾಮಯ್ಯ ಅವರು, ಪರಿಹಾರ ಕೊಡಲೇ ಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com