ವರುಣಾದಲ್ಲಿ ಬಿಜೆಪಿ- ಕಾಂಗ್ರೆಸ್ ಮ್ಯಾಚ್ ಫಿಕ್ಸಿಂಗ್: ಮೋದಿಯಂತಹ ಸ್ಟಾರ್ ನಟರ ಕೈಯಲ್ಲೇ ಅಟ್ರಾಕ್ಷನ್ ಮಾಡೋಕೆ ಆಗ್ತಿಲ್ಲ, ಸುದೀಪ್ ಏನ್ ಮಾಡ್ತಾರೆ?
ಮೈಸೂರು: ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಮೈತ್ರಿಯಾಗಿದೆ, ಹೀಗಾಗಿ ವರುಣ ಕ್ಷೇತ್ರದಲ್ಲಿ ಬಿಜೆಪಿ ಸಮರ್ಥ ಅಭ್ಯರ್ಥಿಯನ್ನು ಹಾಕುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಬಿಜೆಪಿ-ಜೆಡಿಎಸ್ ನಡುವೆ ಒಳ ಒಪ್ಪಂದವಲ್ಲ. ಕಾಂಗ್ರೆಸ್-ಬಿಜೆಪಿ ನಡುವೆ ಒಳ ಒಪ್ಪಂದ ಆಗಿದೆ. ಯಾರು ಏನು ಅನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು. ವರುಣಾ ಕ್ಷೇತ್ರಕ್ಕೆ ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಹೇಳಿದರು.
ಬಿಜೆಪಿ ಅಥವಾ ಕಾಂಗ್ರೆಸ್ ಜತೆ ಸೇರಿ ಮೈತ್ರಿ ಸರ್ಕಾರ ರಚಿಸುವ ಇಚ್ಛೆ ಇಲ್ಲ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ವೇಳೆ ಭಾಗವಹಿಸುತ್ತಿರುವ ಜನಸ್ತೋಮ ನೋಡಿದರೆ ಈ ಬಾರಿ ರಾಜ್ಯದ ಜನತೆ ಬಹುಮತ ನೀಡುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಪಿ
ನವಂಬರ್ ತಿಂಗಳಿನಲ್ಲಿ ಕೋಲಾರದಲ್ಲಿ ಆರಂಭವಾದ ಪಂಚರತ್ನ ರಥಯಾತ್ರೆ ರಾಜ್ಯಾದ್ಯಂತ ಐದು ತಿಂಗಳ ಕಾಲ ಸಂಚರಿಸಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಉಚಿತ ಆರೋಗ್ಯ ಶಿಕ್ಷಣ ಉದ್ಯೋಗ ಸೇರಿದಂತೆ ಕೃಷಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನೂತನ ಯೋಜನೆಗಳನ್ನು ಆರಂಭಿಸಿ ರೈತರು ಕಾರ್ಮಿಕರು ಸೇರಿದಂತೆ ಸಮಾಜದ ವಿವಿಧ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಮನವರಿಕೆ ಮಾಡಿಕೊಟ್ಟಿದ್ದು, ರಥಯಾತ್ರೆ ಸಂದರ್ಭ ಮತದಾರರ ಅಭೂತಪೂರ್ವ ಬೆಂಬಲ ನೋಡಿದರೆ ಮುಂದಿನ ಬಾರಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ವಿಶ್ವಾಸವಿದೆ ಎಂದರು.
ಮೋದಿಯಂತಹ ಸ್ಟಾರ್ ನಟರ ಕೈಯಲ್ಲೇ ಅಟ್ರಾಕ್ಷನ್ ಮಾಡೋಕೆ ಆಗ್ತಿಲ್ಲ. ಅಂಥದ್ರಲ್ಲಿ ಸುದೀಪ್ ಏನು ಮಾಡುತ್ತಾರೆ ನೋಡೋಣ ಬನ್ನಿ ಎಂದು ಲೇವಡಿ ಮಾಡಿದರು.
ಬಿಜೆಪಿಯಿಂದ ಅಲ್ಪಸಂಖ್ಯಾತರಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲದಂತಾಗಿದೆ, ಅವರು ಅಧಿಕಾರಕ್ಕೆ ಬರಲು ನೇರ ಕಾರಣ ಕಾಂಗ್ರೆಸ್ನವರಾಗಿದ್ದು, ಪ್ರಮುಖವಾಗಿ ಮೈಸೂರಿನ ನಾಯಕನ ಕುತಂತ್ರದಿಂದ ಮೈತ್ರಿ ಸರ್ಕಾರ ಪತನವಾಯಿತು ಎಂದು ಸಿದ್ದರಾಮಯ್ಯ ಅವರ ಹೆಸರು ಹೇಳದೆ ಪರೋಕ್ಷವಾಗಿ ಟಾಂಗ್ ನೀಡಿದರು. ದೇವೇಗೌಡರ ಕುಟುಂಬಕ್ಕೆ ನಿಷ್ಠವಾಗಿರುವುದರಲ್ಲಿ ಪಿರಿಯಾಪಟ್ಟಣ ತಾಲೂಕು ಮೊದಲ ಸ್ಥಾನದಲ್ಲಿದೆ, ಇಂತಹ ಪ್ರಾಮಾಣಿಕ ಮುಖಂಡರು ಮತ್ತು ದೇವೇಗೌಡರನ್ನು ಇಷ್ಟಪಡುವ ಲಕ್ಷಾಂತರ ಕಾರ್ಯಕರ್ತರು ಪಿರಿಯಾಪಟ್ಟಣದಲ್ಲಿದ್ದು, ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಹಾಸನ ಟಿಕೆಟ್ ವಿಚಾರದಲ್ಲಿ ನಾನು ಬದ್ಧನಾಗಿದ್ದೇನೆ. ಪಕ್ಷದ ಕಾರ್ಯಕರ್ತನಿಗೆ ಟಿಕೆಟ್ ಕೊಡೋದು ಎಂದು ಹೇಳಿದ್ದೇನೆ. ಈ ಬಾರಿ ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ. ಕಾರ್ಯಕರ್ತರಿಗೆ ಕೊಡೋದು ನಿರ್ಣಯ ಆಗುತ್ತದೆ ಎಂದರು. ಅನಿತಾ ಕುಮಾರಸ್ವಾಮಿ ಸ್ಪರ್ಧೆ ಪ್ರಶ್ನೆ ಇಲ್ಲ. ಈ ಹಿಂದೆ ಎರಡುಬಾರಿ ಪಕ್ಷದಲ್ಲಿ ಅಭ್ಯರ್ಥಿ ಇಲ್ಲದಕ್ಕೆ ಅನಿವಾರ್ಯ ಸ್ಪರ್ಧೆ ಮಾಡಿದ್ದರು. ಪಕ್ಷ ಸಂಘಟನೆಗೆ ಬೇಕಾದ್ರೆ ಹೋಗಿ ಬರುತ್ತಾರೆ. ಮುಂದೆ ಯಾವುದೇ ಕಾರಣಕ್ಕೂ ಅವರು ಅಭ್ಯರ್ಥಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ