ಕರ್ನಾಟಕ ಚುನಾವಣೆ: ಮೋದಿ ಅಲೆ ಬಿಜೆಪಿಗೆ ನೆರವಾಗಬಹುದೇ?

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯು ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ನಿರ್ಣಾಯಕವಾಗಿದೆ. ಏಕೆಂದರೆ ದೇಶದಲ್ಲಿ ರಾಜಕೀಯ ಸನ್ನಿವೇಶ ಹೇಗೆ ಬದಲಾಗುತ್ತದೆ ಎಂಬುದನ್ನು ಈ ಚುನಾವಣಾ ಫಲಿತಾಂಶ ನಿರ್ಧರಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯು ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ನಿರ್ಣಾಯಕವಾಗಿದೆ. ಏಕೆಂದರೆ ದೇಶದಲ್ಲಿ ರಾಜಕೀಯ ಸನ್ನಿವೇಶ ಹೇಗೆ ಬದಲಾಗುತ್ತದೆ ಎಂಬುದನ್ನು ಈ ಚುನಾವಣಾ ಫಲಿತಾಂಶ ನಿರ್ಧರಿಸುತ್ತದೆ. ಈ ವರ್ಷದ ಕೊನೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಿಗದಿಯಾಗಿದೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುವ ವಾತಾವರಣ ನಿರ್ಮಿಸಲು ಈ ಎರಡೂ ಪಕ್ಷಗಳು ಉತ್ತಮ ಪ್ರದರ್ಶನ ನೀಡಬೇಕಿದೆ. ಪ್ರಸ್ತುತ ದಕ್ಷಿಣದ ಏಕೈಕ ರಾಜ್ಯವಾಗಿ ಕರ್ನಾಟಕವನ್ನು ಗೆಲ್ಲಬೇಕು ಎಂದು ಬಿಜೆಪಿಗೆ ತಿಳಿದಿದೆ. ಈ ಗೆಲುವು ದಕ್ಷಿಣದಲ್ಲಿ ತಮ್ಮ ಪ್ರಭಾವ ಹರಡಲು ಮತ್ತು ಉತ್ತರ ಭಾರತದ ಪಕ್ಷ ಎಂಬ ಹಣೆಪಟ್ಟಿ ಕಳಚಲು ಬಿಜೆಪಿಗೆ ನೆರವಾಗಲಿದೆ. 

ರಾಜ್ಯದಲ್ಲಿಆಡಳಿತ ವಿರೋಧಿ ಅಲೆ ಇರುವುದು ಬಿಜೆಪಿ ನಾಯಕತ್ವಕ್ಕೆ ಗೊತ್ತಿದೆ. ಪ್ರತಿಪಕ್ಷಗಳ ಭ್ರಷ್ಟಾಚಾರದ ಆರೋಪಗಳು ಸಹ ಗೊತ್ತಿದೆ. ಸ್ಥಳೀಯ ಗುತ್ತಿಗೆದಾರರು ರಾಜ್ಯದ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಶೇ.40 ರಷ್ಟು ಕಮೀಷನ್ ಪಾವತಿಸಬೇಕಿತ್ತು ಎಂಬ ಆರೋಪಗಳನ್ನು ಅಷ್ಟು ಸುಲಭವಾಗಿ ಮರೆಮಾಚಲು ಸಾಧ್ಯವಿಲ್ಲ. ಆಡಳಿತ ಕಳಪೆಯಾಗಿದ್ದರಿಂದ ಬಿಜೆಪಿಯು ವಾಸ್ತವವಾಗಿ  ಹೋರಾಡಬೇಕಿದೆ. 

ಕಳಪೆ ಮೂಲಸೌಕರ್ಯ, ಹೆಚ್ಚುತ್ತಿರುವ ಭ್ರಷ್ಟಾಚಾರ, ಕೋಮು ಘಟನೆಗಳು ಮತ್ತು ಲವ್ ಜಿಹಾದ್‌ನಂತಹ ಅರ್ಥಹೀನ ವಿವಾದಗಳು ಮತ್ತು ಹಿಜಾಬ್ ನಿಷೇಧದಂತಹ ಅನೇಕ ಕಾರಣಗಳಿಂದ ಮತದಾರರು ಅತೃಪ್ತರಾಗಿದ್ದಾರೆ.
ಕಳೆದ 20 ವರ್ಷಗಳಲ್ಲಿ ರಾಜ್ಯದಲ್ಲಿ ಯಾವ ಪಕ್ಷವೂ ಸತತವಾಗಿ ಗೆದ್ದಿಲ್ಲ ಎಂಬುದೂ ಬಿಜೆಪಿಯನ್ನು ಚಿಂತೆಗೀಡು ಮಾಡಿದೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ಬಿಜೆಪಿಗೆ 125 ಸ್ಥಾನಗಳ ಅಗತ್ಯವಿದೆ. ಪ್ರಸ್ತುತ 119 ಶಾಸಕರನ್ನು ಹೊಂದಿದೆ.

ಆಂತರಿಕ ಪೈಪೋಟಿಯಿಂದ ಪಕ್ಷ ಮುನ್ನಡೆಯುತ್ತಿರುವುದರಿಂದ ಚುನಾವಣೆ ಸವಾಲಾಗಲಿದೆ ಎಂಬುದು ಬಿಜೆಪಿಗೆ ಗೊತ್ತಿದೆ. ಹಾಗಾಗಿಯೇ ವಿವಾದದ ಸುಳಿಯಲ್ಲಿ ಸಿಲುಕಿರುವ ಬಿಎಸ್ ಯಡಿಯೂರಪ್ಪ ಅವರ ಸ್ಥಾನಕ್ಕೆ ಬಂದಿರುವ ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಹೆಸರಿಸಿಲ್ಲ. ಹಾಗಾಗಿ, ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇರುವುದು ರಾಜ್ಯಕ್ಕೆ ಎಷ್ಟು ಮುಖ್ಯ ಎಂಬುದನ್ನು ಪುನರುಚ್ಚರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರದು ಗೇಮ್ ಪ್ಲಾನ್ ಆಗಿದೆ.

ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಹೇಳುವ ಪ್ರಕಾರ ಬಿಜೆಪಿ ತನ್ನ ಹಣಬಲವನ್ನು ಬಳಸಿಕೊಂಡು ಪ್ರಚಾರವನ್ನು ಚುರುಕುಗೊಳಿಸಲು ಮತ್ತು ಮತದಾರರನ್ನು ಓಲೈಸಲು ಸಾಮಾನ್ಯ ಧ್ರುವೀಕರಣ ತಂತ್ರಕ್ಕೆ ಹಿಂತಿರುಗಲು ಪ್ರಯತ್ನಿಸುತ್ತದೆ. ರೈತರು, ಅಲ್ಪಸಂಖ್ಯಾತರು, ದಲಿತರು, ಜಾತ್ಯತೀತ ಸಂಸ್ಥೆಗಳು, ಪ್ರಜಾಸತ್ತಾತ್ಮಕವಾಗಿ ಒಲವು ಹೊಂದಿರುವ ಸಂಸ್ಥೆಗಳು, ಸ್ವರಾಜ್ ಇಂಡಿಯಾ ಬೆಂಬಲಿಗರು ಮತ್ತು ಭಾರತ್ ಜೋಡೋ ಯಾತ್ರೆಯೊಂದಿಗೆ ಸಂಬಂಧ ಹೊಂದಿರುವವರನ್ನು ಒಳಗೊಂಡಿರುವ ಎದ್ದೇಳು ಕರ್ನಾಟಕ ಎಂಬ ಹೊಸ ಗುಂಪಿನೊಂದಿಗೆ ಬಿಜೆಪಿ ಸ್ಪರ್ಧಿಸಬೇಕಾಗಿದೆ.

ಬೊಮ್ಮಾಯಿ ಅವರ ಸಚಿವ ಸಂಪುಟದ ಅರ್ಧಕ್ಕೂ ಹೆಚ್ಚು ಮಂದಿ ಒಂದಲ್ಲ ಒಂದು ಬಾರಿ ನಿಷ್ಠೆಯನ್ನು ಬದಲಾಯಿಸಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಪಕ್ಷಾಂತರಿಗಳು ಮಹತ್ವದ ಪಾತ್ರ ವಹಿಸುತ್ತಾರೆ. ಚುನಾವಣಾ ದಿನಾಂಕಗಳನ್ನು ಘೋಷಿಸಿದ ನಂತರ, ಅನೇಕರು ತಮ್ಮ ಕ್ಷೇತ್ರಗಳಲ್ಲಿ ಬೀಸುತ್ತಿರುವ ಬಂಡಾಯದ ಗಾಳಿಯನ್ನು ಅರಿತಿದ್ದಾರೆ.  ಉನ್ನತ ಮಟ್ಟದ ಸಭೆಯಲ್ಲಿ, ಬಿಜೆಪಿ ನಾಯಕತ್ವವು ಉತ್ತರದ ರಾಜ್ಯಗಳ ಎಲ್ಲಾ ಉನ್ನತ ನಾಯಕರನ್ನು ಪ್ರಚಾರಕ್ಕೆ ಕರೆತರಲು ನಿರ್ಧರಿಸಿದೆ. ಗುಜರಾತ್‌ನಲ್ಲಿ ಮಾಡಿದಂತೆ ಕೇಂದ್ರ ಮತ್ತು ರಾಜ್ಯ ಸಚಿವರು, ಪ್ರಸಿದ್ಧ ಸಂಸದರು ಮತ್ತು ಶಾಸಕರನ್ನು ಸಹ ಸೆಳೆಯುತ್ತದೆ.

ಗುರುತಿಸಿರುವ 115 ಕ್ಷೇತ್ರಗಳ ಮೇಲೆ ತಮ್ಮ ಗೆಲುವಿನ ಅವಕಾಶವನ್ನು ಕೇಂದ್ರೀಕರಿಸುವುದು ಪಕ್ಷದ ತಂತ್ರವಾಗಿದೆ. ರಾಜ್ಯದಲ್ಲಿ ಆಂತರಿಕ ಸಮಸ್ಯೆಗಳು ಮತ್ತು ದುರ್ಬಲ ಆಡಳಿತ ವಿರುದ್ಧ ಹೋರಾಡುತ್ತಿರುವ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಭರವಸೆ ಹೊಂದಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. 12 ರಷ್ಟಿರುವ ಮುಸ್ಲಿಮರು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ವಿಭಜನೆಯಾಗಲಿದ್ದಾರೆ. ಜೆಡಿಎಸ್ 20 ಸ್ಥಾನ  ಗೆದ್ದರೂ ಅದು ಕಿಂಗ್‌ಮೇಕರ್ ಆಗಲಿದೆ. ಮುಸ್ಲಿಮರು ಸುಮಾರು 100 ಸ್ಥಾನಗಳಲ್ಲಿ ಪ್ರಭಾವ ಬೀರುವ ಪಾತ್ರವನ್ನು ವಹಿಸುತ್ತಾರೆ, ಆದರೆ ಕಾಂಗ್ರೆಸ್ ಅಥವಾ ಜೆಡಿಎಸ್‌ಗೆ ಲಾಭವಾಗುತ್ತದೆಯೇ ಎಂದು ನೋಡಬೇಕಾಗಿದೆ.

ಕಾಂಗ್ರೆಸ್ ಕೂಡ ಗುಂಪುಗಾರಿಕೆಯಿಂದ ನಲುಗಿ ಹೋಗಿದೆ. ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕಾಂಕ್ಷಿಗಳಾಗಿದ್ದಾರೆ.ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಎರಡು ಬಣಗಳು ಜಿದ್ದಾಜಿದ್ದಿಯಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ತಮಗೆ ತಾವೇ ಬೆಂಬಲವನ್ನು ಕೊಡುವುದರಲ್ಲಿ ನಿರತರಾಗಿದ್ದಾರೆ.

ಸದ್ಯ ಇಬ್ಬರೂ ಬಹಿರಂಗವಾಗಿ ವಾಗ್ವಾದ ನಡೆಸದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾತ್ಕಾಲಿಕ ಶಾಂತಿ ಸ್ಥಾಪನೆಗೆ ಮುಂದಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ಇದು ಮಾಡು ಇಲ್ಲವೇ ಮಡಿ ಚುನಾವಣೆಯಾಗಿದ್ದು, ಯಾರು ಬಹುಮತ ಪಡೆದು ಅಧಿಕಾರಕ್ಕೆ ಬರಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com