ಉತ್ತರ ಕರ್ನಾಟಕದ ಗೆಲುವಿಗೆ ಸವದಿ ಸ್ಟ್ರೋಕ್: ಬಿಜೆಪಿ ದಿಗ್ವಿಜಯದ ಕನಸಿಗೆ ಮಾಜಿ ಡಿಸಿಎಂ ಬ್ರೇಕ್; ಅಥಣಿಯಿಂದ ಕಾಂಗ್ರೆಸ್ ಟಿಕೆಟ್

ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಎಂಎಲ್‌ಸಿ ಲಕ್ಷ್ಮಣ್ ಸವದಿ ಬಿಜೆಪಿ ಜೊತೆಗಿನ ಬಾಂಧವ್ಯಕ್ಕೆ ಎಳ್ಳು ನೀರು ಬಿಟ್ಟು , ಕಾಂಗ್ರೆಸ್ ಸೇರ್ಪಡೆಯಾಗಿರುವುದು ಕೇಸರಿ ಪಕ್ಷಕ್ಕೆ ಭಾರೀ ಹೊಡೆತ ಉಂಟು ಮಾಡುವ ಸಾಧ್ಯತೆಯಿದೆ.
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ

ಬೆಳಗಾವಿ: ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಎಂಎಲ್‌ಸಿ ಲಕ್ಷ್ಮಣ್ ಸವದಿ ಬಿಜೆಪಿ ಜೊತೆಗಿನ ಬಾಂಧವ್ಯಕ್ಕೆ ಎಳ್ಳು ನೀರು ಬಿಟ್ಟು , ಕಾಂಗ್ರೆಸ್ ಸೇರ್ಪಡೆಯಾಗಿರುವುದು ಕೇಸರಿ ಪಕ್ಷಕ್ಕೆ ಭಾರೀ ಹೊಡೆತ ಉಂಟು ಮಾಡುವ ಸಾಧ್ಯತೆಯಿದೆ.

ಸವದಿ ಉಪಸ್ಥಿತಿಯು ಉತ್ತರ ಕರ್ನಾಟಕದ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಗಮನಾರ್ಹ ರಾಜಕೀಯ ಪರಿಣಾಮ ಬೀರಬಹುದು ಎಂಬ ನಿರೀಕ್ಷೆ ಕಾಂಗ್ರೆಸ್‌ನಲ್ಲಿದೆ. ವಿಶೇಷವಾಗಿ ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಮತದಾರರೊಂದಿಗೆ ಅವರ ಸಂಪರ್ಕ ಮತ್ತು ಬಾಂಧವ್ಯವು ಈ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಗವಾಡ, ಅಥಣಿ (ಉಪಚುನಾವಣೆ), ಸಿಂದಗಿ ಮತ್ತು ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನಲ್ಲಿ ಸವದಿ ಪ್ರಮುಖ ಪಾತ್ರ ವಹಿಸಿದ್ದಾರೆ.  ಸವದಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಕಾಗವಾಡ ಮತ್ತು ಅಥಣಿಯಲ್ಲಿ ಕಾಂಗ್ರೆಸ್‌ಗೆ ಉಪಯುಕ್ತವಾಗಲಿದೆ.  2004 ರ ನಂತರದ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದಾಗ ಬಿಜೆಪಿ ಹೆಚ್ಚಾಗಿ ಸವದಿ ಮೇಲೆ ಅವಲಂಬಿತವಾಗಿತ್ತು. ಅದಕ್ಕೂ ಮೊದಲು ಈ ಕ್ಷೇತ್ರಗಳಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಸವದಿ ಸಹಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಮೇಲೆ ಬಿಜೆಪಿ ತನ್ನ ಹಿಡಿತವನ್ನು ಸ್ಥಾಪಿಸಲು ಸಹಾಯ ಮಾಡಿದರು.

ವಿಜಯಪುರ, ಕಲಬುರ್ಗಿ ಕ್ಷೇತ್ರಗಳಲ್ಲೂ ಸವದಿ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಜನರು ಲಕ್ಷ್ಮಣ ಸವದಿ ಅಭಿಮಾನಿಗಳ ಸಂಘವನ್ನು ಅವರ ಗೌರವಾರ್ಥವಾಗಿ ಸ್ಥಾಪಿಸಲಾಗಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳ ಹಲವು ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡಿದ್ದು ಮಾತ್ರವಲ್ಲದೆ, ಮಹಾರಾಷ್ಟ್ರದ ನೆರೆಯ ಜಿಲ್ಲೆಗಳ ಹಲವು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿಯನ್ನೂ ವಹಿಸಿದ್ದರು.

ಉತ್ತರ ಕರ್ನಾಟಕ ಮತ್ತು ಪಶ್ಚಿಮ-ಮಹಾರಾಷ್ಟ್ರದಲ್ಲಿನ ಸಹಕಾರಿ ಚಳುವಳಿಯೊಂದಿಗಿನ ಅವರ ಒಡನಾಟದಿಂದಾಗಿ, ಸವದಿ ಮಹಾರಾಷ್ಟ್ರದ ಜನರೊಂದಿಗೆ, ವಿಶೇಷವಾಗಿ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳ ಜನರೊಂದಿಗೆ ತಮ್ಮ ಸಂಪರ್ಕ ಹೊಂದಿದ್ದಾರೆ.

ಸವದಿ ಕಾಂಗ್ರೆಸ್ ಪಕ್ಷದಲ್ಲಿರುವುದರಿಂದ ಪಕ್ಷಕ್ಕೆ ಲಾಭವಾಗುವುದಲ್ಲದೆ, ರಾಜಕೀಯವಾಗಿ ಬಿಜೆಪಿಗಿಂತ ಹಿಂದುಳಿದಿರುವ ಬೆಳಗಾವಿ ಜಿಲ್ಲೆಯ ಕ್ಷೇತ್ರಗಳಲ್ಲಿ ಪಕ್ಷವು ಪ್ರಬಲವಾಗಿ ಬೆಳೆಯಲು ಅವರ ಅನುಭವವು ಸಹಾಯ ಮಾಡುತ್ತದೆ ಎಂದು  ಕಾಂಗ್ರೆಸ್ ನಾಯಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಕಾಗವಾಡದ ಮಾಜಿ ಶಾಸಕ ರಾಜು ಕಾಗೆ ಮತ್ತು ಸವದಿ ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರೂ ಒಟ್ಟಿಗೆ ಈ ಹಿಂದೆ ಹಲವಾರು ಚುನಾವಣೆಗಳನ್ನು ಎದುರಿಸಿದ್ದಾರೆ. ಇಬ್ಬರೂ 1999 ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಮತ್ತು ಕಾಗವಾಡದಿಂದ ವಿಮಾನ ಚಿಹ್ನೆಯಲ್ಲಿ ಸ್ವತಂತ್ರರಾಗಿ ಸ್ಪರ್ಧಿಸಿದ್ದರು. ಇವರಿಬ್ಬರೂ ಅಲ್ಪ ಅಂತರದಲ್ಲಿ ಸೋಲು ಕಂಡಿದ್ದರು. ನಂತರ, ಸವದಿ ಮತ್ತು ಕಾಗೆ ಒಟ್ಟಿಗೆ ಬಿಜೆಪಿಗೆ ಸೇರ್ಪಡೆಗೊಂಡರು ಮತ್ತು 2004, 2008 ಮತ್ತು 2013 ರಲ್ಲಿ ಅಥಣಿ ಮತ್ತು ಕಾಗವಾಡದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು.

ಅಥಣಿ ರಾಜಕೀಯಕ್ಕೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಪ್ರವೇಶ ಹಾಗೂ 2018ರ ಚುನಾವಣೆಯಲ್ಲಿ ಪಂಚಮಸಾಲಿ ಲಿಂಗಾಯತರು ತೋರಿದ ಒಗ್ಗಟ್ಟು 2018ರ ವಿಧಾನಸಭೆ ಚುನಾವಣೆಯಲ್ಲಿ ಸವದಿ ಸೋಲಿಗೆ ಕಾರಣವಾಯಿತು.

ಇದೇ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಪಂಚಮಸಾಲಿ ಲಿಂಗಾಯತ ಮಹೇಶ್ ಕುಮಟಳ್ಳಿ ವಿರುದ್ಧ ಸವದಿ 2000 ಮತಗಳ ಅಂತರದಿಂದ ಸೋತರು. ಆದಾಗ್ಯೂ, ಸವದಿ ಬಿಜೆಪಿಗೆ ನಿಷ್ಠರಾಗಿ ಉಳಿದರು.

ಆಪರೇಷನ್ ಕಮಲದ ಮೂಲಕ ಬಿ ಎಸ್ ಯಡಿಯೂರಪ್ಪ ಸರ್ಕಾರ ರಚಿಸಿದಾಗ, ಬಿಜೆಪಿ ಆಶ್ಚರ್ಯಕರವಾಗಿ ಸವದಿ ಅವರನ್ನು ಎಂಎಲ್‌ಸಿ ಮಾಡಿ ಉಪಮುಖ್ಯಮಂತ್ರಿ ಪದವಿ ನೀಡಿತ್ತು. ಆದರೆ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗಿನಿಂದ ಅವರನ್ನು ಕಡೆಗಣಿಸುತ್ತಲೇ ಬಂದ ಬಿಜೆಪಿ, ಪಕ್ಷದ ಪ್ರಮುಖರು ಟಿಕೆಟ್ ನೀಡುವುದಾಗಿ ಭರವಸೆ ನೀಡಿದರೂ ಬರುವ ಚುನಾವಣೆಯಲ್ಲಿ ಅಥಣಿಯಿಂದ ಟಿಕೆಟ್ ನಿರಾಕರಿಸಿದೆ.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದ ಸವದಿ ಮೇ 10 ರ ಚುನಾವಣೆಗೆ ಮುಂಚಿತವಾಗಿ ಮೂಲೆಗುಂಪಾಗಿದ್ದಾರೆ. ತಮ್ಮ ರಾಜಕೀಯ ಜೀವನಕ್ಕೆ ಮರುಜೀವ ನೀಡಲು ಸವದಿ ಶುಕ್ರವಾರ ಕಾಂಗ್ರೆಸ್ ಸೇರುವ ನಿರ್ಧಾರ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ, ರಾಜ್ಯ ಕಾಂಗ್ರೆಸ್ ಸವದಿ ಹಾಕಿರುವ ಎಲ್ಲಾ "ಷರತ್ತುಗಳನ್ನು" ಒಪ್ಪಿಕೊಂಡು ಕಾಂಗ್ರೆಸ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದೆ ಎಂದು ತಿಳಿದು ಬಂದಿದೆ.

ಅಥಣಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಎಂಎಲ್ ಸಿ ಸವದಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬೆನ್ನಲ್ಲೇ ಅವರನ್ನು ಅಥಣಿಯಿಂದ ಬಿಜೆಪಿಯ ಮಹೇಶ ಕುಮಟಳ್ಳಿ ವಿರುದ್ಧ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com