ಬಿಜೆಪಿಯಲ್ಲಿನ ಕಚ್ಚಾಟದಿಂದ ಕಾಂಗ್ರೆಸ್ಗೆ 150 ಸ್ಥಾನ ಬಂದರೂ ಅಚ್ಚರಿಯಿಲ್ಲ, ನಾನು ಮುಖ್ಯಮಂತ್ರಿ ಹುದ್ದೆಗೆ ಅರ್ಹ: ರಾಮಲಿಂಗಾ ರೆಡ್ಡಿ
ಚಿಕ್ಕಬಳ್ಳಾಪುರ: ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಬಂಡಾಯ ಮತ್ತು ಅದರ ಈಗಿನ ಪರಿಸ್ಥಿತಿ ನೋಡಿದರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿಗೆ 50-60 ಸ್ಥಾನ ಬಂದರೆ ಹೆಚ್ಚು ಎಂದು ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ವಿವಿಧ ಪಕ್ಷಗಳ ಮುಖಂಡರುಗಳನ್ನು ಯಡಿಯೂರಪ್ಪ ಬಿಜೆಪಿಗೆ ಕರೆ ತಂದಿದ್ದರು. ಆದರೆ ಈ ಬಾರಿ ಬಿಜೆಪಿಯ ಇನ್ನೂ ಹಲವು ನಾಯಕರು ಕಾಂಗ್ರೆಸ್ ಸೇರಲಿದ್ದಾರೆ. ಬಿಜೆಪಿಗೆ ಭವಿಷ್ಯವಿಲ್ಲ ಎಂದು ನಾಯಕರಿಗೆ ಮನವರಿಕೆಯಾಗಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಬರುತ್ತದೆ. ಕಾಂಗ್ರೆಸ್ 120ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಬಿಜೆಪಿ ಕಚ್ಚಾಟದಿಂದ ಕಾಂಗ್ರೆಸ್ಗೆ 150 ಸ್ಥಾನ ಬಂದರೂ ಅಚ್ಚರಿಯಿಲ್ಲ ಎಂದಿದ್ದಾರೆ.
ಸಿಎಂ ಆಗುವ ಆಸೆಯಿದೆ: ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಿದೆ. ಈಗಾಗಲೇ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ನಡುವೆ ಪೈಪೋಟಿಯಿದೆ. ಇನ್ನು ಇದೀಗ ತಾನೇ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಆಕಾಂಕ್ಷಿ ಎಂದು ಹೇಳಿದರೂ ಅಚ್ಚರಿಯಿಲ್ಲ. ಇನ್ನೂ ಹಲವು ನಾಯಕರು ಸಿಎಂ ಹುದ್ದೆಗೆ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಇದೀಗ ರಾಮಲಿಂಗಾ ರೆಡ್ಡಿ ಕೂಡ ಅದೇ ಮಾತನ್ನು ಹೇಳುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ನಾನು ಸೀನಿಯರ್. ನಾನು ಮುಖ್ಯಮಂತ್ರಿ ಹುದ್ದೆಗೆ ಅರ್ಹನಾಗಿದ್ದೇನೆ. ಆದರೆ ಸ್ಪರ್ಧೆಯಲ್ಲಿ ಇಲ್ಲ. ಸಿಎಂ ಆಸೆ ಇಟ್ಟುಕೊಂಡಿರುವವರು ಆಗಲಿ. ನಮಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಅಷ್ಟೆ ಎಂದು ಹೇಳಿದರು.