ರಾಜಕೀಯ ಚದುರಂಗದಾಟ:'ಕಿಂಗ್ ಮೇಕರ್' ಲಿಂಗಾಯತ ಸಮುದಾಯ ಒಲೈಸಿಕೊಳ್ಳಲು ಬಿಜೆಪಿ ಕಾಂಗ್ರೆಸ್ ಪೈಪೋಟಿ!

224 ಸದಸ್ಯ ಬಲದ ವಿಧಾನಸಭೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಹಾಗೂ  ರಾಜ್ಯದ ಜನಸಂಖ್ಯೆಯ ಶೇ.18ರಷ್ಟಿದ್ದು, ಕಿಂಗ್ ಮೇಕರ್ ಆಗಿರುವ ಲಿಂಗಾಯತ ಸಮುದಾಯವನ್ನು ಒಲಿಸಿಕೊಳ್ಳುವ ಗುರಿಯೊಂದಿಗೆ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪೈಪೋಟಿಗೆ ಬಿದಿದ್ದು, ಅಬ್ಬರದ ಪ್ರಚಾರದಲ್ಲಿ ತೊಡಗಿವೆ. 
ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ
ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ

ಬೆಂಗಳೂರು: 224 ಸದಸ್ಯ ಬಲದ ವಿಧಾನಸಭೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಹಾಗೂ  ರಾಜ್ಯದ ಜನಸಂಖ್ಯೆಯ ಶೇ.18ರಷ್ಟಿದ್ದು, ಕಿಂಗ್ ಮೇಕರ್ ಆಗಿರುವ ಲಿಂಗಾಯತ ಸಮುದಾಯವನ್ನು ಒಲಿಸಿಕೊಳ್ಳುವ ಗುರಿಯೊಂದಿಗೆ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪೈಪೋಟಿಗೆ ಬಿದಿದ್ದು, ಅಬ್ಬರದ ಪ್ರಚಾರದಲ್ಲಿ ತೊಡಗಿವೆ. 

ಕಾಂಗ್ರೆಸ್ ನಾಯಕ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿತ್ತು ಮತ್ತು ಅದರ ಮತ ಬ್ಯಾಂಕ್ ಎಂದು ಪರಿಗಣಿಸಲ್ಪಟ್ಟಿತು. ಲಿಂಗಾಯತ ಸಮುದಾಯದಿಂದ ಬಂದಿದ್ದ ಪಾಟೀಲರನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಲಿಂಗಾಯತ ಸಮುದಾಯದ ಬೆಂಬಲವನ್ನು ಕಾಂಗ್ರೆಸ್ ಕಳೆದುಕೊಂಡಿತ್ತು.

ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿ ಈ ಸಮುದಾಯ ಬಿಜೆಪಿ ಬೆಂಬಲಿಸಿದೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಯಡಿಯೂರಪ್ಪ ಪಕ್ಷ ತೊರೆದ ನಂತರದ ಚುನಾವಣೆಯಲ್ಲಿ ಬಿಜೆಪಿ ಸೋತಿತು. ಆದರೆ, ಅವರು ಮತ್ತೆ ಬಿಜೆಪಿ ತೆಕ್ಕೆಗೆ ಬಂದಾಗ, ಲಿಂಗಾಯತ ಸಮುದಾಯವು ಮತ್ತೆ ಬಿಜೆಪಿಯನ್ನು ಬೆಂಬಲಿಸಿತು. ನಂತರದ ಚುನಾವಣೆಯಲ್ಲಿ ಅದು ಅಧಿಕಾರಕ್ಕೆ ಬಂದಿತು. ಲಿಂಗಾಯತ ಸಮುದಾಯವೇ ಕಿಂಗ್ ಮೇಕರ್ ಎಂಬುದನ್ನು ರಾಜ್ಯದ ರಾಜಕೀಯ ಇತಿಹಾಸ ತೋರಿಸುತ್ತದೆ.

2021ರಲ್ಲಿ ಮುಖ್ಯಮಂತ್ರಿ ಬದಲಾವಣೆಯ ನಿರ್ಧಾರ ಕೈಗೊಂಡ ನಂತರ ಯಡಿಯೂರಪ್ಪ ಅವರ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಯಿತು. ಈ ಅಂಶದಿಂದಲೇ ಸಮುದಾಯದ ರಾಜಕೀಯ ಶಕ್ತಿಯನ್ನು ಅಳೆಯಬಹುದು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೂ, ಅವರ ಪ್ರಭಾವ ಅರಿತು ಬಿಜೆಪಿ  ಪಕ್ಷದ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ಮಾಡಿದೆ. ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಾರ್ವಜನಿಕ ವೇದಿಕೆಗಳಲ್ಲಿ ಅವರಿಗೆ ಗೌರವವನ್ನು ತೋರಿಸುವುದನ್ನು ಮುಂದುವರೆಸಿದ್ದಾರೆ.

ಮತ್ತೊಂದೆಡೆ, ಲಿಂಗಾಯತ ಸಮುದಾಯವನ್ನು ಓಲೈಸಲು ಕಾಂಗ್ರೆಸ್ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಲಿಂಗಾಯತ ಸಮುದಾಯದಿಂದ ಬಂದಿರುವ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರು ಕೇಸರಿ ಪಕ್ಷವನ್ನು ತೊರೆಯಲು ನಿರ್ಧರಿಸಿದ ತಕ್ಷಣ ಅವರನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ನಿರಾಶೆಗೊಂಡು ಬಿಜೆಪಿ ತೊರೆದ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ ಸೇರ್ಪಡೆ ಮಾಡಿಕೊಂಡಿತು. ವಾಸ್ತವವಾಗಿ ಈ ನಡೆಯೊಂದಿಗೆ ಕಾಂಗ್ರೆಸ್ ಬಿಜೆಪಿಯನ್ನು "ಲಿಂಗಾಯತ ವಿರೋಧಿ" ಎಂದು ಬಿಂಬಿಸುವ ಅಭಿಯಾನವನ್ನು ಪ್ರಾರಂಭಿಸಿದೆ.

ಶೆಟ್ಟರ್  ಬಿಜೆಪಿ ತೊರೆದ ನಂತರ ಯಡಿಯೂರಪ್ಪ ಅವರ ಮನೆಯಲ್ಲಿ ‘ಲಿಂಗಾಯತ ಮುಖ್ಯಮಂತ್ರಿ’ ಅಭಿಯಾನ ನಡೆಸಲು ನಿರ್ಧರಿಸಲಾಯಿತು. ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕರು, ಲಿಂಗಾಯತ ಸಮುದಾಯವು ಲಿಂಗಾಯತ ನಾಯಕ ಮುಖ್ಯಮಂತ್ರಿಯಾಗಬೇಕೆಂದು ಬಯಸಿದರೆ, ಕೇಸರಿ ಪಕ್ಷಕ್ಕೆ ಮತ ನೀಡಿ ಎಂದು ಹೇಳಿದ್ದಾರೆ. ಕಳೆದ 50 ವರ್ಷಗಳಲ್ಲಿ, 1967 ರಿಂದ, ಒಂಬತ್ತು ತಿಂಗಳ ಕಾಲ ವೀರೇಂದ್ರ ಪಾಟೀಲ್ ಅವರನ್ನು ಹೊರತುಪಡಿಸಿ ಯಾವುದೇ ಲಿಂಗಾಯತರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿಲ್ಲ. ಇದು ಲಿಂಗಾಯತ ಸಮುದಾಯದ ಮತದಾರರಿಗೆ ಸ್ಪಷ್ಟ ರಾಜಕೀಯ ಸಂದೇಶವಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ಕರ್ನಾಟಕ ರಾಜಕೀಯ ಅಂಕಿಅಂಶವೆಂದರೆ ರಾಜ್ಯದ ಜನಸಂಖ್ಯೆಯ ಶೇ. 18 ರಷ್ಟಿರುವ  ಲಿಂಗಾಯತ ಸಮುದಾಯವು ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿದೆ. ವಿಧಾನಸಭೆಯಲ್ಲಿ ಸುಮಾರು 100 ಸ್ಥಾನಗಳ ಕೀಲಿಕೈಯನ್ನು ಲಿಂಗಾಯತರು ಹೊಂದಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ 60 ಶಾಸಕರು ಲಿಂಗಾಯತ ಸಮುದಾಯದವರಾಗಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com