ಸಿ ಟಿ ರವಿ ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಯಾಗಬೇಕು ಹೇಳಿಕೆ: ಕೆ ಎಸ್ ಈಶ್ವರಪ್ಪ ಯೂಟರ್ನ್!

ಚಿಕ್ಕಮಗಳೂರಿನ ಕಡೂರು ತಾಲ್ಲೂಕಿನ ನಿಡಘಟ್ಟದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮುಂದಿನ ಮುಖ್ಯಮಂತ್ರಿಯನ್ನಾಗಿ ಸಿ ಟಿ ರವಿಯವರನ್ನು ಮಾಡಬೇಕು ಎಂದು ಮತದಾರರನ್ನು, ಬಿಜೆಪಿ ಕಾರ್ಯಕರ್ತರನ್ನು ಮಾಜಿ ಸಚಿವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಒತ್ತಾಯಿಸಿದ್ದರು.
ಕೆ ಎಸ್ ಈಶ್ವರಪ್ಪ, ಸಿಟಿ ರವಿ(ಸಂಗ್ರಹ ಚಿತ್ರ)
ಕೆ ಎಸ್ ಈಶ್ವರಪ್ಪ, ಸಿಟಿ ರವಿ(ಸಂಗ್ರಹ ಚಿತ್ರ)

ಚಿಕ್ಕಮಗಳೂರು: ಚಿಕ್ಕಮಗಳೂರಿನ ಕಡೂರು ತಾಲ್ಲೂಕಿನ ನಿಡಘಟ್ಟದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮುಂದಿನ ಮುಖ್ಯಮಂತ್ರಿಯನ್ನಾಗಿ ಸಿ ಟಿ ರವಿಯವರನ್ನು ಮಾಡಬೇಕು ಎಂದು ಮತದಾರರನ್ನು, ಬಿಜೆಪಿ ಕಾರ್ಯಕರ್ತರನ್ನು ಮಾಜಿ ಸಚಿವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಒತ್ತಾಯಿಸಿದ್ದರು.

ಈಶ್ವರಪ್ಪನವರ ಈ ಹೇಳಿಕೆ ಬಿಜೆಪಿಯಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಸಿ.ಟಿ.ರವಿ ಪಡೆದಿರುವುದು ನಮ್ಮ ಪುಣ್ಯ. ತನ್ನ ಕ್ಷೇತ್ರ ಬಿಟ್ಟು ಪೂರ್ಣ ಬಹುಮತದ ಸರ್ಕಾರಕ್ಕೆ ಓಡಾಡುತ್ತಿದ್ದಾರೆ. ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರೋದು ನಮ್ಮ ಹೆಮ್ಮೆ. ಸಿ.ಟಿ.ರವಿ ಹಿಂದೂ ಹುಲಿ ಎಂದೇ ಖ್ಯಾತಿಯಾಗಿದ್ದಾರೆ. ಚಿಕ್ಕಮಗಳೂರಿನಿಂದ ಸಿ ಟಿ ರವಿ ಅವರನ್ನು ಗೆಲ್ಲಿಸಿ, ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಇಂಗಿತ ವ್ಯಕ್ತಪಡಿಸಿದರು.

ಮೊನ್ನೆ ಮೈಸೂರಿನಲ್ಲಿ ಮಾತನಾಡಿದ್ದ ಸಿ.ಟಿ. ರವಿ ಸಿಎಂ ಆಗುವ ಇಂಗಿತವನ್ನು ಹೊರಹಾಕಿದ್ದರು. ನಿನ್ನೆ ಈಶ್ವರಪ್ಪ ಬಹಿರಂಗ ಸಭೆಯಲ್ಲೇ ಸಿಎಂ ಆಗಲಿ ಎನ್ನುವ ಹೇಳಿಕೆ ನೀಡಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ವ ಪಡೆದುಕೊಂಡಿತ್ತು.

ಇದಕ್ಕೆ ನಿನ್ನೆ ಸಾಯಂಕಾಲ ಸ್ಪಷ್ಟನೆ ನೀಡಿರುವ ಈಶ್ವರಪ್ಪ, ಸಿ.ಟಿ.ರವಿ ಅವರು ಒಳ್ಳೆಯ ನಾಯಕ, ಆದರೆ ಸಿಎಂ ಅಭ್ಯರ್ಥಿ ಯಾರು ಎಂದು ಹೇಳುವುದು ನಮ್ಮ ಅಧಿಕಾರ ವ್ಯಾಪ್ತಿಯಿಂದ ಹೊರಗಿದೆ ಎಂದಿದ್ದಾರೆ.ಸಿ.ಟಿ.ರವಿ ಒಬ್ಬ ಒಳ್ಳೆಯ ನಾಯಕ. ಚಿಕ್ಕಮಗಳೂರಿನಲ್ಲಿ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಅವರ ಬಗ್ಗೆ ನಾನೇನೂ ಹೇಳಿಲ್ಲ. ಅಂತಹ ಹೇಳಿಕೆ ನೀಡುವ ಅಧಿಕಾರ ನನಗಿಲ್ಲ. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸುವ ಅಧಿಕಾರ ತನಗಿಲ್ಲ ಎಂದು ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಆದರೆ, ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಾಗಿರುವ ಸಿ.ಟಿ.ರವಿ ಅವರು ರಾಜ್ಯದ ಭಾವಿ ಮುಖ್ಯಮಂತ್ರಿಯಾಗುವ ಎಲ್ಲ ಗುಣಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಮೇ 10 ರಂದು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com