ಪತ್ರಕ್ಕೆ ಶಾಸಕರು ಕ್ಷಮೆ ಕೇಳಿಲ್ಲ: ಉಲ್ಟಾ ಹೊಡೆದ ಡಾ. ಜಿ.ಪರಮೇಶ್ವರ
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯಲ್ಲಿ ಕೆಲವು ಶಾಸಕರು ಕ್ಷಮೆಯಾಚಿಸಿದ್ದಾರೆ ಎಂಬ ತಮ್ಮ ಹೇಳಿಕೆಯಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ ಸೋಮವಾರ ಹಿಂದೆ ಸರಿದಿದ್ದಾರೆ.
‘ಸಿಎಲ್ಪಿ ಸಭೆಗೆ ಒತ್ತಾಯಿಸಿ ಪತ್ರ ಬರೆದಿದ್ದಕ್ಕೆ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಲ್ಲಿ ಕ್ಷಮೆಯಾಚಿಸಿದ್ದಾರೆ’ ಎಂದು ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಿಎಲ್ಪಿ ಸಭೆಗೆ ಸಿಎಂಗೆ ಪತ್ರ ಬರೆದಿದ್ದ ಆಳಂದ ಶಾಸಕ ಬಿ.ಆರ್.ಪಾಟೀಲ್ ಕ್ಷಮೆ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಯಾರೂ ಕ್ಷಮೆ ಕೇಳಲಿಲ್ಲ, ಮತ್ತು ಕ್ಷಮೆಯಾಚಿಸಲು ಯಾರೂ ಹೇಳಲಿಲ್ಲ. ಸಿಎಲ್ಪಿ ಸಭೆಗೆ ಒತ್ತಾಯಿಸುವುದು ತಮ್ಮ ಉದ್ದೇಶ ಎಂದು ಅವರು ಹೇಳಿದ್ದರು, ಇದು ಪ್ರತಿಯೊಬ್ಬ ಶಾಸಕನ ಹಕ್ಕು. ಈ ನಿಟ್ಟಿನಲ್ಲಿ ಹೆಚ್ಚಿನ ವ್ಯಾಖ್ಯಾನ ಅಗತ್ಯವಿಲ್ಲ' ಎಂದು ಪರಮೇಶ್ವರ ಸಮರ್ಥಿಸಿಕೊಂಡರು.
545 ಪಿಎಸ್ ಐ ಗಳ ನೇಮಕಾತಿ ಹಗರಣದಲ್ಲಿ ಕೆಲವು ಜನ ಶಾಮೀಲಾಗಿದ್ದು, ತನಿಖೆ ಜಾರಿಯಲ್ಲಿದೆ. ಏತನ್ಮಧ್ಯೆ, ಇನ್ನೂ 400 ಕ್ಕಿಂತ ಹೆಚ್ಚು ಪಿಎಸ್ ಐಗಳ ನೇಮಕಾತಿಗೆ ಇಲಾಖೆಯಿಂದ ಪ್ರಸ್ತಾವನೆ ಬಂದಿದೆ, ಅಂದರೆ ಸುಮಾರು ಸಾವಿರಕ್ಕೂ ಹೆಚ್ಚು ಪಿಎಸ್ ಗಳ ನೇಮಕಾತಿ ಮಾಡಬೇಕಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.
ಆದರೆ, ತನಿಖೆ ಪೂರ್ಣಗೊಳ್ಳದ ಹೊರತು ನೇಮಕಾತಿ ಪ್ರಕ್ರಿಯೆಯನ್ನು ಶುರುಮಾಡಲು ಬರೋದಿಲ್ಲ ಹಾಗಾಗಿ ತನಿಖೆ ಮುಗಿಯುವವರೆಗೆ ಕಾಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ತಲೆದೋರಿದೆ ಎಂದು ಗೃಹ ಸಚಿವರು ಹೇಳಿದರು. ತನಿಖೆ ಮುಗಿಯುವ ಮೊದಲು ಪ್ರಕ್ರಿಯೆ ಶುರುಮಾಡಿದರೆ ಸೇವಾ ಜೇಷ್ಠ್ಯತೆಯ ಸಮಸ್ಯೆ ಉದ್ಭವಿಸುತ್ತದೆ, ಆದರೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಆತಂಕಪಡುವ ಅಗತ್ಯವಿಲ್ಲ ಎಂದು ಪರಮೇಶ್ವರ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ