ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಮತ್ತೆ ಪೆನ್ಡ್ರೈವ್ ಸ್ಪೋಟಗೊಂಡಿದೆ, ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸಿಡಿಸಿದ್ದ ಪೆನ್ಡ್ರೈವ್ ಬಾಂಬ್ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಕುಮಾರಸ್ವಾಮಿ ಅವರ ಪೆನ್ ಡ್ರೈವ್ನಲ್ಲಿ ಏನಿರಬಹುದು ಎನ್ನುವ ಕುತೂಹಲ ಜನರಲ್ಲಿ ಇದ್ದರೆ, ಆಡಳಿತರೂಢ ಸರ್ಕಾರಕ್ಕೆ ಆತಂಕಕ್ಕೆ ಕಾರಣವಾಗಿತ್ತು.
ಇದೀಗ ಜೆಡಿಎಸ್ ಹಾಗೂ ಬಿಜೆಪಿಯವರ ಪೆನ್ ಡ್ರೈವ್ಗೆ ಪ್ರತಿಯಾಗಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪೆನ್ ಡ್ರೈವ್ ಬಾಂಬ್ ಸಿಡಿಸಿದ್ದಾರೆ. ಕುಮಾರಸ್ವಾಮಿ ಪೆನ್ ಡ್ರೈವ್ ನಲ್ಲಿ ಏನಿದೆಯೋ ಅದಕ್ಕೆ ಸರಿಸಮನಾಗಿ ನಮ್ಮ ಪೆನ್ ಡ್ರೈವ್ ನಲ್ಲೂ ದಾಖಲೆ ಇದೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ನನ್ನ ಹತ್ತಿರ ಪೆನ್ಡ್ರೈವ್ ಇರೋದು ಕಟು ಸತ್ಯ. ಸಂದರ್ಭ ಬಂದಾಗ ರಿಲೀಸ್ ಮಾಡುತ್ತೇನೆ ಎಂದು ಮಾಜಿ ಡಿಸಿಎಂ ಹಾಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಯ ಸಂದರ್ಭ ಬಂದಾಗ ಪೆನ್ ಡ್ರೈವ್ ಹೊರಬರುತ್ತದೆ. ನನ್ನ ಮೇಲೆ ಎಷ್ಟು ಒತ್ತಡ ಹೆಚ್ಚಾಗುತ್ತದೆಯೋ ಅಷ್ಟು ಬೇಗ ರಿಲೀಸ್ ಮಾಡುತ್ತೇನೆ. ಪೆನ್ ಡ್ರೈವ್ ಯಾವ ಪಕ್ಷಕ್ಕೆ ಸೇರಿದ್ದು ಎಂಬುದು ಬಹಿರಂಗವಾದ ಬಳಿಕ ಗೊತ್ತಾಗಲಿದೆ. ಅಲ್ಲಿಯವರೆಗೆ ಕಾದು ನೋಡಿ ಎಂದರು.
ಈ ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿಯೇ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಆಗಿದೆ. ಇಂತಹ ಸಾಮಾನ್ಯ ಜ್ಞಾನವೂ ಇಲ್ಲದೆ ಮಾತನಾಡುವುದು ಹಾಸ್ಯಾಸ್ಪದ ಎಂದು ಶಾಸಕ ಲಕ್ಷ್ಮಣ ಸವದಿ ಅವರು ಮಾಜಿ ಶಾಸಕ ಮಹೇಶ್ ಕುಮಟಳ್ಳಿ ಆರೋಪಕ್ಕೆ ತಿರುಗೇಟು ನೀಡಿದರು.
Advertisement