ಕಾಂಗ್ರೆಸ್ ಭಿನ್ನಮತ ಜಗಜ್ಜಾಹೀರು: ಸುಧಾಮ್ ದಾಸ್‌ ನಾಮನಿರ್ದೇಶನಕ್ಕೆ ಆಕ್ಷೇಪ; ಖರ್ಗೆಗೆ ನಾಲ್ವರು ದಲಿತ ಸಚಿವರ ಪತ್ರ!

ನಿವೃತ್ತ ಇ.ಡಿ. ಅಧಿಕಾರಿ ಸುಧಾಮದಾಸ್‌ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಸಮುದಾಯದ ನಾಲ್ವರು ಸಚಿವರು ಆಕ್ರೋಶ ವ್ಯಕ್ತಪಡಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ನಿವೃತ್ತ ಇ.ಡಿ. ಅಧಿಕಾರಿ ಸುಧಾಮದಾಸ್‌ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಸಮುದಾಯದ ನಾಲ್ವರು ಸಚಿವರು ಆಕ್ರೋಶ ವ್ಯಕ್ತಪಡಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆದಿದ್ದಾರೆ. ಇದು ಕಾಂಗ್ರೆ ಸ್‌ ನೊಳಗೆ ಉದ್ಭವಿಸಿರುವ ಭಿನ್ನ ಮತವನ್ನು ಜಗಜ್ಜಾಹೀರು ಮಾಡಿದೆ.

ಗೃಹ ಸಚಿವ ಡಾ. ಪರಮೇಶ್ವರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ, ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆದಿದ್ದಾರೆ. ಇತ್ತೀಚೆಗೆ ಪಕ್ಷಕ್ಕೆ ಸೇರಿದ ಸುಧಾಮ್‌ ದಾಸ್‌ ಅವರ ಹೆಸರನ್ನು ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಹೊರಟಿರುವ ಬಗ್ಗೆ  ನಾಲ್ವರು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದು, ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡೆಯನ್ನು ಪ್ರಶ್ನಿಸಿದಂತಾಗಿದೆ.

ಮಾಜಿ ಸಚಿವರಾದ ಎಂ.ಆರ್‌. ಸೀತಾರಾಂ, ಉಮಾಶ್ರೀ ಹಾಗೂ ಸುಧಾಮ್‌ ದಾಸ್‌ ಅವರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಮೂರು ದಿನಗಳ ಹಿಂದೆಯೇ ರಾಜ್ಯಪಾಲರಿಗೆ ಪತ್ರ ಕಳುಹಿಸಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಈ ಪ್ರಕ್ರಿಯೆಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಪ್ರಾತಿನಿಧ್ಯವನ್ನು ಪಾಲಿಸಿಲ್ಲ ಎಂದು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಇದರಿಂದ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಮತ್ತೂಂದು ಉದಾಹರಣೆ ದೊರೆತಂತಾಗಿದೆ. ವಿಶೇಷವಾಗಿ ಸುಧಾಮ್‌ ದಾಸ್‌ ನಾಮನಿರ್ದೇಶನದ ಬಗ್ಗೆ ಈ ನಾಲ್ವರು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದ್ದು, ಅವರ ಬದಲು ದಲಿತ ಸಮುದಾಯಕ್ಕೆ ಸೇರಿದ ಹಿರಿಯರಿಗೆ ಅವಕಾಶ ನೀಡಬೇಕಿತ್ತು ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ದಾಸ್‌ ಅವರನ್ನು ಸಮಾಜ ಸೇವಾ ಕೋಟಾದಡಿ ನೇಮಕ ಮಾಡಲು ಚಿಂತನೆ ನಡೆದಿದೆ.  ಪಕ್ಷಕ್ಕೆ ದಾಸ್ ಅವರ ಕೊಡುಗೆ ಬಹುತೇಕ "ಶೂನ್ಯ" ಆಗಿರುವುದರಿಂದ ಅವರು ನಾಮನಿರ್ದೇಶನಕ್ಕೆ ತಮ್ಮ ಆಕ್ಷೇಪ ವ್ಯಕ್ತವಾಗಿದೆ.

ಇಲ್ಲಿಯವರೆಗೆ, ರಾಜ್ಯ ನಾಯಕರು ಅಥವಾ ಹೈಕಮಾಂಡ್ ಈ ವಿಷಯವನ್ನು ನಮ್ಮೊಂದಿಗೆ ಚರ್ಚಿಸಿಲ್ಲ. ನಾವು ತುಂಬಾ ನಿರಾಶೆಗೊಂಡಿದ್ದೇವೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಾದೇಶಿಕ ಸಮತೋಲನ ಮತ್ತು ಸಾಮಾಜಿಕ ಎಂಜಿನಿಯರಿಂಗ್  ಅನುಸರಿಸಬೇಕು ಎಂದು ನಾವು  ಒತ್ತಾಯಿಸುತ್ತೇವೆ ಎಂದು ನಾಲ್ವರು ಸಚಿವರು ಪತ್ರದಲ್ಲಿ ವಿವರಿಸಿದ್ದಾರೆ. ಆದರೆ ಈಗಾಗಲೇ ವರಿಷ್ಠರು ನಿರ್ಧಾರ ತೆಗೆದುಕೊಂಡಿದ್ದಾರೆ ಮತ್ತು ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು  ಹೈಕಮಾಂಡ್‌ಗೆ ಆಪ್ತರಾಗಿರುವ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಈ ಸಂಬಂಧ ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕೊನೆಗೂ ದಲಿತ ನಾಯಕರು ಎಚ್ಚರಗೊಂಡಿದ್ದಾರೆ. ಸಿದ್ದರಾಮಯ್ಯ ಅವರ ದಲಿತ ವಿರೋಧಿ ನಡೆಯನ್ನು ಪ್ರಶ್ನಿಸಿ ಹೈಕಮಾಂಡ್‌ಗೆ ಸುದೀರ್ಘವಾದ ಪತ್ರ ಬರೆದಿದ್ದಾರೆ. ಪತ್ರ ಬರೆದ ಗುತ್ತಿಗೆದಾರರ ವಿರುದ್ಧ ದೂರುಕೊಟ್ಟು ವಿಚಾರಣೆಗೆ ಒಳಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಅವರು ಇದೀಗ ಯಾವ ಠಾಣೆಯಲ್ಲಿ ಈ ಬಹಿರಂಗ ಪತ್ರದ ವಿರುದ್ಧ ದೂರು ಕೊಡುವವರು ಎಂದು ಕುತೂಹಲ ಮೂಡಿಸಿದೆ ಎಂದು ಟಾಂಗ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com