'ಕುರುಬ'ನಿಲ್ಲದ ಕುರಿಗಳ ಮಂದೆ: ಬಿಎಸ್ ವೈ ಬಿಟ್ಟರೇ ಪಕ್ಷಕ್ಕೆ ಶೂನ್ಯವೇ? ಮುನ್ನುಗ್ಗುವ ಎದೆಗಾರಿಕೆ ರಾಜ್ಯ ಬಿಜೆಪಿ ನಾಯಕರಿಗೆ ಇಲ್ಲವೇ?

ಬಿಜೆಪಿಯ ಒಂದಷ್ಟು ಶಾಸಕರು ಕಾಂಗ್ರೆಸ್‌ ಕದ ತಟ್ಟುತ್ತಿದ್ದಾರೆ. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕೊನೇ ಹಂತದಲ್ಲಿ ಯಡಿಯೂರಪ್ಪ ಅವರೇ ಮಧ್ಯ ಪ್ರವೇಶಿಸಬೇಕಾಗಿದೆ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಅವರ ಮಾತು ಕೇಳಿ ಪಕ್ಷದಲ್ಲಿ ಉಳಿಯಲು ಈ ಶಾಸಕರಿಗೆ ಯಾವುದೇ ಪ್ರಬಲ ಕಾರಣವಿಲ್ಲ.
ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ

ಬೆಂಗಳೂರು: 2019 ರಲ್ಲಿ  ಕಾಂಗ್ರೆಸ್- ಜೆಡಿಎಸ್ ತೊರೆದು ತಮ್ಮ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಶಾಸಕರು ಬಿಜೆಪಿ ತೊರೆಯದಂತೆ ನಿಗಾ ವಹಿಸುವಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕೇಳಿಕೊಂಡಿದ್ದ ಬಿಜೆಪಿ ಹೈಕಮಾಂಡ್, ಈಗ ಬಿಎಸ್ ವೈ ಮೇಲೆ ಸಂಪೂರ್ಣವಾಗಿ ಅವರ ಮೇಲೆ ಅವಲಂಬಿತವಾಗಿಲ್ಲ. ಪಕ್ಷವನ್ನು ಸುಸೂತ್ರವಾಗಿ ನಡೆಸಲು ಕೇಂದ್ರ ಹೈಕಮಾಂಡ್ ಇತರ ರಾಜ್ಯ ನಾಯಕರಿಗೂ ಟಾಸ್ಕ್ ನೀಡಿದೆ.

ಬಿಜೆಪಿಯ ಒಂದಷ್ಟು ಶಾಸಕರು ಕಾಂಗ್ರೆಸ್‌ ಕದ ತಟ್ಟುತ್ತಿದ್ದಾರೆ. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕೊನೇ ಹಂತದಲ್ಲಿ ಯಡಿಯೂರಪ್ಪ ಅವರೇ ಮಧ್ಯ ಪ್ರವೇಶಿಸಬೇಕಾಗಿದೆ. ಕಾಂಗ್ರೆಸ್ -ಜೆಡಿಎಸ್ ತೊರೆದಿದ್ದ 17 ಶಾಸಕರ ಪೈಕಿ ಹೆಚ್ಚಿನವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರೆ 2024ರ ಲೋಕಸಭೆ ಚುನಾವಣೆಯಲ್ಲಿ ಸುಮಾರು 15 ಸ್ಥಾನಗಳಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ. 2019ರಲ್ಲಿ ರಾಜ್ಯದಲ್ಲಿ ಗೆದ್ದಿದ್ದ 20  ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳಲು ಪಕ್ಷಕ್ಕೆ ಕಷ್ಟವಾಗಲಿದೆ, ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಹಲವು ಬಂಡಾಯ ಶಾಸಕರು ಯಡಿಯೂರಪ್ಪ ಅವರ ಮಾತಿಗೆ ಕಿವಿಗೊಡದ ಕಾರಣ ಪಕ್ಷದ ಹೈಕಮಾಂಡ್ ಸಿ.ಟಿ.ರವಿ, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ಇತರ ರಾಜ್ಯ ನಾಯಕರಿಗೆ ಟಾಸ್ಕ್ ನೀಡಿದೆ.

ಕಾಂಗ್ರೆಸ್ ಸೇರಲು ಮನಸ್ಸು ಮಾಡಿರುವ ಒಕ್ಕಲಿಗ ಶಾಸಕ ಎಸ್‌ಟಿ ಸೋಮಶೇಖರ್‌ ಅವರನ್ನು ಸಮಾಧಾನಪಡಿಸಲು ಹಲವು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ. ತಮ್ಮನ್ನು ಸೋಲಿಸಲು ಜೆಡಿಎಸ್ ನಾಯಕರೊಂದಿಗೆ ಕೈ ಜೋಡಿಸಿದ್ದರು ಎಂದು ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್ ಅವರು ನೀಡಿದ ದೂರಿನ ಮೇರೆಗೆ ಯಶವಂತಪುರ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮಾರೇಗೌಡ ಹಾಗೂ ಯಶವಂತಪುರ ಮಂಡಲದ ಉಪಾಧ್ಯಕ್ಷ ಧನಂಜಯ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಇತ್ತೀಚೆಗಷ್ಟೇ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿರುವ ಸೋಮಶೇಖರ್, ತಮ್ಮ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಕಳುಹಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಯಡಿಯೂರಪ್ಪ ಕರೆದಿದ್ದ ಸಭೆಗೆ ಎಸ್ ಟಿ ಸೋಮಶೇಖರ್ ಮತ್ತು ಭೈರತಿ ಬಸವರಾಜ್ ಹಾಜರಾಗಲಿಲ್ಲ, ಹೀಗಾಗಿ ಅವರು ಬಿಜೆಪಿ ತೊರೆಯಬಹುದು ಎಂಬ ಊಹಾಪೋಹವನ್ನು ಮತ್ತಷ್ಟು ಹೆಚ್ಚಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವ ಶೋಭಾ ಕರಂದ್ಲಾಜೆ 2023 ರ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದಿಂದ ಹೊರಹೋದವರನ್ನು ಮರಳಿ ಕರೆತರಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಮಾತು ಕೇಳಿ ಪಕ್ಷದಲ್ಲಿ ಉಳಿಯಲು ಈ ಶಾಸಕರಿಗೆ ಯಾವುದೇ ಪ್ರಬಲ ಕಾರಣವಿಲ್ಲ, ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ.ಅವರು ಅವಕಾಶವಾದಿಗಳು ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಆದರೆ, ಯಾರೂ ಪಕ್ಷ ತೊರೆಯುವುದಿಲ್ಲ ಎಂದು ಪಕ್ಷದ ಮತ್ತೊಬ್ಬ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇದು ಕಾಂಗ್ರೆಸ್ ತಂತ್ರವಾಗಿದೆ ಎಂದು ಅವರು ಕಿಡಿಕಾರಿದರು.

ವಿಧಾನಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ರಾಜ್ಯ ಬಿಜೆಪಿಗೆ ಈಗ ನಾಯಕತ್ವದ ಶೂನ್ಯತೆಯ ಗ್ರಹಣ ಬಾಧಿಸಿದೆ. ಕುರುಬನಿಲ್ಲದ ಕುರಿಗಳ ಮಂದೆಯಂತೆ ದಿಕ್ಕು ತೋಚದೆ ರಾಜ್ಯ ಬಿಜೆಪಿ ನಿಂತಿದೆ. ವಿಧಾನಸಭೆ ಮತ್ತು ವಿಧಾನಪರಿಷತ್ತಿಗೆ ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಗಳಿಗೆ ನೇಮಕ ಮಾಡುವ ಬಗ್ಗೆ ಪಕ್ಷದ ವರಿಷ್ಠರೂ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ದಿಕ್ಕು ದೆಸೆ ಇಲ್ಲದೆ ಕಂಗೆಟ್ಟು ನಿಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com