ಲೋಕಸಭೆ ಟಿಕೆಟ್‌ ಆಕಾಂಕ್ಷಿ ನಾನಲ್ಲ, ಹೈಕಮಾಂಡ್ ಸೂಚಿಸಿದರೆ ಸ್ಪರ್ಧಿಸುವೆ: ಜಗದೀಶ್‌ ಶೆಟ್ಟರ್- ಸಿಎಂ ಸಿದ್ದರಾಮಯ್ಯ ಉಪಹಾರ ಕೂಟ

ಮುಂಬರುವ ಲೋಕಸಭಾ ಚುನಾವಣೆಗೆ ಧಾರವಾಡ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಸ್ಪರ್ಧೆ ಮಾಡಲಿದ್ದಾರೆಯೇ ಎಂಬ ವದಂತಿ ಇತ್ತೀಚೆಗೆ ಸದ್ದು ಮಾಡಿತ್ತು. ಮಾಜಿ‌ ಸಿಎಂ ಜಗದೀಶ್ ಶೆಟ್ಟರ್ ಅವರ 68ನೇ ಜನ್ಮ ದಿನ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಶೆಟ್ಟರ್‌ ಮತ್ತು ಅವರ ಕುಟುಂಬಸ್ಥರ ಜೊತೆ ಕೆಲಕಾಲ ಮಾತನಾಡಿದರ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ: ಮುಂಬರುವ ಲೋಕಸಭಾ ಚುನಾವಣೆಗೆ ಧಾರವಾಡ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಸ್ಪರ್ಧೆ ಮಾಡಲಿದ್ದಾರೆಯೇ ಎಂಬ ವದಂತಿ ಇತ್ತೀಚೆಗೆ ಸದ್ದು ಮಾಡಿತ್ತು. ಮಾಜಿ‌ ಸಿಎಂ ಜಗದೀಶ್ ಶೆಟ್ಟರ್ ಅವರ 68ನೇ ಜನ್ಮ ದಿನ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಶೆಟ್ಟರ್‌ ಮತ್ತು ಅವರ ಕುಟುಂಬಸ್ಥರ ಜೊತೆ ಕೆಲಕಾಲ ಮಾತನಾಡಿದರು.

ಜಗದೀಶ್‌ ಶೆಟ್ಟರ್ ಹುಟ್ಟುಹಬ್ಬದ ನಿಮಿತ್ತ ಅವರ ನಿವಾಸಕ್ಕೆ ಇದೇ ಮೊದಲ ಬಾರಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಇನ್ನು ಈ ಭೇಟಿಯ ಹಿಂದೆ ರಾಜಕೀಯ ಉದ್ದೇಶಗಳಿವೆ ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶೆಟ್ಟರ್‌ ಅವರನ್ನು ವಾಪಸ್‌ ಬಿಜೆಪಿಗೆ ಕರೆ ತರುವ ಬಗ್ಗೆ ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಉಭಯ ಪಕ್ಷಗಳ ನಾಯಕರು ಇದನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಈಗ ಶೆಟ್ಟರ್‌ ಅವರಿಗೆ ಕಾಂಗ್ರೆಸ್‌ ಪ್ರಾಧಾನ್ಯತೆ ಕೊಡುತ್ತಿದೆ. ಅವರ ಹಿಂದೆ ಪಕ್ಷ ನಿಂತಿದೆ ಎಂಬ ಸಂದೇಶವನ್ನು ಸಾರುವ ಉದ್ದೇಶವೇ ಈ ಭೇಟಿ ಎಂದು ಹೇಳಲಾಗುತ್ತಿದೆ.

ಲೋಕಸಭೆ ಟಿಕೆಟ್‌ ಆಕಾಂಕ್ಷಿ ನಾನಲ್ಲ, ಸೂಚಿಸಿದರೆ ಸ್ಪರ್ಧೆ ಮಾಡುವೆ: ಜಗದೀಶ್‌ ಶೆಟ್ಟರ್
ಬಳಿಕ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಸಿಎಂ ಸಿದ್ದರಾಮಯ್ಯ ಜಗದೀಶ್ ಶೆಟ್ಟರ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದರು. ಕೂಡಲೇ ಅದಕ್ಕೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ. ಪಕ್ಷವೂ ನನ್ನನ್ನು ಸ್ಪರ್ಧಿಸುವಂತೆ ಹೇಳಿಲ್ಲ. ಮುಂದೆ ಹೇಳಿದರೆ ನೋಡೋಣ. ಲೋಕಸಭಾ ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಗಳ ಬಗ್ಗೆ ಚರ್ಚೆಯು ಜನವರಿ ನಂತರ ಶುರುವಾಗುತ್ತದೆ. ಪಕ್ಷ ಬಯಸಿದರೆ ಸ್ಪರ್ಧಿಸಲು ಸಿದ್ಧ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ಹುಟ್ಟುಹಬ್ಬದ ಶುಭ ಕೋರಿದ್ದಾರೆ. ರಾಜಕೀಯ ಚರ್ಚೆ ಏನು ಆಗಿಲ್ಲ. ಸಹಜವಾಗಿಯೇ ಪ್ರದೀಪ್ ಶೆಟ್ಟರ್ ಕೂಡ ಮನೆಗೆ ಬಂದಿದ್ದರು. ಸಿದ್ದರಾಮಯ್ಯನವರು ನಮ್ಮ ರಾಜಕೀಯ ಜೀವನದ ಒಡನಾಟವನ್ನು ಈ ವೇಳೆ ನೆನಪಿಸಿಕೊಂಡರು. 
ಹುಬ್ಬಳ್ಳಿಗೆ ಕಾರ್ಯಕ್ರಮ ನಿಮಿತ್ತ ಬಂದಿರುವಾಗ ಜಗದೀಶ್ ಶೆಟ್ಟರ್ ಬೆಳಗಿನ ಉಪಹಾರಕ್ಕೆ ನಮ್ಮ ಮನೆಗೆ ಬನ್ನಿ ಎಂದು ಕರೆದರು. ಇಲ್ಲಿಗೆ ಬಂದ ಮೇಲೆ ಅವರ ಹುಟ್ಟುಹಬ್ಬ ಎಂದು ಗೊತ್ತಾಯಿತು. ಹಿಂದೆ ಅವರು ಬಿಜೆಪಿಯಲ್ಲಿದ್ದಾಗಲೂ ಬಂದಿದ್ದೆ. ಎಲ್ಲಾದರೂ ತಿಂಡಿ ತಿನ್ನಬೇಕಲ್ಲ, ಅದಕ್ಕೆ ಶೆಟ್ಟರ್ ಮನೆಗೆ ಬಂದೆ ಎಂದರು. 

ನಮ್ಮ ಜಾತಿಯವರಿಗೇ ಟಿಕೆಟ್‌ ಕೊಡಬೇಕು: ಪ್ರದೀಪ್‌ ಶೆಟ್ಟರ್
ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಎಂಎಲ್‌ಸಿ ಪ್ರದೀಪ್ ಶೆಟ್ಟರ್, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಬಲವಾಗಿದೆ. ನಮ್ಮ‌ ಜಾತಿಯವರಿಗೆ ಟಿಕೆಟ್ ಕೊಡಬೇಕು. ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ಸ್ಪರ್ಧೆಗೆ ಸಿದ್ಧ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಜಗದೀಶ್‌ ಶೆಟ್ಟರ್ ಇನ್ನೂ ಹತ್ತು ವರ್ಷ ಸೆಂಟ್ರಲ್ ಕ್ಷೇತ್ರದ ಶಾಸಕರಾಗಿರುತ್ತಾರೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದರು. ಈಗ ಏನಾಯ್ತು? ರಾಜಕೀಯದಲ್ಲಿ ಹಾಗೆ ಆಗೋದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com