ಬಿಜೆಪಿ-ಜೆಡಿಎಸ್ ಸದಸ್ಯರ ಗೈರು: ಪರಿಷತ್ ಕಲಾಪಕ್ಕೆ ಹೆಚ್.ವಿಶ್ವನಾಥ್, ಮರಿತಿಬ್ಬೇಗೌಡ ಹಾಜರು!

ಬಿಜೆಪಿ ಮತ್ತು ಜೆಡಿಎಸ್ ಎಂಎಲ್‌ಸಿಗಳು ಕಲಾಪವನ್ನು ಬಹಿಷ್ಕರಿಸಿದ ಕಾರಣ, ಗುರುವಾರ ಬೆಳಗ್ಗೆ ಸದನದಲ್ಲಿ ಕೋರಂ ಕೊರತೆ ಎದುರಾಯಿತು, ಆದರೆ ಸದನದಲ್ಲಿ ಕೇವಲ ಇಬ್ಬರು ಸದಸ್ಯರೊಂದಿಗೆ ಕಲಾಪ ಪುನರಾರಂಭವಾಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕಾಂಗ್ರೆಸ್​ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಹೊರ ರಾಜ್ಯದ ರಾಜಕಾರಣಿಗಳ ಸ್ವಾಗತಕ್ಕೆ ರಾಜ್ಯದ ಐಎಎಸ್ ಅಧಿಕಾರಿಗಳ ನಿಯುಕ್ತಿ ಮಾಡಿದ್ದು ಹಾಗು ಬಿಜೆಪಿಯ 10 ಶಾಸಕರನ್ನು ಪ್ರಸಕ್ತ ಅಧಿವೇಶನದಿಂದ ಅಮಾನತು ಮಾಡಿದ ಸ್ಪೀಕರ್ ಕ್ರಮ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್​ ಸದಸ್ಯರ ಗೈರಿನ ನಡುವೆ ವಿಧಾನ ಪರಿಷತ್ ಕಲಾಪವನ್ನು ನಡೆಸಲಾಯಿತು.

ಬಿಜೆಪಿ ಮತ್ತು ಜೆಡಿಎಸ್ ಎಂಎಲ್‌ಸಿಗಳು ಕಲಾಪವನ್ನು ಬಹಿಷ್ಕರಿಸಿದ ಕಾರಣ, ಗುರುವಾರ ಬೆಳಗ್ಗೆ ಸದನದಲ್ಲಿ ಕೋರಂ ಕೊರತೆ ಎದುರಾಯಿತು, ಆದರೆ ಸದನದಲ್ಲಿ ಕೇವಲ ಇಬ್ಬರು ಸದಸ್ಯರೊಂದಿಗೆ ಕಲಾಪ ಪುನರಾರಂಭವಾಯಿತು.

ಕೋರಂ ಕೊರತೆಯಿಂದ ಸದನವನ್ನು ಬೆಳಗ್ಗೆ ಒಂದು ಗಂಟೆಗೂ ಹೆಚ್ಚು ಕಾಲ ಮುಂದೂಡಲಾಯಿತು. ಆಡಳಿತಾರೂಢ ಕಾಂಗ್ರೆಸ್‌, ಬಿಜೆಪಿ ಎಂಎಲ್‌ಸಿ ಎ.ಎಚ್‌.ವಿಶ್ವನಾಥ್‌, ಜೆಡಿಎಸ್‌ ಎಂ.ಎಲ್‌.ಸಿ ಜಿ.ಟಿ.ಮರಿತಿಬ್ಬೇಗೌಡ ಮಾತ್ರ ಸದನದಲ್ಲಿ ಹಾಜರಿದ್ದರು.

ಕಲಾಪ ಪುನರಾರಂಭಗೊಂಡಾಗ ಪ್ರತಿಪಕ್ಷದ ಸದಸ್ಯರು ಕಲಾಪ ಬಹಿಷ್ಕರಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಪ್ರತಿಪಕ್ಷಗಳು ಸರ್ಕಾರಕ್ಕೆ ಸದಾ ಮಾರ್ಗದರ್ಶನ ನೀಡಬೇಕು, ಕಲಾಪವನ್ನು ಬಹಿಷ್ಕರಿಸಬಾರದು ಎಂದು ಸಲಹೆ ನೀಡಿದರು. ಈಗಾಗಲೇ ಕಾಂಗ್ರೆಸ್ ಸೇರುವ ಸೂಚನೆ ನೀಡಿರುವ ವಿಶ್ವನಾಥ್ ಮತ್ತು ಮರಿತಿಬ್ಬೇಗೌಡ, ವಿಪಕ್ಷ ಸದಸ್ಯರು ಬಹಿಷ್ಕಾರ  ಸಂಬಂಧ ಆಕ್ರೋಶ ವ್ಯಕ್ತ ಪಡಿಸಿದರು.

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಅಧಿವೇಶನ ನಡೆಯುವಾಗ ಅಧಿವೇಶನ ಬಹಿಷ್ಕಾರ ಮಾಡುವುದು ಸರಿಯಲ್ಲ. 5 ವಿದೇಯಕ ಮಂಡನೆಯಾಗಿದೆ. ಬಿಲ್ ಮೇಲೆ ಚರ್ಚೆ ನಡೆಯಬೇಕು. ಬಜೆಟ್ ಮೇಲೂ ಚರ್ಚೆ ಮಾಡಬೇಕಾಗಿದೆ. ಒಂದೆರಡು ದಿನ‌ ಸದನ ನಡೆಸಲಿಲ್ಲ ಎಂದರೆ ಸಾರ್ವಜನಿಕರ ಹಣ ನಷ್ಟವಾಗಲಿದೆ. ನಾಡಿನ ಜ್ವಲಂತ ಸಮಸ್ಯೆಗಳ ಚರ್ಚೆ ಮಾಡಿ ನಾಡಿನ ಅಭಿವೃದ್ಧಿಗೆ ನಿರ್ಣಯ ಕೈಗೊಳ್ಳಲು ಸರ್ಕಾರದ ಕಣ್ಣು ತೆರೆಸಲು ಕಲಾಪ ನಡೆಸಬೇಕು. ಹಾಗಾಗಿ ಪ್ರತಿಪಕ್ಷ ಸದಸ್ಯರು ಪಾಲ್ಗೊಳ್ಳಿ ಎಂದು ಮನವಿ ಮಾಡಿ, ಕಲಾಪ ಮುಂದುವರೆಸಲು ಮನವಿ ನೀಡಿದರು.

ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಬಿಜೆಪಿ ಸದಸ್ಯರ ಜೊತೆ ಮಾತನಾಡಿ ಕಲಾಪದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದೆ. ಅವರು ಸಮಯ ಕೋರಿದರು ನಂತರ ಬರಲ್ಲ ಸದನ ನಡೆಸಿ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ನಂತರ ಜೆಡಿಎಸ್ ಸದಸ್ಯರನ್ನೂ ಸಂಪರ್ಕಿಸಿದೆ. ಅವರೂ ಕೂಡ ಸದನ ನಡೆಸಿ ನಾವು ಸಭೆ ಮಾಡುತ್ತಿದ್ದೇವೆ ನಂತರ ನಾವು ನಮ್ಮ ನಿರ್ಧಾರ ತಿಳಿಸುತ್ತೇವೆ. ಎರಡೂ ಪಕ್ಷದ ಸದಸ್ಯರಿಗಾಗಿ ಸಮಯ ನೀಡಿದರೂ ಅವರು ಬರಲಿಲ್ಲ, ಹಾಗಾಗಿ ಅವರ ಗೈರಿನಲ್ಲೇ ಸದನ ನಡೆಸುತ್ತೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com