ಸಿಂಹ 'ಸಂತೋಷ್' ಬುಟ್ಟಿಯಲ್ಲಿನ ಚೇಳು: ಸಂತೋಷನ ಮೌತ್ ಪೀಸ್ ಪ್ರತಾಪ್ ಅವರೇ ಎಷ್ಟು ಬಿಜೆಪಿ ಶಾಸಕರನ್ನು ಗೆಲ್ಲಿಸಿದ್ದೀರಿ?

ಬಿಎಲ್ ಸಂತೋಷನ ಮೌತ್ ಪೀಸ್ ಪ್ರತಾಪ್ ಸಿಂಹ ಅವರೇ ನಮ್ಮ ಸರ್ಕಾರದ, ನಮ್ಮ ಸಿಎಂ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತ ನಿಮ್ಮ ವಿರೋಧ ಪಕ್ಷದ ನಾಯಕನನ್ನು ಮೊದಲು ಆಯ್ಕೆ ಮಾಡಿಕೊಳ್ಳಿ. ಮೈಸೂರಿನ ಸಂಸದನಾಗಿ ಜಿಲ್ಲೆಯಲ್ಲಿ ಎಷ್ಟು ಬಿಜೆಪಿ ಶಾಸಕರನ್ನು ಗೆಲ್ಲಿಸಿದ್ದೀರಿ?
ಸಂತೋಷ್ ಮತ್ತು ಪ್ರತಾಪ್ ಸಿಂಹ
ಸಂತೋಷ್ ಮತ್ತು ಪ್ರತಾಪ್ ಸಿಂಹ

ಬೆಂಗಳೂರು: ಸ್ವಪಕ್ಷ-ವಿಪಕ್ಷದವರಿಗೂ ಬೇಕಾಬಿಟ್ಟಿ ಮಾತನಾಡಿಕೊಂಡು ದಿನ ಕಳೆಯುವುದೇ ಇವರ ದಿನಚರಿಯಾಗಿದೆ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ ಸಿಂಹ ದಿನಚರಿಯಾಗಿದೆ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕ ಸಚಿವ ಎಂಬಿ ಪಾಟೀಲ್‌ ಹರಿಹಾಯ್ದಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರತಾಪ್ ಸಿಂಹ ಅವರಿಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು. ನಾನು ಕಾಂಗ್ರೆಸ್ ‌ಪಕ್ಷದ ಚೇಲಾ, ಬೇರೆ ಯಾರಿಗೂ ಚೇಲಾ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರಿಗಿಂತ ಮುಂಚೆ ನಾನು ಕಾಂಗ್ರೆಸ್​ಗೆ ಬಂದವನು. ಆರು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿ ಕೆಲಸ ಮಾಡಿದ್ದೇನೆ. ಪ್ರತಾಪ್ ಸಿಂಹಗೆ ಚೇಲಾ ಕೆಲಸ ಮಾಡಿದ ಅನುಭವ ಇರಬೇಕು ಎಂದು ತಿರುಗೇಟು ನೀಡಿದ್ದಾರೆ.

ಇವರು ಚೇಲಾ ಅಂತಾರೆ, ಬಿ ಎಲ್ ಸಂತೋಷ್ ಚೇಳು ಅಂತಾರೆ. ಬಹುಶಃ ಸಂತೋಷ್ ಬುಟ್ಟಿಯಲ್ಲಿ ಇಂಥ ಚೇಳುಗಳೇ ಬಹಳ ಇರಬೇಕು. ಇವತ್ತು ಅವರಿಗೆ ಕಡಿಯಿರಿ, ನಾಳೆ ಇವರಿಗೆ ಕಡಿಯಿರಿ ಅಂತ ಸಂತೋಷ್ ಚೇಳು ಬಿಡುತ್ತಾರೆ ಅನಿಸುತ್ತದೆ. ಪ್ರತಾಪ್ ಸಿಂಹ ಅವರಿಗೆ ಸದ್ಬುದ್ಧಿ ಕೊಡಲಿ. ಪ್ರತಾಪ್ ಸಿಂಹ ಇದನ್ನೆಲ್ಲ ನಿಲ್ಲಿಸಿ ಅಕ್ಕಿ ಕೊಡಿಸುವ ಕೆಲಸ ಮಾಡಲಿ. ಪ್ರತಾಪ್ ಸಿಂಹ ಇನಿಷಿಯೇಟಿವ್​ ತೆಗೆದುಕೊಂಡು ಅಕ್ಕಿ ಕೊಡಿಸುವ ಪ್ರಯತ್ನ ಮಾಡಲಿ ಎಂದರು.

ನನ್ನ ಹೆಗಲ ಮೇಲೆ ಯಾರೂ ಬಂದೂಕು ಇಟ್ಟು ಹೊಡೆಯಬೇಕಿಲ್ಲ. ಯಾರಿಗಾದರೂ ಹೊಡೆಯಬೇಕು ಅಂದರೇ ನಾನೇ ಹೊಡೆಯುತ್ತೇನೆ. ನಾನು ವಿಜಯಪುರದವನು, ಆ ಶಕ್ತಿ ನನಗೆ ಇದೆ ಎಂದು ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ಮಾಡಿದರು.

ಇಂತಹ ಮಾನಸಿಕ ಸ್ಥಿತಿಯನ್ನು ಪ್ರತಾಪ್ ಸಿಂಹ ಎಲ್ಲಿ ಕಲಿತರೋ. ಪ್ರತಾಪ್​​ ಸಿಂಹ ಸಂಸದ ಸ್ಥಾನ ಇನ್ನು 10 ತಿಂಗಳು ಅಷ್ಟೇ ಇದೆ. ದಿನವೆಲ್ಲ ಪ್ರತಾಪ್ ಸಿಂಹಗೆ ಉತ್ತರ ಕೊಡುತ್ತಾ ಇರಲು ಆಗಲ್ಲ. ಪ್ರತಾಪ್ ಸಿಂಹ ಮನಸ್ಥಿತಿ ಬಗ್ಗೆ ಪಾಪ ಅನಿಸುತ್ತೆ. ಎಲ್ಲ ಜಾತಿಯ ಜನರನ್ನು ಒಟ್ಟಾಗಿ ಕೊಂಡೊಯ್ಯುವ ಹಿನ್ನೆಲೆ ನಮ್ಮದು. ಎಂ.ಬಿ.ಪಾಟೀಲ್​ ಬಳಿ ಇರೋದು ಚಿಲ್ಲರೆ ಖಾತೆ ಎಂದು ಹೇಳಿದ್ದಾರೆ. ಬೃಹತ್ ಕೈಗಾರಿಕೆ ಚಿಲ್ಲರೆ ಖಾತೆಯೇ ಎಂಬುದನ್ನು ಪ್ರಧಾನಿ ಬಳಿ ಕೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಪ್ರತಾಪ್ ಸಿಂಹ ವಿರುದ್ಧ ಟ್ಟೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಎಲ್ ಸಂತೋಷನ ಮೌತ್ ಪೀಸ್ ಪ್ರತಾಪ್ ಸಿಂಹ ಅವರೇ ನಮ್ಮ ಸರ್ಕಾರದ, ನಮ್ಮ ಸಿಎಂ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತ ನಿಮ್ಮ ವಿರೋಧ ಪಕ್ಷದ ನಾಯಕನನ್ನು ಮೊದಲು ಆಯ್ಕೆ ಮಾಡಿಕೊಳ್ಳಿ. ಮೈಸೂರಿನ ಸಂಸದನಾಗಿ ಜಿಲ್ಲೆಯಲ್ಲಿ ಎಷ್ಟು ಬಿಜೆಪಿ ಶಾಸಕರನ್ನು ಗೆಲ್ಲಿಸಿದ್ದೀರಿ? ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣರಾದ ಬಿಎಲ್ ಸಂತೋಷ್ ಅವರನ್ನು ಟೀಕಿಸುವ ಮಿನಿಮಮ್ ದಮ್ಮು ತಾಕತ್ತು ಇದೆಯೇ? ಎಂದು ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com