ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮದರಸಾಗಳನ್ನು ಸಂಪೂರ್ಣ ಬಂದ್ ಮಾಡುತ್ತೇವೆ: ಬಸನಗೌಡ ಪಾಟೀಲ್ ಯತ್ನಾಳ್
ಬೆಳಗಾವಿ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿರುವ ಮದರಸಾಗಳನ್ನು ಸಂಪೂರ್ಣ ಬಂದ್ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಅಸ್ಸಾಂನಲ್ಲಿ ಮದರಸಾಗಳನ್ನು ಬಂದ್ ಮಾಡಿರುವ ಅಲ್ಲಿನ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಮಾಡಿರುವ ರೀತಿಯಲ್ಲಿ ಕರ್ನಾಟಕದಲ್ಲಿಯೂ ಮಾಡುತ್ತೇವೆ. ಇಂದು ನಾನು ಬಸನಗೌಡ ಪಾಟೀಲ್ ಯತ್ನಾಳ್ ಆಗಿ ಉಳಿದಿದ್ದರೆ ಅದಕ್ಕೆ ಶಿವಾಜಿ ಮಹಾರಾಜರು ಕಾರಣ. ಇಲ್ಲದಿದ್ದರೆ ನಾನು ಬಶೀರ್ ಅಹ್ಮದ್ ಪಟೇಲ್ ಆಗಿರುತ್ತಿದ್ದೆ. ಅದೇ ರೀತಿ ಅಭಯ್ ಪಾಟೀಲ್ ಇರುತ್ತಿರಲಿಲ್ಲ. ಅವರು ಅಜರುದ್ದೀನ್ ಪಟೇಲ್ ಆಗಿರುತ್ತಿದ್ದರು ಎಂದರು.
ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡುತ್ತಾರೆ. ಆದರೆ ಟಿಪ್ಪು ಲಕ್ಷಾಂತರ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾನೆ. ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದ್ದಾನೆ. ಛತ್ರಪತಿ ಶಿವಾಜಿ ಮಹಾರಾಜರು ಯಾವುದೇ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿಲ್ಲ. ಹಾಗೇನಾದರೂ ಮಾಡುತ್ತಿದ್ದರೆ ಅವರ ಕೈಯನ್ನು ಕತ್ತರಿಸುತ್ತಿದ್ದರು.
ವಿಜಯಪುರದಲ್ಲಿ ಎರಡೂವರೆ ಲಕ್ಷ ಮತದಲ್ಲಿ 1 ಲಕ್ಷ 3 ಸಾವಿರ ಟಿಪ್ಪು ಸುಲ್ತಾನ್ ಪರ ಇದ್ದಾರೆ. ಶಿವಾಜಿ ಮಹಾರಾಜರ ಕನಸು ಹಿಂದೂ ಸಾಮ್ರಾಜ್ಯ ಆಗಿತ್ತು. ಮರಾಠ ಸಾಮ್ರಾಜ್ಯ ಅಲ್ಲ, ಇದರಿಂದ ಮರಾಠಿ ಕನ್ನಡ ಸಲುವಾಗಿ ಹೋರಾಡುವುದು ಬೇಡ. ಅದು ಮುಗಿದಿದೆ ಈಗ. ಈಗ ಏನಿದ್ದರೂ ಹಿಂದೂ, ನಾವೆಲ್ಲಾ ಹಿಂದೂಗಳಾಗಿ ಇದ್ದರೆ ಮಾತ್ರ ಭಾರತ ಉಳಿಯುತ್ತದೆ ಎಂದರು.

