ಹೆಣ್ಣು, ಹೊನ್ನು, ಮಣ್ಣು ಸಿಗಬೇಕು ಅಂದ್ರೆ ಪುಣ್ಯ ಬೇಕು: ಆನಂದ್ ಸಿಂಗ್
ವಿಜಯನಗರ: ಹೆಣ್ಣು, ಹೊನ್ನು, ಮಣ್ಣು ಸಿಗಬೇಕು ಅಂದ್ರೆ ಅದು ಪುಣ್ಯ ಬೇಕು. ಇದೊಂದು ಗಾದೆ, ಹಿರಿಯರು ಹೇಳಿರುವುದು ಸುಳ್ಳಲ್ಲ. ಈ ಏತ ನೀರಾವರಿ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ,ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಕರೆದುಕೊಂಡು ಬರಬೇಕಿತ್ತು, ಆದರೆ ಆಗಲಿಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಹೊಸಪೇಟೆಯಲ್ಲಿ ಗುರುವಾರ ಪಾಪಿನಾಯನಹಳ್ಳಿ ಏತ ನೀರಾವರಿ ಯೋಜನೆ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಆನಂದ್ ಸಿಂಗ್ ಅನ್ನು ಕಟ್ಟಿಹಾಕಲು ಕೆಲವರು ಪಣ ತೊಟ್ಟಿದ್ದಾರೆ. ಆದರೆ, ಆ ಪರಮಾತ್ಮನನ್ನು ಬಿಟ್ಟು ಯಾರಿಂದಲೂ ನನ್ನನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದರು.
ನನಗೆ ಮೊದಲು ಪ್ರಚಾರ ಹುಚ್ಚಿತ್ತು. ಆದರೆ, ಈಗ ನಾನು ಪ್ರಚಾರ ಪ್ರಿಯ ವ್ಯಕ್ತಿಯಲ್ಲ. ನನಗೆ ಪ್ರಚಾರದ ಹುಚ್ಚಿಲ್ಲ. ನಾನು ನಿಮ್ಮ ಮನಸ್ಸಲ್ಲಿದ್ದೇನೆ. ಈ ಯೋಜನೆಗೆ ಬಹಳ ರೈತರು ಹೋರಾಟ ಮಾಡಿದ್ದಾರೆ. ಒಂದು ಜಿಪಂ ಇಂದ ಕೊಳಾಯಿ ಹಾಕಬೇಕು ಅಂದ್ರೆ ಸುಲಭದ ಮಾತಲ್ಲ. ಅಂತದ್ದರಲ್ಲಿ 22 ಕೆರೆಗಳಿವೆ ನೀರು ತುಂಬಿಸುವುದು ಅಂದ್ರೆ ಸುಲಭವಲ್ಲ ಎಂದು ಹೇಳಿದರು.
ಈ ಯೋಜನೆ ಮಾಡಲು ನನ್ನಿಂದ ಆಗೋಲ್ಲಾ ಅಂತ ಸುಮ್ಮನಾದೆ. ಪಂಪಾ ವಿರೂಪಾಕ್ಷ ಎಲ್ಲವನ್ನೂ ಕೊಟ್ಟ, ಸಿಎಂ ಯಡಿಯೂರಪ್ಪ ಇದ್ದಾಗ, ನನ್ನ ಮಾತು ಈಡೇರಿಸ್ತಿನಿ ಅಂತ ಹೇಳಿದ್ದರು. ನಾನು ವಿಜಯನಗರ ಜಿಲ್ಲೆ ಮತ್ತು ಏತ ನೀರಾವರಿ ಯೋಜನೆಯ ಬೇಡಿಕೆ ಇಟ್ಟಿದ್ದೆ. ಇಟ್ಟ ಹೆಜ್ಜೆ ಹಿಂದೆ ಇಡಲ್ಲ. ಹಾಗಾಗಿ ನಾನು ಬಿಡಲಿಲ್ಲ. ಬಳ್ಳಾರಿ ಜಿಲ್ಲೆಯ ಯಾವುದೋ ಮೂಲೆಯಲ್ಲಿ ವಿಜಯನಗರ ಇತ್ತು. ಜಿಲ್ಲೆಗಾಗಿ ಉಳ್ಳೇಶ್ವರ ಹೋರಾಟ ಪ್ರಾರಂಭ ಮಾಡಿದರು. ಬಳ್ಳಾರಿಯಲ್ಲಿ ನನ್ನ ವಿರುದ್ಧ ಹೊಯ್ಕೊಂಡರು. ಆದರೆ, ಬಿಡದೇ ಜಿಲ್ಲೆ ಮಾಡಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ