ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಿರುದ್ಧ ಬಿಜೆಪಿ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ. ಇತ್ತೀಚಿಗೆ ಸುರ್ಜೇವಾಲ ಸಿಎಂ ಬೊಮ್ಮಾಯಿ ಅವರನ್ನು ಆಧುನಿಕ ಶಕುನಿ ಎಂದು ಕರೆದಿದ್ದರು. ಬೊಮ್ಮಾಯಿ ಮೀಸಲಾತಿ ಮೂಲಕ ಸಮಾಜವನ್ನು ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ಕಾನೂನು ಪ್ರಕೋಷ್ಠದ ವತಿಯಿಂದ ಮಂಗಳವಾರ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಬೊಮ್ಮಾಯಿ ಅವರ ಘನತೆಗೆ ಧಕ್ಕೆ ತಂದಿರುವ ಸುರ್ಜೇವಾಲ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನಕ್ಕೆ ಆರ್ಬಿಐ ನಿಂದ ದಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಹಿಂದೆ ಬಿಜೆಪಿ ಕೈವಾಡ ಎಂಬ ಸುರ್ಜೇವಾಲ ಆರೋಪ ಮಾಡಿದ್ದರು. ಈ ಬಗ್ಗೆಯೂ ಸುರ್ಜೇವಾಲ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ. ಸಮಾಜದಲ್ಲಿ ಕೋಮು ಸೌಹಾರ್ದತೆ ಕದಡಲು ಸುರ್ಜೇವಾಲಾ ಪ್ರಯತ್ನಿಸುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸುರ್ಜೇವಾಲಾ ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಬಳಿಕ ಮಾತನಾಡಿದ ವಿಧಾನಪರಿಷತ್ ಬಿಜೆಪಿ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ರಣದೀಪ್ ಸುರ್ಜೆವಾಲಾ ಯಾವ ಮಾತನ್ನು ಆಡಿದರೂ ಅದು ಅಸಂಬದ್ಧ, ಅಸಂವಿಧಾನಿಕ, ನೀವು ಸಿಎಂಗೆ ಶಕುನಿ ಅಂದ್ರೆ ನಾವು ನಿಮ್ಮನ್ನು ಶಿಖಂಡಿ ಅಂತೀವಿ. ಈ ರೀತಿ ಕೆಟ್ಟ ಪದ ಬಳಕೆ ಸರಿಯಲ್ಲ ಎಂದರು.
Advertisement