ತುಮಕೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ಗೆದ್ದರೆ ನಾನು ಗೆದ್ದಂತೆ, ಅದನ್ನು ಅರಿತು ಜನರು ಮತ ಹಾಕಬೇಕು' ಎಂದು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೊರಟಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಪರ ಪ್ರಚಾರ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಗಾಯಗೊಂಡಿರುವುದು ವಿರೋಧ ಪಕ್ಷಗಳ ಹತಾಶೆಯ ದ್ಯೋತಕವಾಗಿದೆ ಎಂದಿದೆ.
ಇತ್ತೀಚೆಗೆ ರಾಜೀವ್ ಭವನ ಉದ್ಘಾಟನೆಗೆ ನಾನು ಬಂದಿಲ್ಲ ಎಂದು ಅಪಪ್ರಚಾರ ಮಾಡಿದರು. 2013ರಲ್ಲಿ ಪರಮೇಶ್ವರ್ ಅವರ ಮೇಲೂ ಇದೇ ರೀತಿ ನಿಂದನೆ ಹೊರಿಸಲಾಗಿತ್ತು ಎಂದು ಹೇಳಿದ ಸಿದ್ದರಾಮಯ್ಯ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಪರಮೇಶ್ವರ್ ಒಬ್ಬ ಪ್ರಾಮಾಣಿಕ, ನಿಷ್ಠಾವಂತ ಜತೆಗೆ ಬುದ್ದಿವಂತ, ನನಗಿಂತ ಬುದ್ದಿವಂತ ಅಂದರೆ ತಪ್ಪಾಗಲಾರದು. ಅದಕ್ಕೆ ಅವರನ್ನು ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಯಾರೋ ನಮ್ಮ ರಾಜಕೀಯ ವಿರೋಧಿಗಳು, ಕಿಡಿಗೇಡಿಗಳು ಪರಮೇಶ್ವರ್ ಮೇಲೆ ಹಲ್ಲೆ ಮಾಡಿದ್ದಾರೆ, ಸೋಲುತ್ತೇವೆ ಎಂಬ ಹತಾಶೆಯಲ್ಲಿ ಇಂತಹ ಕೆಲಸ ಮಾಡಿದ್ದಾರೆ. ಸೂರ್ಯ ಹುಟ್ಟೋದು ಎಷ್ಟು ಸತ್ಯವೋ ಅವರು ಪರಮೇಶ್ವರ್ ಗೆಲುವು ಅಷ್ಟೇ ಸತ್ಯ ಎಂದರು.
Advertisement