ಶಿವಮೊಗ್ಗ: ಈಗಲೂ ಅಭಿಮಾನಿಗಳು ಅಪ್ಪು ಹೆಸರಿನಲ್ಲಿ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಅಪ್ಪು ಹೆಸರಿನಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ. ಆದರೆ ಅವರು ಯಾರೂ ಹೇಳಿಕೊಂಡು ತಿರುಗಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಚಿವ ವಿ ಸೋಮಣ್ಣ ಅವರಿಗೆ ಶುಕ್ರವಾರ ತಿರುಗೇಟು ನೀಡಿದ್ದಾರೆ.
ನಿನ್ನೆ ವರುಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ನಟ ಶಿವಣ್ಣ ಅವರು ಪ್ರಚಾರ ಮಾಡಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಸೋಮಣ್ಣ ಅವರು ತೀವ್ರ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಇಂದು ಪ್ರತಿಕ್ರಿಯಿಸಿದ ಶಿವಣ್ಣ, ಸಚಿವ ಸೋಮಣ್ಣ ಹಾಗೂ ಪ್ರತಾಪ ಸಿಂಹ ಅವರು ನಮಗೆ ಒಳ್ಳೆಯ ಆಪ್ತರು. ಅವರ ಬಗ್ಗೆ ಒಳ್ಳೆಯ ಗೌರವವಿದೆ. ನಾನು ಏನು ಚಿಕ್ಕ ಹುಡುಗನಾ ನನಗೆ ಈಗ 61 ವರ್ಷ ಆಯ್ತು. ನನಗೆ ಯಾರು ವೈರಿಗಳಿಲ್ಲ. ಎಲ್ಲರೂ ನನ್ನ ಸ್ನೇಹಿತರೇ ಆಗಿದ್ದಾರೆ ಎಂದರು.
ಅಭಿಮಾನಿಗಳು ಅಪ್ಪು ಹೆಸರಿನಲ್ಲಿ ಹಲವು ಒಳ್ಳೆಯ ಕೆಲಸ ಮಾಡಿದ್ದಾರೆ. ರಾಯಚೂರಿನಲ್ಲಿ ಒಬ್ಬರು ಸಾದಿಕ್ ಅಂತಾ ಇದ್ದಾರೆ, ಅವರು ಅಪ್ಪು ಜೀವಂತವಾಗಿ ಇದ್ದಾಗಲು ಒಳ್ಳೆಯ ಕೆಲಸ ಮಾಡಿದ್ದರು. ಈಗಲು ಮಾಡುತ್ತಿದ್ದಾರೆ. ಆದರೆ ಅವರು ಯಾರು ಹೇಳಿಕೊಂಡು ಓಡಾಡಲ್ಲ ಎಂದು ಶಿವಣ್ಣ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಬೇಕು ಎಂದು ಮೊದಲಿನಿಂದ ಆಸೆ ಇತ್ತು ಎಂದ ಶಿವಣ್ಣ, ಮೊನ್ನೆ ಅವರನ್ನು ಮೀಟ್ ಮಾಡಿದೆ. ರಾಹುಲ್ ಗಾಂಧಿ ಸ್ಮಾರ್ಟ್ ಆಗಿ ಇದ್ದಾರೆ. ರಾಹುಲ್ ಗಾಂಧಿ ಅವರ ಪಿಟ್ ನೆಸ್ ಇಷ್ಟ ಆಯ್ತು. ಹೀಗಾಗಿ ಅವರ ಬಗ್ಗೆ ಇಂಪ್ರೆಸ್ ಆಯ್ತು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಪ್ರಚಾರದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಂಸದ ಪ್ರತಾಪ್ ಸಿಂಹ, ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವ ಭಾವ ಭಕುತಿಗೆ ಎಂದು ಕಿಡಿಕಾರಿದ್ದರು.
Advertisement