
ಬೆಂಗಳೂರು: ಯಡಿಯೂರಪ್ಪನವರ ಮಗನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡುವ ಮೂಲಕ ಬಿಜೆಪಿ ಲೀಡರ್ ಲೆಸ್ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಕಾಂಗ್ರೆಸ್, ದಶಕಗಳ ಕಾಲ ಪಕ್ಷದಲ್ಲಿ ದುಡಿದವರು ಹಲವರಿದ್ದರೂ "ಎಳೆ ಹುಡುಗ"ನಿಗೆ ಪಟ್ಟ ಕಟ್ಟುವ ಮೂಲಕ ಉಳಿದವರೆಲ್ಲ ಅನರ್ಹರು ಎಂಬ ಸಂದೇಶ ನೀಡಿದ್ದೇ ಅಥವಾ ಕುಟುಂಬ ರಾಜಕಾರಣಕ್ಕೆ ಮಣಿದಿದ್ದೇ ? ಎಂಬುದಕ್ಕೆ ರಾಜ್ಯ ಬಿಜೆಪಿಯಿಂದ ಉತ್ತರ ಬಯಸಿದೆ.
ಸಿಟಿ ರವಿ ಅವರೇ, ಈಗ ಯಡಿಯೂರಪ್ಪನವರ ಕಿಚನ್ ಕ್ಯಾಬಿನೆಟ್ ನಲ್ಲೇ ಎಲ್ಲವೂ ನಿರ್ಧಾರವಾಗಲಿದೆ, ಅವರ ಕಿಚನ್ ಕ್ಯಾಬಿನೆಟ್ ಗೆ ತಾವು ಹೋಗುವಿರಾ ಅಥವಾ ತಾವೂ ರಾಜಕೀಯ ನಿವೃತ್ತಿ ಪಡೆಯುವಿರಾ? ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ತಾವು ತಮ್ಮ ಅಸ್ತಿತ್ವಕ್ಕಾಗಿ ವಿಜಯೇಂದ್ರರ ಮುಂದೆ ಕೈಕಟ್ಟಿ ತಲೆಬಾಗಿಸಿ ನಿಲ್ಲುವಿರಾ ಅಥವಾ ರಾಜಕೀಯಕ್ಕೆ ಗುಡ್ ಬೈ ಹೇಳುವಿರಾ? ಎಂದು ಪ್ರಶ್ನಿಸಿದೆ. ಫ್ಯಾಮಿಲಿ ಜನತಾ ಪಾರ್ಟಿಯಲ್ಲಿಇನ್ಮುಂದೆ ನಿವೃತ್ತಿ ಪರ್ವ ಶುರುವಾದರೂ ಆಶ್ಚರ್ಯವಿಲ್ಲ! ಎಂದು ಹೇಳಿದೆ.
ಯಡಿಯೂರಪ್ಪನವರ ಮಗನ ರಾಜ್ಯಾಧ್ಯಕ್ಷ ಹುದ್ದೆ ಕೇವಲ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂಬ ಗುಸುಗುಸು ಪಿಸುಪಿಸು ಜಗನ್ನಾಥ ಭವನದಲ್ಲಿ ಕೇಳಿ ಬರುತ್ತಿದೆಯಂತೆ! ಇದು ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್ , ಬಿಎಲ್ ಸಂತೋಷ್ ಸಮಾಧಾನ ಮಾಡಿಕೊಳ್ಳುತ್ತಿರುವುದೋ, ಅಥವಾ ನೈಜತೆ ಇದೆಯೋ ಎಂಬುದನ್ನು ರಾಜ್ಯ ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದೆ.
Advertisement