ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಮಿಷನ್ ಆರೋಪ ಭಾರೀ ಸದ್ದು ಮಾಡಿತ್ತು. ಅಂದು ಪ್ರತಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದು ಪೋಸ್ಟರ್ ಕೂಡ ಅಂಟಿಸಿದ್ದರು.
ಯಾವ ಕಮಿಷನ್ ಅಸ್ತ್ರದ ಮೂಲಕ ಬಿಜೆಪಿಯನ್ನು ಮಣಿಸಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಏರಿತ್ತೋ ಅದೇ ಕಮಿಷನ್ ಅಸ್ತ್ರ ಇದೀಗ ಈಗ ಕಾಂಗ್ರೆಸ್ ಗೆ ತಿರುಗುಬಾಣವಾಗಿದೆ. ಇದುವರೆಗೆ ವರ್ಗಾವಣೆಯಲ್ಲಿ ಕಮಿಷನ್, ಗುತ್ತಿಗೆಯಲ್ಲಿ ಕಮಿಷನ್ ಎಂಬ ಆಪಾದನೆಗಳನ್ನು ಮಾಡುತ್ತಿದ್ದ ಬಿಜೆಪಿಗೆ ಈಗ ಗುತ್ತಿಗೆದಾರ ಅಂಬಿಕಾ ಪತಿ ಮನೆಯಲ್ಲಿ ಸಿಕ್ಕಿರುವ 42 ಕೋಟಿ ರೂಪಾಯಿ ವಿಷಯವನ್ನು ಎತ್ತಿಕೊಂಡು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ರಾಜ್ಯ ಎಟಿಎಂ ಸರ್ಕಾರ್ ಆಗಲಿದೆ ಎಂದು ಬಿಜೆಪಿ ಹಿಂದಿನಿಂದಲೇ ಆರೋಪಿಸಿಕೊಂಡು ಬಂದಿದೆ. ಅದಕ್ಕೆ ಪೂರಕವಾಗಿ ಪಂಚರಾಜ್ಯ ಚುನಾವಣೆಯ ಹೊತ್ತಿನಲ್ಲಿ ಸಿಕ್ಕಿರುವ ದೊಡ್ಡ ಮೊತ್ತದ ಹಣವನ್ನು ಈ ಆರೋಪಕ್ಕೆ ಸಾಕ್ಷಿಯಾಗಿ ನೀಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಮಿಷನ್ ಅಸ್ತ್ರವನ್ನು ಬಿಜೆಪಿ ಬಿಟ್ಟಿದೆ.
ಬಿಜೆಪಿಯ ಹಿರಿಯ ನಾಯಕರಾದ ಪ್ರಹ್ಲಾದ್ ಜೋಶಿ, ಸಿ.ಟಿ. ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಪಂಚರಾಜ್ಯಗಳ ಚುನಾವಣೆ ಗೆ ಗೆಲ್ಲಲು ಕಮಿಷನ್ ಕಲೆಕ್ಷನ್ ಮಾಡಿ ಕಳಿಸಿಕೊಡಿ ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ತಾಕೀತು ಮಾಡಿದೆ ಎನ್ನುವುದು ಪ್ರಲ್ದಾಹ್ ಜೋಶಿ ಮತ್ತು ಸಿ.ಟಿ. ರವಿ ಆರೊಪ. ಪ್ರಲ್ಹಾದ್ ಜೋಶಿ ಅವರು 1,000 ಕೋಟಿ ರೂಪಾಯಿ ಟಾರ್ಗೆಟ್ ಎಂದರೆ ಸಿ.ಟಿ ರವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 2,000 ಕೋಟಿ ಕಲೆಕ್ಷನ್ ಮಾಡುವ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement