ಜೆಡಿಎಸ್ ನಿಂದ ಉಚ್ಛಾಟನೆ: ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ವಿರುದ್ಧ ಕಾನೂನು ಸಮರಕ್ಕೆ ಸಿಎಂ ಇಬ್ರಾಹಿಂ ಸಜ್ಜು

ಬಿಜೆಪಿಯೊಂದಿಗಿನ ಮೈತ್ರಿಯನ್ನು ವಿರೋಧಿಸಿ ಬಂಡಾಯವೆದ್ದ ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಇತ್ತೀಚೆಗಷ್ಟೇ ಹೆಚ್ ಡಿ ದೇವೇಗೌಡರು ವಜಾಗೊಳಿಸಿ ತಮ್ಮ ಪುತ್ರ ಹೆಚ್ ಡಿ ಕುಮಾರಸ್ವಾಮಿಯವರನ್ನು ರಾಜ್ಯಾಧ್ಯಕ್ಷರನ್ನಾಗಿ ಘೋಷಿಸಿದ್ದರು.
ಸಿ ಎಂ ಇಬ್ರಾಹಿಂ
ಸಿ ಎಂ ಇಬ್ರಾಹಿಂ

ಬೆಂಗಳೂರು: ಬಿಜೆಪಿಯೊಂದಿಗಿನ ಮೈತ್ರಿಯನ್ನು ವಿರೋಧಿಸಿ ಬಂಡಾಯವೆದ್ದ ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಇತ್ತೀಚೆಗಷ್ಟೇ ಹೆಚ್ ಡಿ ದೇವೇಗೌಡರು ವಜಾಗೊಳಿಸಿ ತಮ್ಮ ಪುತ್ರ ಹೆಚ್ ಡಿ ಕುಮಾರಸ್ವಾಮಿಯವರನ್ನು ರಾಜ್ಯಾಧ್ಯಕ್ಷರನ್ನಾಗಿ ಘೋಷಿಸಿದ್ದರು. ಇದನ್ನು ಪ್ರಶ್ನಿಸಿ ಇಬ್ರಾಹಿಂ ಅವರು ಇದೀಗ ಜೆಡಿಎಸ್ ವರಿಷ್ಠರ ವಿರುದ್ಧ ಕಾನೂನು ಹೋರಾಟ ನಡೆಸಲು ಸಜ್ಜಾಗಿದ್ದಾರೆ.

ತಾವೇ ನಿಜವಾದ ಜೆಡಿಎಸ್ ರಾಜ್ಯಾಧ್ಯಕ್ಷ, ತಮ್ಮನ್ನು ಯಾವ ಆಧಾರದ ಮೇಲೆ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಪ್ರಶ್ನಿಸಿ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ. 

ನಾನು ಜೆಡಿಎಸ್ ನಿಂದ ರಾಜ್ಯಾಧ್ಯಕ್ಷನಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದೆ. ರಾಜ್ಯ ಘಟಕದ ಸಭೆಯನ್ನು ನಾನು ಕರೆದಿರಲಿಲ್ಲ. ನಾನು ಕರೆಯದಿರುವ ಕಾರಣ ನಿನ್ನೆಯ ಸಭೆ ಕಾನೂನುಬಾಹಿರವಾಗಿದೆ. ನಮ್ಮದೇ ಮೂಲ ಜೆಡಿಎಸ್ ಎನ್ನುತ್ತಾರೆ ಸಿ ಎಂ ಇಬ್ರಾಹಿಂ. ನನ್ನನ್ನು ಕೇಳದೆ ಜೆಡಿಎಸ್ ರಾಜ್ಯ ಘಟಕವನ್ನು ವಿಸರ್ಜಿಸಲು ಹೇಗೆ ಸಾಧ್ಯ, ನನ್ನನ್ನು ಕಿತ್ತು ಹೆಚ್ ಡಿ ಕುಮಾರಸ್ವಾಮಿಯವರರನ್ನು ನೇಮಕ ಮಾಡಲು ಹೇಗೆ ಸಾಧ್ಯ ಎಂದು ಕೇಳುತ್ತಾರೆ ಇಬ್ರಾಹಿಂ.

ಜೆಡಿಎಸ್ ನ ಈ ಬೆಳವಣಿಗೆಯಿಂದ ಪಕ್ಷ ಇಬ್ಭಾಗವಾಗಬಹುದು ಎನ್ನುತ್ತಾರೆ ಕಾನೂನು ತಜ್ಞರು. ತಾವು ಸದ್ಯದಲ್ಲಿಯೇ ಸಭೆ ಕರೆಯುವುದಾಗಿ ಇಬ್ರಾಹಿಂ ಹೇಳುತ್ತಾರೆ. ನಾನು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ಮೊನ್ನೆಯ ಸಭೆಯಲ್ಲಿ ಯಾರ್ಯಾರಿದ್ದಾರೆ ಎಂದು ಪಟ್ಟಿ ಮಾಡಿಲ್ಲ. ಅವರಿಗೆ ಅಷ್ಟು ಧೈರ್ಯವಿದ್ದರೆ ಜನರ ಮುಂದೆ ಹೋಗಿ ಆಯ್ಕೆಯಾಗಿ ಬರಲಿ ಎಂದು ಕೇಳುತ್ತಾರೆ.

ತಮಗೆ 10 ಶಾಸಕರ ಬೆಂಬಲ ಇದೆ ಎನ್ನುತ್ತಾರೆ ಇಬ್ರಾಹಿಂ. ಆದರೆ ಭಯದಿಂದ ಜನರ ಮುಂದೆ ಹೋಗಲು ನಿರಾಕರಿಸುತ್ತಿದ್ದಾರೆ. ಮೊನ್ನೆ ಅಕ್ಟೋಬರ್ 16ರಂದು ನಡೆದ ಸಭೆಯಲ್ಲಿ ಹಲವು ಅಲ್ಪಸಂಖ್ಯಾತ ನಾಯಕರು ಭಾಗವಹಿಸಿದ್ದರು. ನನ್ನ ಭದ್ರತೆಗಾಗಿ ಪೊಲೀಸ್ ದೂರು ನೀಡಿದ್ದೆ. ನಾನು ಜಿಲ್ಲೆಗಳಿಗೆ ಹೋಗಿ ಜಿಲ್ಲಾ ಘಟಕಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದೇನೆ. ಹಲವರ ಬೆಂಬಲ ನನಗಿದೆ. ನನ್ನ ನಾಲ್ಕು ವರ್ಷಗಳ ವಿಧಾನ ಪರಿಷತ್ ಕಾಲಾವಧಿಯನ್ನು ಬಿಟ್ಟು ಜೆಡಿಎಸ್ ಗೆ ಬಂದಿದ್ದೆ. ಆಗ ನನಗೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಹಲವು ಭರವಸೆಗಳನ್ನು ನನಗೆ ಕೊಟ್ಟಿದ್ದರು ಎಂದರು.

ಜೆಡಿಎಸ್ ನ ಕೇರಳ, ಮಹಾರಾಷ್ಟ್ರ ಮತ್ತು ತೆಲಂಗಾಣ ಘಟಕಗಳ ಬೆಂಬಲವೂ ಇದೆ ಎನ್ನುತ್ತಾರೆ ಇಬ್ರಾಹಿಂ. ಕೇರಳದ ಇಬ್ಬರು ಶಾಸಕರಲ್ಲಿ ಒಬ್ಬರು ಸಚಿವರು. ಅವರು ದೇವೇಗೌಡರ ಜೆಡಿಎಸ್ ನ್ನು ಆಯ್ಕೆ ಮಾಡಿಕೊಂಡರೆ ಎಲ್ ಡಿಎಫ್ ಸರ್ಕಾರದಿಂದ ವಜಾಗೊಳ್ಳುತ್ತಾರೆ ಎಂದು ಇಬ್ರಾಹಿಂ ಹೇಳುತ್ತಾರೆ. 

ಮೊನ್ನೆ ಗುರುವಾರ ದೇವೇಗೌಡರನ್ನು ಭೇಟಿಯಾಗುವ ಯೋಜನೆಯಿತ್ತು, ಸಭೆ ಕೂಡ ನಿಗದಿಯಾಗಿತ್ತು. ಆದರೆ ಅದನ್ನು ಕುಮಾರಸ್ವಾಮಿಯವರು ಕೊನೆ ಕ್ಷಣದಲ್ಲಿ ತಪ್ಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com