ಬೆಂಗಳೂರು: ವಿವಿಧ ನಿಗಮ ಮಂಡಳಿಗಳ ಪ್ರಥಮ ದರ್ಜೆ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ನಡೆಯುತ್ತಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಬಿಜೆಪಿ, ರಾಜ್ಯವನ್ನು ಕತ್ತಲಲ್ಲಿರಿಸಿರುವ ಕಾಂಗ್ರೆಸ್ ಸರ್ಕಾರ ಸರ್ಕಾರ, ಈಗ ರಾಜ್ಯದ ವಿದ್ಯಾರ್ಥಿಗಳ ಬದುಕನ್ನು ಕತ್ತಲಲ್ಲಿರಿಸುತ್ತದೆ. ಕೆ. ಇ. ಎ. ನಡೆಸಿದ ಪರೀಕ್ಷೆಗಳಲ್ಲಿ ಅಕ್ರಮದ ನಡೆಯುತ್ತಿದೆ ಎಂದು ದೂರುಗಳು ಬಂದರೂ, ಅದಕ್ಕೆ ಕಡಿವಾಣ ಹಾಕದೇ ಕಣ್ಮುಚ್ಚಿ ಕುಳಿತಿದ್ದ ಕಾಂಗ್ರೆಸ್ ಸರ್ಕಾರವೇ, ಅಕ್ರಮಗಳ ಹಿಂದಿನ ಅಸಲಿ ಸೂತ್ರಧಾರ! ಎಂದು ಆರೋಪಿಸಿದೆ.
ಅಫಜಲ್ಪುರದ ಕಾಂಗ್ರೆಸ್ ಮುಖಂಡ ಆರ್. ಡಿ. ಪಾಟೀಲ್ ಪ್ರತಿ ವಿದ್ಯಾರ್ಥಿಗಳಿಂದ ಅಕ್ರಮವಾಗಿ ಸಂಗ್ರಹಿಸಿದ ₹20-25 ಲಕ್ಷ, ಛತ್ತೀಸ್ಘಡ ತಲುಪಿದೆಯೋ ಅಥವಾ ತೆಲಂಗಾಣ ತಲುಪಿದೆಯೋ ಎಂಬುದನ್ನು ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದೆ.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಬಿಜೆಪಿ ಸಾಕಿದ ರಣಹದ್ದುಗಳು ಈಗಲೂ ಕಾರ್ಯಾಚರಣೆ ನಡೆಸಿವೆ. ಆದರೆ ಅವುಗಳನ್ನು ನಮ್ಮ ಸರ್ಕಾರ ಹೆಡೆಮುರಿ ಕಟ್ಟಿದೆ. ಪಿಎಸ್ ಐಅಕ್ರಮ ನಡೆಸಿದ್ದವರೇ ಈಗ ಕೆಇಎ ಪರೀಕ್ಷೆಯ ಅಕ್ರಮದಲ್ಲೂ ಭಾಗಿಯಾಗಿದ್ದಾರೆ, ನಮ್ಮ ಸರ್ಕಾರ ತಕ್ಷಣಕ್ಕೆ ಅಕ್ರಮವನ್ನು ಬಯಲಿಗೆಳೆದು ಸ್ಪಷ್ಟ ಸಂದೇಶ ನೀಡಿದೆ ಎಂದು ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ: ಎಫ್ಡಿಎ ಪರೀಕ್ಷೆಯಲ್ಲಿ ಅಕ್ರಮ: 21 ಮಂದಿಯ ಬಂಧನ
ಬಿಜೆಪಿ ಸರ್ಕಾರವಾಗಿದ್ದಿದ್ದರೆ,ಅಕ್ರಮ ನಡೆದೇ ಇಲ್ಲ ಎಂದು ಸಮರ್ಥಿಸುತ್ತಿತ್ತು,ಆರೋಪಿಗಳ ಜೊತೆಗೆ ಬಿಜೆಪಿಗರೂ ಕೈಜೋಡಿಸಿರುತ್ತಿದ್ದರು, ಹಗರಣ ಹೊರಬಂದಮೇಲೆ ಆರೋಪಿಗಳನ್ನು ಬಂಧಿಸಲು ಮೀನಮೇಷ ಎಣಿಸುತ್ತಿತ್ತು
ನಮ್ಮ ಸರ್ಕಾರ ಯಾವುದೇ ಅಕ್ರಮಗಳನ್ನು ಸಹಿಸುವುದಿಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
Advertisement