ಮುಸ್ಲಿಮರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ನಮ್ಮ ಜಾತ್ಯತೀತ ಸಿದ್ಧಾಂತ ತೆಗೆದುಹಾಕುವುದಿಲ್ಲ: ಹೆಚ್ ಡಿ ದೇವೇಗೌಡ

ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಬಗ್ಗೆ ಹಲವು ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಲು ಇಂದು ಬುಧವಾರ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದರು.
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಬಗ್ಗೆ ಹಲವು ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಲು ಇಂದು ಬುಧವಾರ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದರು.

ಬಿಜೆಪಿ ಜೊತೆ ಸ್ನೇಹ ಮಾಡಿಕೊಳ್ಳುವ ಮೂಲಕ ಜೆಡಿಎಸ್ ಜಾತ್ಯತೀತ ತತ್ವಗಳನ್ನು ಗಾಳಿಗೆ ತೂರಿದೆ ಎಂಬ ಆರೋಪಕ್ಕೆ ಉತ್ತರಿಸಿದ ದೇವೇಗೌಡರು, ನಾವು ಜಾತ್ಯಾತೀತ ಸಿದ್ಧಾಂತವನ್ನು ಗಾಳಿಗೆ ತೂರುವ ರಾಜಕಾರಣವನ್ನು ಯಾವತ್ತೂ ಮಾಡಿಲ್ಲ. ಬಿಜೆಪಿ ನಾಯಕರ ಜೊತೆ ಕದ್ದು ಮುಚ್ಚಿ ಮಾತನಾಡುವ ಅವಶ್ಯಕತೆ ನಮಗಿಲ್ಲ. ನಾವು ಯಾರಿಗೂ ಹೆದರಿಕೊಳ್ಳಬೇಕಾದ ಅನಿವಾರ್ಯತೆಯೂ ಇಲ್ಲ. ಕಳೆದ ಅರವತ್ತು ವರ್ಷಗಳಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಟ್ಟಿಲ್ಲ ಎಂದು ಹೇಳಿದರು.

ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಆದ ತಕ್ಷಣ ಮುಸ್ಲಿಮರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ನಾನಿನ್ನೂ ಬದುಕಿದ್ದೇನೆ, ಮುಸ್ಲಿಂ ಸಮುದಾಯವನ್ನು ನಮ್ಮ ಜೊತೆ ಉಳಿಸಿಕೊಳ್ಳುತ್ತೇವೆ. ಯಾವ ಆತಂಕ ಕೂಡ ಬೇಡ ಎಂದರು.

ಹಿಂದೆ ಹೆಚ್ ಡಿ ಕುಮಾರಸ್ವಾಮಿ ಸರ್ಕಾರ ತೆಗೆಯಲು 17 ಮಂದಿ ಶಾಸಕರನ್ನು ಬಾಂಬೆಗೆ ಕಳುಹಿಸಿದ್ದು ಯಾರು? ಇಲ್ಲಿ ಬಿಜೆಪಿ ಸರ್ಕಾರ ಬರಲು ಅವಕಾಶ ಮಾಡಿಕೊಟ್ಟವರು ಯಾರು? ಚರ್ಚೆಯಾಗಲಿ. ಕುಮಾರಸ್ವಾಮಿ ಸಿಎಂ ಆಗಲು ಯಾರ ಮನೆ ಬಾಗಿಲಿಗಾದ್ರೂ ಹೋಗಿದ್ರಾ? ಮುಖ್ಯಮಂತ್ರಿ ಆಗಿ ಅಂತ ಕುಮಾರಸ್ವಾಮಿ ಮನೆಗೆ ಬಂದಿದ್ದು ಯಾರು? ಯಾವ ಕಾರಣಕ್ಕೂ ನಿಮ್ಮ ಸಹವಾಸ ಬೇಡ ಅಂತಾ ಒಪ್ಪಿರಲಿಲ್ಲ ಎಂದು 2018ರಲ್ಲಿ ಕಾಂಗ್ರೆಸ್‌ ಜೊತೆಗಿನ ಮೈತ್ರಿ ಬಗ್ಗೆ ಮಾತನಾಡಿದರು.

ಕುಮಾರಸ್ವಾಮಿ ಅವರು ಬಿಜೆಪಿ ನಾಯಕರನ್ನು ಭೇಟಿ ಆಗುವ ಮೊದಲು ಗೃಹ ಸಚಿವ ಅಮಿತ್ ಶಾ ಬಳಿ ನಾನು ಚರ್ಚೆ ಮಾಡಿದ್ದೇನೆ. ಕದ್ದು ಮುಚ್ಚಿ ಮಾತನಾಡುವ ಅಗತ್ಯ ಇಲ್ಲ. ಕರ್ನಾಟಕ ಪರಿಸ್ಥಿತಿ ಏನಿದೆ ಅಂತ ಶಾ ಹತ್ತಿರ ಎಲ್ಲಾ ವಿಚಾರ ಮಾತಾಡಿದ್ದೇನೆ. ಇದನ್ನು ಮೊದಲು ಸರಿ ಮಾಡಿ ನಂತರ ಕುಮಾರಸ್ವಾಮಿ ಅವರು ಬಂದು ಮಾತಾಡುತ್ತಾರೆ ಎಂದು ಹೇಳಿದ್ದೆ. ಯಾವುದೇ ಸಮುದಾಯಕ್ಕೆ ಈ ಪಕ್ಷದಿಂದ ಅನ್ಯಾಯ ಆಗಲು ಬಿಡಲ್ಲ ಎಂದು ಸ್ಪಷ್ಟಪಡಿಸಿದರು.

ಎಚ್‌ಡಿ ದೇವೇಗೌಡರು ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹೇಳುತ್ತಾರೆ. ಹಾಗಾದ್ರೆ ಬಿಎಂ ಫಾರೂಕ್ ಅವರನ್ನು ಸೋಲಿಸಿದ್ಯಾರು ಎಂದು ಪ್ರಶ್ನಿಸಿದ ದೇವೇಗೌಡರು, ಮಡಿವಂತಿಕೆಯಿಂದ ಬಿಜೆಪಿ ಜೊತೆ ಪ್ರತ್ಯಕ್ಷ ಹಾಗೂ ಪರೋಕ್ಷ ಸಂಬಂಧ ಇಲ್ಲದೇ ಸ್ವಚ್ಛವಾಗಿದ್ದೀವಿ ಎನ್ನುವ ಒಂದೇ ಒಂದು ರಾಜಕೀಯ ಪಕ್ಷ ಇದ್ರೆ ಹೇಳಿ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಬೇಕು ಎಂದು ಬಿಜೆಪಿ ಜೊತೆ ಎಡಪಕ್ಷಗಳ ಕೆಲ ಮುಖಂಡರು ಕೆಲಸ ಮಾಡಿದ್ದು ಬಹಿರಂಗವಾಗಿದೆ ಎಂದರು.

ಹೆಚ್ ಡಿ ಕುಮಾರಸ್ವಾಮಿ ಹತ್ತು ತಿಂಗಳು ಪಂಚರತ್ನ ಯಾತ್ರೆಯನ್ನು ಮಾಡಿದ್ದರು. ಹಳ್ಳಿ ಹಳ್ಳಿಗೆ ನೀರನ್ನು ಕೊಡ್ತೀವಿ ಎಂದು ಹೇಳಿದ್ದರು. ಆದರೆ, ಗೆಲ್ಲಲಿಲ್ಲ. ಮಂಗಳವಾರ ರಾತ್ರಿ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಅವರ ಜೊತೆ ಮಾತನಾಡಿದೆ. ಕುಮಾರಸ್ವಾಮಿ, ದೇವೇಗೌಡರಿಂದ ನನ್ನನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ನೀವು ಕುಮಾರಸ್ವಾಮಿ ಬದುಕಿರೋವರೆಗೂ ಎಲ್ಲಿಗೂ ಹೋಗಲ್ಲ ಅಂತ ಹೇಳಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com