ಬೆಂಗಳೂರು: ಬೆಂಗಳೂರಿನಲ್ಲಿ ಉಂಟಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ತಿಳಿಸಲು ಚೆನ್ನೈನಲ್ಲಿ ಅವರ ಭೇಟಿಗಾಗಿ 48 ಗಂಟೆಗಳ ಕಾಲ ಕಾದಿದ್ದೆ. ಆದರೂ ಅವರ ಭೇಟಿಗೆ ಅವಕಾಶ ಸಿಗಲಿಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಅವರು ಗುರುವಾರ ಹೇಳಿದ್ದಾರೆ. .
ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಸ್ವರೂಪ ಪಡೆಯುತ್ತಿರುವ ಬಿನ್ನಲ್ಲೇ, ರಾಜಕೀಯ ಹೊರತುಪಡಿಸಿ ಸೌಹಾರ್ದ ಭೇಟಿಗಾಗಿ ಚೆನ್ನೈಗೆ ತೆರಳಿದ್ದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಸಿಎಂ ಸ್ಟಾಲಿನ್ ಅವರನ್ನು ಭೇಟಿಯಾಗಲು ಸಾಧ್ಯವಾಗದಿದ್ದರೂ, ಇತರ ಡಿಎಂಕೆ ನಾಯಕರನ್ನು ಭೇಟಿ ಮಾಡಿದ್ದು, ಈ ಭೇಟಿ ಅತ್ಯಂತ ಸಕಾರಾತ್ಮಕವಾಗಿದೆ' ಎಂದಿದ್ದಾರೆ.
ಬೆಂಗಳೂರಿನಲ್ಲಿ ಉಂಟಾಗುತ್ತಿರುವ ಕುಡಿಯುವ ನೀರಿನ ಬಿಕ್ಕಟ್ಟು ಮತ್ತು ಕರ್ನಾಟಕದ ಬರ ಪರಿಸ್ಥಿತಿಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಲು ನಾನು ಬಯಸಿದ್ದೆ ಮತ್ತು ಈ ಸಮಸ್ಯೆಯನ್ನು ಪ್ರಾದೇಶಿಕ ಸಂಘರ್ಷವಾಗಿ ತೆಗೆದುಕೊಳ್ಳದೆ ಮಾನವೀಯ ಬಿಕ್ಕಟ್ಟು ಎಂದು ಪರಿಗಣಿಸಬೇಕೆಂದು ಲೆಹರ್ ಸಿಂಗ್ ಹೇಳಿದ್ದಾರೆ.
ನಾನು ಚೆನ್ನೈಗೆ ಹೋಗಿ ಎರಡು ದಿನಗಳ ಕಾಲ ಸಿಎಂ ಸ್ಟಾಲಿನ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಆದರೆ ದುರದೃಷ್ಟವಶಾತ್, ನಾನು 48 ಗಂಟೆಗಳ ಕಾಲ ಕಾದರೂ, ಎಂಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಆದಾಗ್ಯೂ, ಹಿರಿಯ ಡಿಎಂಕೆ ಸಂಸದರು ಮತ್ತು ತಮಿಳುನಾಡು ನಾಯಕರೊಂದಿಗಿನ ನನ್ನ ಭೇಟಿಯು ಅತ್ಯಂತ ಸಕಾರಾತ್ಮಕವಾಗಿತ್ತು ಮತ್ತು ಅವರು ನಾನು ನೀಡಿದ ಸಲಹೆಗಳನ್ನು ಸ್ವೀಕರಿಸಿದರು ಎಂದು ಲೆಹರ್ ಸಿಂಗ್ ತಿಳಿಸಿದ್ದಾರೆ.
ನನ್ನ ಭೇಟಿಯು ರಾಜಕೀಯ ರಹಿತವಾಗಿದ್ದು, ಕಾವೇರಿ ಸಮಸ್ಯೆಯನ್ನು ಪ್ರಾದೇಶಿಕ ಸಂಘರ್ಷವಾಗಿ ಪರಿಗಣಿಸದೆ ಮಾನವೀಯ ನೆಲೆಯಲ್ಲಿ ನೋಡುವಂತೆ ತಮಿಳುನಾಡು ಸಿಎಂಗೆ ಮನವಿ ಮಾಡುತ್ತೇನೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಭೇಟಿಯಾಗಿ ಚರ್ಚೆ ನಡೆಸಿದರೆ ಈ ಬಿಕ್ಕಟ್ಟಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬಹುದು ಎಂಬ ಭರವಸೆ ಇದೆ ಎಂದು ಬಿಜೆಪಿ ಸಂಸದರು ತಿಳಿಸಿದ್ದಾರೆ.
Advertisement