'ದಪ್ಪ ಚರ್ಮದ, ಭ್ರಷ್ಟ ಚಲುವರಾಯಸ್ವಾಮಿಯವರೇ, ಯಾವಾಗ ರಾಜೀನಾಮೆ ನೀಡುತ್ತಿರಾ..?'
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿದ್ದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಸಮರ ತಾರಕಕ್ಕೇರಿದೆ. ರಾಜ್ಯ ಸರ್ಕಾರದ ವಿರುದ್ಧ ಸವಾರಿ ಮಾಡಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ರೂಪಿಸಿಕೊಂಡಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ದಪ್ಪ ಚರ್ಮದ, ಭ್ರಷ್ಟ ಚಲುವರಾಯಸ್ವಾಮಿಯವರೇ, ಯಾವಾಗ ರಾಜೀನಾಮೆ ನೀಡುತ್ತಿರಾ..? ಎಂದು ಪ್ರಶ್ನಿಸಿದೆ.
ನಿಮ್ಮ ಕರ್ಮಕಾಂಡ ಬಯಲಾದ ಮೇಲೆಯೂ ಅಧಿಕಾರದ ಲಾಲಸೆಗೆ ಬಿದ್ದು ಇನ್ನೂ ಕುರ್ಚಿಗೆ ಅಂಟಿಕೊಂಡಿದ್ದೀರಲ್ಲಾ! ಸಿದ್ದರಾಮಯ್ಯ ಅವರೇ, ನಿಮ್ಮದು ಭ್ರಷ್ಟ ಸರ್ಕಾರ ಅಲ್ಲದಿದ್ದರೆ ಕೂಡಲೇ ಚೆಲುವರಾಯಸ್ವಾಮಿ ಅವರಿಂದ ರಾಜೀನಾಮೆ ಕೇಳಿ ಪಡೆಯಿರಿ.
ಕಾಸಿಗಾಗಿ ಎಂತಹ ವ್ಯಕ್ತಿಯನ್ನಾದರೂ ಕಾಂಗ್ರೆಸ್ ಸರ್ಕಾರ ವರ್ಗಾವಣೆ ಮಾಡಲಿದೆ ಎಂಬುದಕ್ಕೆ ಮತ್ತೊಂದು ತಾಜಾ ನಿದರ್ಶನ ಇಲ್ಲಿದೆ. ಎರಡು ವಾರಗಳ ಹಿಂದೆ ಗದಗ ಜಿಲ್ಲಾಧಿಕಾರಿ ಕರ್ತವ್ಯ ಲೋಪ ಎಸಗಿದ ಕಾರಣಕ್ಕೆ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಿದ್ದರು.
ಆದರೆ, ಸಿದ್ದರಾಮಯ್ಯ ಮತ್ತು ಅವರ ಎಟಿಎಂ ಸರ್ಕಾರ ಕಮಿಷನ್ಗಾಗಿ ಅಮಾನತ್ತಾಗಿದ್ದ ಮಹೇಶನನ್ನು ಕೆರೂರು ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಯನ್ನಾಗಿ ಮಾಡಿ ಬಡ್ತಿ ನೀಡಿ ವರ್ಗಾವಣೆ ಮಾಡಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಗೃಹ ಸಚಿವ ಡಾ ಜಿ.ಪರಮೇಶ್ವರ್ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳಿಗೆ ತಿಂಗಳ ಸಂಬಳ ಸಹ ನೀಡಲಾಗದಷ್ಟು ರಾಜ್ಯದ #ATMSarkara ದಿವಾಳಿಯಾಗಿದೆ. ನೌಕರರು ತಮ್ಮ ಪಾಲಿನ ಸಂಬಳ ಕೇಳಿದರೆ ಬೈಗುಳ ನಿಶ್ಚಿತ, ಬೆದರಿಕೆ ಖಚಿತ, ಅವಮಾನ ಉಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ ಸರ್ಕಾರ ಸಂಬಳ ಕೇಳುವುದನ್ನು ಮಕ್ಕಳಾಟ ಎಂದು ಉಡಾಫೆ ಮಾಡಬೇಡಿ!! ಸಿದ್ದರಾಮಯ್ಯ ಅವರೆ ಈ ಪ್ರಕರಣ ನಡೆದೇ ಇಲ್ಲ, ಇದು ನಕಲಿ ಎಂದು ನಿಮ್ಮ ಸಂಸ್ಥೆಗೆ ಹೇಳಿ, ನಕಲಿ ಸರ್ಟಿಫಿಕೇಟ್ ನೀಡಬೇಡಿ ಎಂದು ಟೀಕಿಸಿದೆ.
ತನ್ನ ಅವಾಸ್ತವಿಕ ಗ್ಯಾರಂಟಿ ಮೂಲಕ ವಾಯವ್ಯ ಸಾರಿಗೆ ಸಂಸ್ಥೆಯನ್ನು ಈಗಾಗಲೇ ಹಳ್ಳ ಹಿಡಿಸಿದೆ. ಇದೀಗ ಕಲ್ಯಾಣ ಕರ್ನಾಟಕ ಸಾರಿಗೆ ಚಾಲಕರಿಗೆ ಇನ್ನೂ ವೇತನ ನೀಡದೆ ಇದನ್ನೂ ಮುಚ್ಚುವ ಸ್ಥಿತಿಗೆ ಕೊಂಡೊಯ್ಯಲಾಗುತ್ತಿದೆ.
ಶಕ್ತಿ ಯೋಜನೆಯ ಬಾಕಿ ಉಳಿಸಿಕೊಂಡು ನಿಗಮಗಳ ಉಸಿರುಗಟ್ಟಿಸುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರ ಚಾಲಕ-ನಿರ್ವಾಹಕರ ಬದುಕನ್ನೇ ಬರಡು ಮಾಡುತ್ತಿದೆ. ಆಡಳಿತ ನಡೆಸುವುದು ಎಂದರೆ ಹೊಸ ಯೋಜನೆಗಳನ್ನು ತಂದು ಹಾಕುವುದಲ್ಲ. ಇರುವ ವ್ಯವಸ್ಥೆಯನ್ನು ಹಳಿತಪ್ಪದಂತೆ ನೋಡಿಕೊಳ್ಳುವ ಗ್ಯಾರಂಟಿಯೇ ಉತ್ತಮ ಆಡಳಿತ ಎಂದು ಬಿಜೆಪಿ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ