ಹಾಸನ:ಜೆಡಿಎಸ್ ನಲ್ಲಿ ಹಾಸನ ಕ್ಷೇತ್ರದಿಂದ (Hassan assembly constituency) ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತೀವ್ರ ಒಲವು ತೋರಿರುವ ಭವಾನಿ ರೇವಣ್ಣ (Bhavani Revanna) ಮತ್ತು ಸ್ವರೂಪ್ ಪ್ರಕಾಶ್ ಅವರದ್ದೇ ಪಕ್ಷಕ್ಕೆ ಸದ್ಯದ ಚಿಂತೆಯಾಗಿದೆ.ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ದೇವೇಗೌಡರ ಕುಟುಂಬದಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯ ತಲೆದೋರಿದೆ ಎಂಬುದು ಈಗ ರಾಜಕೀಯ ಪಡಸಾಲೆಯಲ್ಲಿ ಬಹುಚರ್ಚಿತ ವಿಷಯ.
ಹಾಸನದ ಜೆಡಿಎಸ್ ಕಾರ್ಯಕರ್ತರು ಈಗ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (H D Kumaraswamy) ಹಾಸನ ಕ್ಷೇತ್ರ ಟಿಕೆಟ್ ಹಂಚಿಕೆಗೆ ಸಂಬಂಧಪಟ್ಟಂತೆ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು, ನಾಯಕರ ಸಭೆ ನಡೆಯಲಿದ್ದು ಅಲ್ಲಿ ತೀರ್ಮಾನ ತೆಗೆದುಕೊಂಡು ನಾಳೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೆಚ್ ಡಿ ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ.
ಜೆಡಿಎಸ್ ನ 45 ಅಭ್ಯರ್ಥಿಗಳ ಎರಡನೇ ಪಟ್ಟಿಯ ಜೊತೆಗೆ ಹಾಸನ ಅಭ್ಯರ್ಥಿಯನ್ನು ಕೂಡ ಘೋಷಿಸಲಾಗುವುದು ಎಂದಿದ್ದಾರೆ. ಮಾಜಿ ಸಚಿವ ಹೆಚ್ ಡಿ ರೇವಣ್ಣ, ಅವರ ಮಕ್ಕಳಾದ ಪ್ರಜ್ವಲ್ ಮತ್ತು ಸೂರಜ್ ಭವಾನಿ ರೇವಣ್ಣ ಅವರಿಗೆ ಬೆಂಬಲ ಸೂಚಿಸಿದರೆ ಕುಮಾರಸ್ವಾಮಿಯವರು ಸ್ವರೂಪ್ ಪ್ರಕಾಶ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ.
ಒಂದು ವಾರದ ಹಿಂದೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಭವಾನಿ ಹಾಸನ ಅಭ್ಯರ್ಥಿ ಎಂದು ಘೋಷಿಸಿದಾಗ ಮಾಜಿ ಸಿಎಂ ಭವಾನಿ ಅವರ ಉಮೇದುವಾರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಸನ ಕ್ಷೇತ್ರದ ಟಿಕೆಟ್ ನ್ನು ಪಕ್ಷ ಅಂತಿಮಗೊಳಿಸಿಲ್ಲ ಎಂದು ಹೇಳಿದ್ದರು. ಇದು ಭವಾನಿಯವರಿಗೆ ತೀವ್ರ ಮುಜುಗರ ತಂದೊಡ್ಡಿದ್ದು ಸುಳ್ಳಲ್ಲ. ಈ ಬಗ್ಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರನ್ನು ಪ್ರಶ್ನಿಸಿದರೆ, ನನಗೆ ಈ ಬಗ್ಗೆ ತಿಳಿದಿಲ್ಲ, ಟಿಕೆಟ್ ಹಂಚಿಕೆ ವಿಚಾರದಲ್ಲಿ ದೇವೇಗೌಡರು, ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರ ತೀರ್ಮಾನವೇ ಅಂತಿಮ ಎನ್ನುತ್ತಾರೆ.
ಕುಮಾರಸ್ವಾಮಿ ಅವರು ಗ್ರಾಮಗಳು ಮತ್ತು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರೂ ಭವಾನಿ ರೇವಣ್ಣ ಅವರು ಅಷ್ಟೇನೂ ವಿಚಲಿತರಾಗಿರುವಂತೆ ಕಂಡುಬರುತ್ತಿಲ್ಲ. ಜೆಡಿಎಸ್ನ ಮಾಜಿ ಶಾಸಕ ದಿವಂಗತ ಎಚ್ಎಸ್ ಪ್ರಕಾಶ್ ಅವರ ಪುತ್ರ ಹಾಗೂ ಟಿಕೆಟ್ ಆಕಾಂಕ್ಷಿಯಾಗಿರುವ ಸ್ವರೂಪ್ ಪ್ರಕಾಶ್ ಈಗಾಗಲೇ ಪ್ರಚಾರ ಆರಂಭಿಸಿದ್ದು, ಹಿರಿಯ ನಾಗರಿಕರ ಆಶೀರ್ವಾದ ಪಡೆಯುತ್ತಿದ್ದಾರೆ. ಕುಮಾರಸ್ವಾಮಿ ಅವರು ಹಾಸನಕ್ಕೆ ಭೇಟಿ ನೀಡಿದಾಗ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರಿಂದ ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿದುಬಂದಿದೆ.
Advertisement