ಅರಸೀಕೆರೆ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ: ಹಾಲಿ ಶಾಸಕ ಶಿವಲಿಂಗೇಗೌಡಗೆ ಸೆಡ್ಡು ಹೊಡೆದ ಕುಮಾರಸ್ವಾಮಿ
ಅರಸೀಕೆರೆ ಕ್ಷೇತ್ರದ ಹಾಲಿ ಶಾಸಕ ಕೆ ಎಂ ಶಿವಲಿಂಗೇಗೌಡ ಜೆಡಿಎಸ್ ನಿಂದ ಒಂದು ಕಾಲು ಹೊರಗಿಟ್ಟು ಎಷ್ಟೋ ಸಮಯವಾಗಿದೆ. ತೆನೆ ಇಳಿಸಿ ಕೈ ಹಿಡಿಯುವ ದಿನ ಹತ್ತಿರವಾಗುತ್ತಿದ್ದಂತೆ ಇತ್ತ ಜೆಡಿಎಸ್ ನಾಯಕರು ನೀವಿಲ್ಲದಿದ್ದರೇನಂತೆ ನಮಗೆ ಬೇರೆ ಅಭ್ಯರ್ಥಿಗಳಿದ್ದಾರೆ ಎಂದು ತೋರಿಸಿಕೊಟ್ಟಿದ್ದಾರೆ.
Published: 12th February 2023 05:45 PM | Last Updated: 12th February 2023 05:53 PM | A+A A-

ಶಾಸಕ ಶಿವಲಿಂಗೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ(ಸಂಗ್ರಹ ಚಿತ್ರ)
ಅರಸೀಕೆರೆ(ಹಾಸನ): ಅರಸೀಕೆರೆ ಕ್ಷೇತ್ರದ ಹಾಲಿ ಶಾಸಕ ಕೆ ಎಂ ಶಿವಲಿಂಗೇಗೌಡ ಜೆಡಿಎಸ್ ನಿಂದ ಒಂದು ಕಾಲು ಹೊರಗಿಟ್ಟು ಎಷ್ಟೋ ಸಮಯವಾಗಿದೆ. ತೆನೆ ಇಳಿಸಿ ಕೈ ಹಿಡಿಯುವ ದಿನ ಹತ್ತಿರವಾಗುತ್ತಿದ್ದಂತೆ ಇತ್ತ ಜೆಡಿಎಸ್ ನಾಯಕರು ನೀವಿಲ್ಲದಿದ್ದರೇನಂತೆ ನಮಗೆ ಬೇರೆ ಅಭ್ಯರ್ಥಿಗಳಿದ್ದಾರೆ ಎಂದು ತೋರಿಸಿಕೊಟ್ಟಿದ್ದಾರೆ.
ಇಂದು ಅರಸೀಕೆರೆಯಲ್ಲಿ ಜೆಡಿಎಸ್ ವತಿಯಿಂದ ಪಂಚರತ್ನ ರಥಯಾತ್ರೆ ವೇಳೆ ದೇವೇಗೌಡರ ಇಡೀ ಕುಟುಂಬ ಭಾಗವಹಿಸಿ ಒಗ್ಗಟ್ಟು ತೋರಿಸುವ ಪ್ರಯತ್ನ ಮಾಡಿತು. ಅಲ್ಲದೆ ಹೆಚ್ ಡಿ ಕುಮಾರಸ್ವಾಮಿಯವರು ಅರಸೀಕೆರೆಯ ಈ ಬಾರಿಯ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯ ಹೆಸರನ್ನು ಘೋಷಿಸಿದ್ದಾರೆ.
ಜೆಡಿಎಸ್ (JD(S)) ಪಕ್ಷ ಮುಗಿಸಲು ಯತ್ನಿಸಲಾಗುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿ ಇಂದಿನ ಸಭೆಗೆ ಹೋಗಬೇಡಿ ಎಂದು ಕ್ಷೇತ್ರದ ಶಾಸಕ ಹಣ ನೀಡಿದ್ದಾರೆ. ಹಣದ ಆಮಿಷವೊಡ್ಡಿದ್ದರೂ ಅರಸೀಕೆರೆ ಕ್ಷೇತ್ರದ ಜನತೆ ಹಣಕ್ಕೆ ಮಹತ್ವ ನೀಡದೆ ಇಲ್ಲಿಗೆ ಬಂದಿದ್ದೀರಿ. ಅರಸೀಕೆರೆ ಟೌನ್ನಲ್ಲಿ ರೋಡ್ಶೋ ವೇಳೆ ಸುಡುಬಿಸಿಲಲ್ಲೇ ಬಂದಿದ್ದೇನೆ. ಪ್ರತಿದಿನವೂ ನಾನು ಇದೇ ರೀತಿ ಪಂಚರತ್ನ ರಥಯಾತ್ರೆ ಮಾಡುತ್ತಿದ್ದೇನೆ. ತಂದೆ ದೇವೇಗೌಡರು 91ನೇ ವಯಸ್ಸಿನಲ್ಲಿ ರೈತರು ಎಂದು ಜಪಿಸುತ್ತಿದ್ದಾರೆ. ರಾಜ್ಯದ ರೈತರ ಬದುಕು ಹಸನಾಗಿಸಲು ಅವಕಾಶ ನೀಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಜೆಡಿಎಸ್ ಅಭ್ಯರ್ಥಿಯಾಗಿ ಬಾಣಾವರ ಅಶೋಕ್ ಕಣಕ್ಕೆ: ಅರಸೀಕೆರೆ ಜೆಡಿಎಸ್ ಅಭ್ಯರ್ಥಿಯನ್ನಾಗಿ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಣಾವರ ಅಶೋಕ್ ಹೆಸರನ್ನು ಹೆಚ್.ಡಿ.ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಘೋಷಿಸಿದರು. ಕಾಂಗ್ರೆಸ್ ಸೇರಲು ಶಾಸಕ ಶಿವಲಿಂಗೇಗೌಡ ಸಜ್ಜಾಗಿದ್ದು, ಬಾಣಾವರ ಅಶೋಕ್ಗೆ ಟಿಕೆಟ್ ನೀಡುವ ಮೂಲಕ ಶಿವಲಿಂಗೇಗೌಡ ವಿರುದ್ಧ ಹೆಚ್ಡಿಕೆ ಸೆಡ್ಡು ಹೊಡೆದಿದ್ದಾರೆ.
ಶಿವಲಿಂಗೇ ಗೌಡ ವಿರುದ್ಧ ಆಕ್ರೋಶ: ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡಗೆ ನಿಮ್ಮ ಮುಂದಿನ ನಿರ್ಧಾರ ತಿಳಿಸಿ. ನೀವು ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ಅರಸೀಕೆರೆ ಕ್ಷೇತ್ರಕ್ಕೆ ಸಾಕಷ್ಟು ಅನುದಾನ, ಯೋಜನೆಗಳನ್ನು ನೀಡಿದ್ದೆವು. ಜೆಡಿಎಸ್ ನಿಂದ ಗೆದ್ದು ಶಿವಲಿಂಗೇಗೌಡ ನಮ್ಮ ವಿರುದ್ಧವೇ ಹೇಳಿಕೆ ನೀಡ್ತಿದ್ದಾರೆ. ಹೆಚ್ಡಿಡಿ, ಹೆಚ್ಡಿಕೆ ಮುಖ ನೋಡಿ ವೋಟ್ ಹಾಕ್ತಾರಾ ಎನ್ನುತ್ತಿದ್ದಾರೆ. ಶಿವಲಿಂಗೇಗೌಡ ಕಾಂಗ್ರೆಸ್ ಸೇರುತ್ತಾರೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಶಿವಲಿಂಗೇಗೌಡ ಕಾಂಗ್ರೆಸ್ ಸೇರುವುದು 2-3 ವರ್ಷದ ಹಿಂದೆ ನಿರ್ಧಾರವಾಗಿದೆ ಎಂದು ಆಕ್ರೋಶದಿಂದ ನುಡಿದರು.