ಬೊಮ್ಮಾಯಿ ಮೋದಿ ಜತೆ ಮಾತಾಡಿ ರಾಜ್ಯಕ್ಕೆ ನ್ಯಾಯ ಕೊಡಿಸಿದರೆ 'ನಾಯಿಮರಿ' ಹೇಳಿಕೆ ವಾಪಸ್, ‘ರಾಜಾ ಹುಲಿ’ ಬಿರುದು ಕೊಡುತ್ತೇನೆ: ಸಿದ್ದರಾಮಯ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಧೈರ್ಯದಿಂದ ಹೇಳಿ ರಾಜ್ಯಕ್ಕೆ ನ್ಯಾಯ ಕೊಡಿಸಿದರೆ ನಾನು ‘ನಾಯಿ ಮರಿ’...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಧೈರ್ಯದಿಂದ ಹೇಳಿ ರಾಜ್ಯಕ್ಕೆ ನ್ಯಾಯ ಕೊಡಿಸಿದರೆ ನಾನು ‘ನಾಯಿ ಮರಿ’ ಎಂದು ಹೇಳಿರುವುದನ್ನು ವಾಪಸು ಪಡೆದು ಅವರಿಗೆ ‘ರಾಜಾ ಹುಲಿ’ ಎನ್ನುವ ಬಿರುದು ಕೊಡುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಸಹ ತಮ್ಮ 'ನಾಯಿಮರಿ' ಹೇಳಿಕೆಯನ್ನು ಸಮರ್ಥಿಸಿಕೊಂಡು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಕಳೆದ ವರ್ಷ ಕೇಂದ್ರ ಪ್ರಾಯೋಜಿತ ಯೋಜನೆಗಳು ಮತ್ತು ಜಿಎಸ್‌ಟಿ ಪರಿಹಾರದಿಂದ ಬಂದಿರುವ ಹಣ ರೂ.30,000 ಕೋಟಿ, ಈ ವರ್ಷ ಕೇಂದ್ರ ನೀಡಿರುವುದು ರೂ.20,106 ಕೋಟಿ. ವರ್ಷದಿಂದ ವರ್ಷಕ್ಕೆ ರಾಜ್ಯದ ಪಾಲು ಕಡಿಮೆಯಾಗುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

2017ರಿಂದ ಮೇಕೆದಾಟು, 2020ರಿಂದ ಮಹದಾಯಿ ಮತ್ತು 2021ರಿಂದ ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡದೆ ಸತಾಯಿಸುತ್ತಿದೆ. ಮಹದಾಯಿ ಬಗ್ಗೆ ಇತ್ತೀಚೆಗೆ ಕೇಂದ್ರ ಅನುಮತಿ ನೀಡಲಾಗಿದೆ ಎಂದು ಹೇಳುತ್ತಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದರ ವಿರುದ್ದ ದನಿ ಎತ್ತುವವರು ಯಾರು? ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಕಾರ್ಪೋರೇಟ್ ತೆರಿಗೆ, ಸುಂಕ, ಪೆಟ್ರೋಲ್-ಡೀಸೆಲ್ ತೆರಿಗೆ, ಜಿಎಸ್‌ಟಿ ಮೂಲಕ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತಿರುವ ಹಣ ಸುಮಾರು 3.50 ಲಕ್ಷ ಕೋಟಿ ರೂಪಾಯಿ. ಆದರೆ ರಾಜ್ಯಕ್ಕೆ ವಾಪಸು ಬರುವುದು ಕೇವಲ 50,000 ಕೋಟಿಗಿಂತಲೂ ಕಡಿಮೆ. ಈ ಅನ್ಯಾಯದ ವಿರುದ್ಧ ದನಿ ಎತ್ತುವ ಧಮ್ ಇದೆಯೇ ಬೊಮ್ಮಾಯಿ ಅವರೇ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ವಿಮಾನ ನಿಲ್ದಾಣ, ಬಂದರುಗಳು ಅದಾನಿ ಕಂಪನಿಗೆ ಮಾರಾಟ ಮಾಡಲಾಗುತ್ತಿದೆ. ರಾಯಚೂರು ಉಷ್ಣವಿದ್ಯುತ್ ಸ್ಥಾವರವೂ ಅದೇ ಸಾಲಿಗೆ ಸೇರಲಿದೆ. ಈಗ ರಾಜ್ಯದ ನಂದಿನಿ ಡೇರಿ ಮೇಲೆ ಕಣ್ಣು ಬಿದ್ದಿದೆ. ರಾಜ್ಯದಲ್ಲಿರುವುದು ಜನರ ಸರ್ಕಾರವೇ? ಕೇಂದ್ರದ ಏಜಂಟ್ ಸರ್ಕಾರವೇ? ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com