ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್

ನನ್ನ ಮಗನಿಗಾಗಿ ಟಿಕೆಟ್‌ ಕೇಳಿಲ್ಲ, ಅವನೂ ಆಸೆಪಟ್ಟಿಲ್ಲ; ನನಗೆ ಗೌರವವಿಲ್ಲದಿರುವ ಕಡೆ ನಾನು ಹೋಗುವುದೂ ಇಲ್ಲ: ಸುಮಲತಾ

ನಾನು ಟಿಕೆಟ್‌ ವಿಚಾರವಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ. ನನ್ನ ಮಗನೂ ಇಟ್ಟಿಲ್ಲ. ಟಿಕೆಟ್‌ಗಾಗಿ ಅವನು ಆಸೆಪಟ್ಟಿಯೂ ಇಲ್ಲ. ಸಮಯ ಬಂದಾಗ ನೋಡಿಕೊಳ್ಳೋಣ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
Published on

ಮಂಡ್ಯ: ಕಾಂಗ್ರೆಸ್‌-ಬಿಜೆಪಿಯ ನಾಯಕರು ನನ್ನೊಂದಿಗೆ ಮಾತನಾಡಿದ್ದಾರೆ. ನಿಮ್ಮ ಜೊತೆಗೆ ನಿಮ್ಮ ಮಗನಿಗೂ ಟಿಕೆಟ್‌ ಕೊಡುತ್ತೇವೆ ಎಂದು ಆಫರ್‌ ನೀಡಿದ್ದಾರೆ. ಆದರೆ, ನಾನು ಟಿಕೆಟ್‌ ವಿಚಾರವಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ. ನನ್ನ ಮಗನೂ ಇಟ್ಟಿಲ್ಲ. ಟಿಕೆಟ್‌ಗಾಗಿ ಅವನು ಆಸೆಪಟ್ಟಿಯೂ ಇಲ್ಲ. ಸಮಯ ಬಂದಾಗ ನೋಡಿಕೊಳ್ಳೋಣ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.

ಇಲ್ಲಿನ ಚಾಮುಂಡೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಗೌರವವಿಲ್ಲದಿರುವ ಕಡೆ ನಾನು ಹೋಗುವುದೂ ಇಲ್ಲ, ಆ ಪಕ್ಷವನ್ನು ಸೇರುವುದೂ ಇಲ್ಲ. ಈ ಪಕ್ಷ ಸೇರುವುದರಿಂದ ನನಗೇನೋ ಒಳ್ಳೆಯದಾಗುತ್ತದೆ ಎಂದಷ್ಟೇ ಭಾವಿಸುವುದಿಲ್ಲ. ನನ್ನನ್ನೇ ನಂಬಿರುವ ಅಭಿಮಾನಿಗಳು, ಕಾರ್ಯಕರ್ತರಿಗೂ ಒಳ್ಳೆಯ ಸ್ಥಾನ, ಗೌರವ ಸಿಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಾನು ಪ್ರತಿನಿಧಿಸುವ ಜಿಲ್ಲೆಗೆ ಏನು ಮಾಡುವಿರಿ ಎಂದು ಖಚಿತ ಭರವಸೆ ಕೊಡಬೇಕು. ಸುಳ್ಳು ಆಶ್ವಾಸನೆ ಕೊಟ್ಟು ನನ್ನನ್ನು ಮತ್ತು ಜನರನ್ನು ವಂಚಿಸಬಾರದು ಎಂದು ಹೇಳಿದರು.

ಮುಖ್ಯವಾಗಿ ನನ್ನ ಕ್ಷೇತ್ರಕ್ಕೆ ಏನು ಕೊಡುತ್ತೀರಾ. ನಾನು ನಿಮ್ಮ ಪಕ್ಷ ಸೇರಿದರೆ ಜನಪರವಾಗಿ ಏನು ಮಾಡುತ್ತೀರಾ ಎಂಬ ಬಗ್ಗೆ ಖಚಿತ ಭರವಸೆ ಕೊಡಿ. ಆಗ ನಾನು ನಿಮ್ಮ ಪಕ್ಷ ಸೇರುತ್ತೇನೆ ಎಂದಿದ್ದೇನೆ ಎಂದು ತಿಳಿಸಿದರು. ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ನಿರ್ದಿಷ್ಟಪ್ರಣಾಳಿಕೆ ಹೊಂದಿರುವ, ನನ್ನ ಬೆಂಬಲಿಗರು, ಕಾರ್ಯಕರ್ತರನ್ನು ಜೊತೆಗೂಡಿಸಿಕೊಂಡು ಹೋಗುವ ಹಾಗೂ ನಾನು ಮಾಡುವ ಕೆಲಸವನ್ನು ಗೌರವದಿಂದ ಸ್ವಾಗತಿಸುವ ಪಕ್ಷವನ್ನು ಸೇರುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್‌ ತಿಳಿಸಿದರು.

ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ನನ್ನನ್ನು ಬೆಂಬಲಿಸಿದ್ದು ಎಲ್ಲರಿಗೂ ಗೊತ್ತಿರುವ ಬಹಿರಂಗ ವಿಚಾರ. ಆ ಪಕ್ಷ ನನ್ನನ್ನು ಬೆಂಬಲಿಸುವಾಗ ನನ್ನೆದುರು ಯಾವುದೇ ಷರತ್ತನ್ನು ಇಟ್ಟಿರಲಿಲ್ಲ. ಗೆದ್ದ ಮೇಲೆ ನಮ್ಮ ಪಕ್ಷವನ್ನು ಸೇರಲೇಬೇಕೆಂದು ಒತ್ತಡವನ್ನೂ ಹೇರಿರಲಿಲ್ಲ. ನನ್ನ ಬೆಂಬಲಿಗರಿಗೆ, ಚುನಾವಣೆಯಲ್ಲಿ ನನ್ನ ಪರವಾಗಿ ನಿಂತವರಿಗೆ ಅನುಕೂಲ ಮಾಡಿಕೊಡುವಂತೆ ನಾನು ಯಾವ ಪಕ್ಷದವರನ್ನೂ ಕೇಳಿಲ್ಲ. ಈ ವಿಚಾರವಾಗಿ ತಾಯಿ ಚಾಮುಂಡೇಶ್ವರಿ ಮೇಲೆ ಸತ್ಯ ಮಾಡಿ ಹೇಳುತ್ತೇನೆ ಎಂದರು.

ಒಂದು ಪಕ್ಷ ಸೇರುವುದರಿಂದ ಕೇವಲ ನನಗಷ್ಟೇ ಒಳ್ಳೆಯದಾಗಬೇಕೆಂದು ಬಯಸುವವಳು ನಾನಲ್ಲ. ನನ್ನನ್ನು ನಂಬಿದವರಿಗೆ ಮೋಸ ಮಾಡುವುದಿಲ್ಲ. ಅಂಬರೀಶ್‌ ಬದುಕಿದ್ದಾಗ ನಾನು ರಾಜಕೀಯಕ್ಕೆ ಬರುತ್ತೇನೆಂದು ಭಾವಿಸಿರಲಿಲ್ಲ. ಅವರೂ ನನ್ನ ಕುಟುಂಬದಿಂದ ಯಾರೂ ರಾಜಕೀಯಕ್ಕೆ ಬರುವುದಿಲ್ಲ ಎಂದಿದ್ದರು. ಆದರೆ, ಜನರ ಪ್ರೀತಿ ನನ್ನನ್ನು ರಾಜಕೀಯಕ್ಕೆ ಕರೆತಂದಿತು. ಈಗ ಅವರ ಋುಣ ತೀರಿಸಬೇಕಿರುವುದು ನಮ್ಮ ಕರ್ತವ್ಯವಲ್ಲವೇ ಎಂದರು.

ನನ್ನ ಪತಿ ಅಂಬರೀಶ್ ಅವರು 25 ವರ್ಷ ಕಾಂಗ್ರೆಸ್‌ನಲ್ಲಿದ್ದರು. ನಾನು ಮಂಡ್ಯ ಚುನಾವಣೆಗೆ ಸ್ಪರ್ಧಿಸುವಾಗ ಟಿಕೆಟ್ ಕೊಡಿ ಎಂದು ಕಾಂಗ್ರೆಸ್‌ ಬಿಟ್ಟು ಬೇರೆ ಯಾವ ಪಕ್ಷವನ್ನು ಕೇಳಿರಲಿಲ್ಲ. ಆ ಟೈಮ್‌ನಲ್ಲಿ ಟಿಕೆಟ್ ಕೊಡಲ್ಲ ಎಂದಿದ್ದೆ ಡಿ.ಕೆ.ಶಿವಕುಮಾರ್. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಹ ಆ ವೇಳೆ ಕೇಳಿದ್ದೆ. ನನ್ನ ಕೈಯಲ್ಲಿ ಏನು ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಕಾಂಗ್ರೆಸ್‌ನವರು ಟಿಕೆಟ್ ಕೊಡಲು ಆಗಲ್ಲ ಎಂದಿದ್ದಕ್ಕೆ ನಾನು ಪಕ್ಷೇತರವಾಗಿ ನಿಂತೆ ಎಂದು ಸುಮಲತಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com