ರಾಯಚೂರು: ನಾನೀನ ಯಾವ ಪಕ್ಷ ದಲ್ಲೂ ಇಲ್ಲದ ಸ್ವತಂತ್ರ ವ್ಯಕ್ತಿ. ಆದರೆ ನನ್ನ ರಕ್ತದಲ್ಲೇ ಕಾಂಗ್ರೆಸ್ ಇದೆ. ಆದ್ದರಿಂದ ಮತ್ತೆ ಕಾಂಗ್ರೆಸ್ ಸೇರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಹೇಳಿದರು.
ಈ ಕುರಿತು ಬುಧವಾರ ರಾಯಚೂರಿನಲ್ಲಿ ಮಾತನಾಡಿದ ಅವರು, ಉತ್ತರಾಯಣ ಪುಣ್ಯ ಕಾಲಕ್ಕೆ ಮೊದಲೇ ಬಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದಿದ್ದೇನೆ. ಪಥ ಬದಲಿಸುವ ಕಾಲಕ್ಕೆ ದೇವರ ದರ್ಶನ ಮಾಡುತ್ತಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಸೇರ್ಪಡೆ ಖಚಿತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಶಕ್ತಿಯನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸಾಹಿತ್ಯ ಕ್ಷೇತ್ರದ ಎಂಎಲ್ಸಿಯೇ ವಿನಾ ಬಿಜೆಪಿ ಎಂಎಲ್ಸಿ ಅಲ್ಲ. ರಾಜಕಾರಣ ಒಂದು ಕುಟುಂಬವಿದ್ದಂತೆ. ಅದರಲ್ಲಿ ಅಣ್ಣ-ತಮ್ಮ ಮುನಿಸಿಕೊಂಡು ಹೊರ ಹೋಗುವುದು, ಮರಳಿ ಬರುವುದು ಸಾಮಾನ್ಯ ಎಂದರು.
ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್ ಹಾಗೂ ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ನನ್ನ ಸೋಲಿಗೂ ವಿಜಯೇಂದ್ರ ಬಹಳಷ್ಟು ಶ್ರಮಿಸಿದ್ದಾರೆ ಎಂದು ಹೇಳಿದರು. ಸೂರ್ಯ ಪಥ ಬದಲಿಸುವ ಉತ್ತರಾಯಣ ಪುಣ್ಯ ಕಾಲದ ಮುನ್ನ ಮಂತ್ರಾಲಯದ ರಾಯರ ದರ್ಶನ ಪಡೆದಿದ್ದೇನೆ. ಇಂಥ ಹೊತ್ತಲ್ಲಿ ನಾನು ಬದಲಾವಣೆ ಮಾಡು ತ್ತಿದ್ದೇನೆ. ಬಾಂಬೆ ಬಾಯ್ಸ ಪುಸ್ತಕದಲ್ಲಿ ಏನಿದೆ ಎಂಬುದು ಬಿಡುಗಡೆಯಾದ ಬಳಿಕ ಗೊತ್ತಾಗಲಿದೆ ಎಂದರು.
ಸ್ಯಾಂಟ್ರೊ ರವಿ ಯಾರು ಎಂಬುದು ನನಗೆ ತಿಳಿದಿಲ್ಲ. ಕುಮಾರಸ್ವಾಮಿ ಸುಮ್ಮನೆ ಗಾಳಿಪಟ ಹಾರಿಸಿದ್ದಾರೆ. ಅವರಿಗೆ ಸ್ಯಾಂಟ್ರೋ ರವಿ ಚೆನ್ನಾಗಿ ಗೊತ್ತಿದೆ. ಕುಮಾರಸ್ವಾಮಿ ಕೂಡ ರಾಜಕೀಯಕ್ಕೆ ಬರುವ ಮುನ್ನ ಸಿನೆಮಾ ಕ್ಷೇತ್ರದಲ್ಲಿದ್ದರು. ಎರಡು ಬಾರಿ ಸಿಎಂ ಆದವರು. ಅಂಥ ಅನುಭವಿ ರಾಜಕಾರಣಿಗಳು ಹಾರಿಕೆ ವಿಚಾರಗಳನ್ನು ಬಿಡುವುದು ಶೋಭೆ ತರುವುದಿಲ್ಲ ಎಂದರು.
Advertisement