ಕೋಲಾರದಿಂದಲೇ ನನ್ನ ಸ್ಪರ್ಧೆ, ಸೂರ್ಯ ಇರುವುದು ಎಷ್ಟು ಸತ್ಯವೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ: ಸಿದ್ದರಾಮಯ್ಯ
ನಾನು ಈ ಬಾರಿ ಎಲೆಕ್ಷನ್ ಗೆ ನಿಲ್ಲುವುದು ಕೋಲಾರದಿಂದಲೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ.
Published: 23rd January 2023 04:48 PM | Last Updated: 23rd January 2023 06:58 PM | A+A A-

ಸಿದ್ದರಾಮಯ್ಯ
ಕೋಲಾರ: ನಾನು ಈ ಬಾರಿ ಎಲೆಕ್ಷನ್ ಗೆ ನಿಲ್ಲುವುದು ಕೋಲಾರದಿಂದಲೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ. ಕೋಲಾರದಲ್ಲಿ ಇಂದು ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಈಗಾಗಲೇ ಹೇಳಿರುವಂತೆ ಪಕ್ಷದ ಹೈಕಮಾಂಡ್ ಸೂಚಿಸಿದರೆ ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಲಂಚ ಸ್ವೀಕರಿಸಿದ್ದು ತೋರಿಸಿದರೆ ರಾಜಕೀಯ ನಿವೃತ್ತಿ: ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಂದು ಪೈಸೆ ಲಂಚ ತೆಗೆದುಕೊಂಡಿದ್ದರೆ ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುವೆ. ನಾನು ರಾಜಕೀಯ ನಿವೃತ್ತಿ ತೆಗೆದುಕೊಂಡು ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.
ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ, ನೊಂದಿದ್ದಾರೆ. ಅನೇಕ ಕಷ್ಟಗಳನ್ನು ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗ ಲಂಚ ಕೊಡದಿದ್ದರೆ ಯಾವುದೇ ಕೆಲಸ ಆಗಲ್ಲ. ಬಿಜೆಪಿಯಂತಹ ಭ್ರಷ್ಡ ಸರ್ಕಾರ ರಾಜ್ಯದಲ್ಲಿ ಯಾವತ್ತೂ ಬಂದಿರಲಿಲ್ಲ. ಮೋದಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದಿದ್ದರು. 40% ಕಮಿಷನ್ ಬಗ್ಗೆಯೂ ಕಲಾಪದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಕಾಗೇರಿಯಂತಹ ಸ್ಪೀಕರ್ರನ್ನು ನಾನು ಯಾವತ್ತೂ ನೋಡಿಯೇ ಇಲ್ಲ. ವಿಧಾನಸೌಧದ ಗೋಡೆಯೂ ಲಂಚ ಲಂಚ ಅಂತಾ ಪಿಸುಗುಡುತ್ತಿದೆ. ಮಸಾಲೆ ದೋಸೆ, ಉಪ್ಪಿಟ್ಟಿಗೆ ಇಷ್ಟು ಅನ್ನೋ ರೀತಿ ಬೋರ್ಡ್ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಯಾವ ಕಾರಣಕ್ಕೂ ಸಿದ್ದರಾಮಯ್ಯ ಕೋಲಾರದಿಂದ ನಿಲ್ಲೋದಿಲ್ಲ, ಡ್ರಾಮ ಮಾಡ್ತಿದ್ದಾರೆ: ಬಿ ಎಸ್ ಯಡಿಯೂರಪ್ಪ
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಕಾಣ್ತಾ ಇದೆ. ಅದಕ್ಕಾಗಿ ಬಿಜೆಪಿಯವರು ಹೆದರಿಕೊಂಡು ವಾರಕ್ಕೊಂದು ಸಲ ಮೋದಿಯವರನ್ನು ಕರೆಸ್ತಿದ್ದಾರೆ. ಮೋದಿ ಮತ್ತೆ ನಮಗೆ ಅಧಿಕಾರ ಕೊಡಸ್ತಾರೆ ಅನ್ನೋ ಭರವಸೆಯಲ್ಲಿದ್ದಾರೆ. ಅವರಿಗೆ ಬೇರೆ ಬಂಡವಾಳ ಇಲ್ಲ. ನೂರು ಸಾರಿ ಮೋದಿ ಅಮಿತ್ ಶಾ ಬಂದು ಕ್ಯಾಂಪೇನ್ ಮಾಡಿದರೂ ಕೂಡ ಸೂರ್ಯ ಇರುವುದು ಎಷ್ಟು ಸತ್ಯವೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ನಾವು ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚು ಪ್ರತಿಕ್ರಿಯೆ ಕಾರ್ಯಕರ್ತರಿಂದ ಬರುತ್ತಿದೆ. ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ ಎಂದು ಟೀಕಿಸಿದರು.
ಕೋಲಾರದಲ್ಲಿ ಇಂದು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು, ನುಡಿದಂತೆ ನಡೆದ ನಮ್ಮ ಸರ್ಕಾರದ ಸಾಧನೆಗಳು ಮತ್ತು ಈಗಿನ ಬಿಜೆಪಿ ಸರ್ಕಾರದ ದ್ವೇಷ ರಾಜಕೀಯ, ಭ್ರಷ್ಟಾಚಾರ, ದುರಾಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದೆ. pic.twitter.com/636C7nIQwa
— Siddaramaiah (@siddaramaiah) January 23, 2023