ಮಂಡ್ಯ: ಸುಮಲತಾ ವೇದಿಕೆ ಹತ್ತಿದ್ದಕ್ಕೆ ಆಕ್ರೋಶ; ಕೈ-ಕೈ ಮಿಲಾಯಿಸಿ ಕುರ್ಚಿಯಲ್ಲಿ ಬಡಿದಾಡಿಕೊಂಡ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು!

ಕಾಂಗ್ರೆಸ್ ಕಾರ್ಯಕರ್ತರ ಫ್ಲೆಕ್ಸ್ ನಲ್ಲಿ ಸಂಸದೆ ಸುಮಲತಾ ಭಾವಚಿತ್ರ ಇರುವ ವಿಚಾರಕ್ಕೆ ಕಾಂಗ್ರೆಸ್ ಮತ್ತು‌ ಜೆಡಿಎಸ್ ಕಾರ್ಯಕರ್ತರು ಮಂಡ್ಯ ತಾಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ.
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್

ಮಂಡ್ಯ: ಸಂಸದೆ ಸುಮಲತಾ ಅವರ ಕಾರ್ಯಕ್ರಮದಲ್ಲಿ ಗಲಾಟೆಯ ಹೈ ಡ್ರಾಮ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರ ಫ್ಲೆಕ್ಸ್ ನಲ್ಲಿ ಸಂಸದೆ ಸುಮಲತಾ ಭಾವಚಿತ್ರ ಇರುವ ವಿಚಾರಕ್ಕೆ ಕಾಂಗ್ರೆಸ್ ಮತ್ತು‌ ಜೆಡಿಎಸ್ ಕಾರ್ಯಕರ್ತರು ಮಂಡ್ಯ ತಾಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ.

ಶ್ರೀಮಲೈ ಮಹದೇಶ್ವರಸ್ವಾಮಿ ದೇವಾಲಯ ಟ್ರಸ್ಟ್‌ನಿಂದ ಮಲೈ ಮಹದೇಶ್ವರಸ್ವಾಮಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಮತ್ತು ದೇವಾಲಯದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಜೆಡಿಎಸ್ ಪಕ್ಷದ ನಾಯಕರನ್ನು ದೇವಸ್ಥಾನದ ವೇದಿಕೆಯ ಕೆಳಗೆ ಸನ್ಮಾನಿಸಲಾಗಿತ್ತು.

ಆದರೆ ಸಂಸದೆ ಸುಮಲತಾ ಅವರನ್ನು ಕಾಂಗ್ರೆಸ್ ಪಕ್ಷದವರು ವೇದಿಕೆಗೆ ಕರೆತಂದು ಸನ್ಮಾನಿಸಲು ಮುಂದಾದ್ರು. ಇದರಿಂದ ಸಿಟ್ಟಿಗೆದ್ದ ಜೆಡಿಎಸ್ ಕಾರ್ಯಕರ್ತರು ಕೈಗೆ ಸಿಕ್ಕ ಚೇರ್‌ಗಳನ್ನು ಎತ್ತಿ ಹಾಕಿದರು. ಸಂಸದೆ ಸುಮಲತಾ ಎದುರು ದೊಡ್ಡ ಹೈಡ್ರಾಮಾವೇ ನಡೆಯಿತು. ಕಾಂಗ್ರೆಸ್‌ ಕಾರ್ಯಕರ್ತರು, ದೇವಸ್ಥಾನದ ಕಾರ್ಯಕ್ರಮದಲ್ಲಿ ರಾಜಕೀಯಬೇಡ ಸುಮ್ಮನಿರಿ ಎಂದು ಜೆಡಿಎಸ್‌ ಕಾರ್ಯಕರ್ತರಿಗೆ ಸಮಾಧಾನ ಮಾಡಿದರು.ಇತ್ತ ಜೆಡಿಎಸ್‌ನವರು ಕಾಂಗ್ರೆಸ್ ನಾಯಕರ ಹಾಗೂ ಸುಮಲತಾರ ಫೋಟೋ ಮಾತ್ರ ಹಾಕಿದ್ದೀರ ಎಂದು ರೊಚ್ಚಿಗೆದ್ದು ಫ್ಲೆಕ್ಸ್ ಅನ್ನು ಹರಿದು ಹಾಕಿ ಗಲಾಟೆ ಮಾಡಿದರು.

ಇದರಿಂದ ಬೇಸರಗೊಂಡು ಮಾತನಾಡಿದ ಸುಮಲತಾ, ಬಿ.ಗೌಡಗೆರೆ ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ನಾನೂ ಮಾಡಿದ್ದೇನೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆಯೇ ಹೊರತು ಯಾರೋ ಮಾಡಿದ ಕೆಲಸಕ್ಕೆ ರಿಬ್ಬನ್‌ ಕಟ್‌ ಮಾಡೋದಕ್ಕೆ ನಾನಿಲ್ಲಿಗೆ ಬಂದಿಲ್ಲ. ಅಂತಹ ಚೀಪ್‌ ಪಬ್ಲಿಸಿಟಿ ನನಗೆ ಬೇಕಾಗಿಯೂ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ಗರಂ ಆಗಿಯೇ ನುಡಿದರು.

ನಾನು ಬಂದರೆ ನನ್ನನ್ನು ನೋಡುವ ಆಸೆಯಿಂದ ಜನರು ಸೇರುತ್ತಾರೆ. ಕೆಲವರು ಪ್ರಚಾರ ತೆಗೆದುಕೊಳ್ಳುವ ದುರಾಸೆಯಿಂದ ಈ ರೀತಿ ಮಾಡುತ್ತಾರೆ. ಇದರಿಂದ ಯಾರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಪಕ್ಷೇತರ ಸಂಸದೆಗೆ ಒಂದೊಂದು ಕೆಲಸ ಮಾಡಿಸೋದು ಎಷ್ಟುಸವಾಲಾಗಿದೆ. ಆ ಬಗ್ಗೆ ನಿಮ್ಮ ಬಳಿ ಹೇಳಿಕೊಂಡಿದ್ದೇನಾ. ಸರ್ಕಾರ, ಮಂತ್ರಿಗಳು ಅಥವಾ ಅಧಿಕಾರಿಗಳಿರಬಹುದು ಅವರಿಂದ ನನಗೆ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದೆ ತೊಂದರೆ ಕೊಡುತ್ತಿರುವುದನ್ನು ಈ ಮೂರೂವರೆ ವರ್ಷದಲ್ಲಿ ನೋಡಿದ್ದೀನಿ. ಆದರೆ ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಹಲ್ಲು ಕಚ್ಚಿಕೊಂಡು ಸುಮ್ಮನಿದ್ದೇನೆ ಎಂದರು.

ಸಣ್ಣ ಪುಟ್ಟಗೊಂದಲಗಳಿಗೆ ಈ ರೀತಿ ಮಾಡಿಕೊಂಡರೆ ನಿಮಗೆ ನೀವೇ ಅವಮಾನ ಮಾಡಿಕೊಂಡಂತೆ. ರಾಜಕಾರಣ ಬಿಟ್ಟು ಅಭಿವೃದ್ಧಿ ವಿಚಾರ ಕೇಳಿ. ಸಂತೋಷದಿಂದ ಮಾಡುತ್ತೇನೆ. ಗೊಂದಲ ಮಾಡಿಕೊಂಡು ಸರಿಮಾಡಿ ಎಂದು ನನ್ನ ಮುಂದೆ ಬರಬೇಡಿ. ಗೊಂದಲ ಸರಿಪಡಿಸಲು ಇದು ಪಂಚಾಯ್ತಿ ಅಲ್ಲ ಎಂದು ಖಡಕ್ಕಾಗಿ ಹೇಳಿದರು.ಸುಮಲತಾ ಭಾಷಣ ಮುಗಿಸಿ ವೇದಿಕೆಯಿಂದ ಇಳಿಯುತ್ತಿದ್ದಂತೆ ತಮಗೂ ಮಾತನಾಡಲು ಅವಕಾಶ ನೀಡುವಂತೆ ವಿರೋಧಿ ಗುಂಪು ಕೇಳಿದಾಗ, ಯಾವುದೇ ಮಾತುಗಳಿಗೆ ಕಿವಿಗೊಡದ ಸುಮಲತಾ ವೇದಿಕೆಯಿಂದ ಇಳಿದು ಕಾರು ಹತ್ತಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com