ನನ್ನ-ಡಿಕೆಶಿ ಸಂಬಂಧ ಹಾಳಾಗಲು ಗ್ರಾಮೀಣ ಶಾಸಕಿ ಕಾರಣ; 'ವಿಷಕನ್ಯೆ'ಯಿಂದ ಕಾಂಗ್ರೆಸ್ ಸರ್ವನಾಶ; ಇದೇ ನನ್ನ ಕೊನೆಯ ಚುನಾವಣೆ: ರಮೇಶ್ ಜಾರಕಿಹೊಳಿ

ಮಿಸ್ಟರ್ ಶಿವಕುಮಾರ್  ರಾಜಕಾರಣದಲ್ಲಿರಲು ನಾಲಾಯಕ್, ನನ್ನ ವಿರುದ್ಧ ಷಡ್ಯಂತ್ರ ನಡೆಸಿದ ಡಿ.ಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಬೇಕು. ಸಿಬಿಐ ಸಂಪೂರ್ಣವಾಗಿ ವಿಚಾರಣೆ ನಡೆಸಬೇಕು ಎಂದಿದ್ದಾರೆ. ಒಬ್ಬ ವ್ಯಕ್ತಿಯ ರಾಜಕೀಯ ಜೀವನವನ್ನು ಹಾಳು ಮಾಡಲು ಸಿಡಿ ಬಳಕೆ ಮಾಡಿದ ಆತ ರಾಜಕಾರಣದಲ್ಲಿ ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿ.ಕೆ ಶಿವಕುಮಾರ್
ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿ.ಕೆ ಶಿವಕುಮಾರ್

ಬೆಳಗಾವಿ: ನನ್ನ ಮೇಲೆ ಷಡ್ಯಂತ್ರ ಮಾಡಿ, ಷಂಡರಂತೆ ಆತ ರಾಜಕೀಯ ಮಾಡಿದ್ದಾನೆ. ಆತನನ್ನು ಪೂರ್ಣಪ್ರಮಾಣದಲ್ಲಿ ಮನೆಗೆ ಕಳುಹಿಸುವವರೆಗೂ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಹಾನಯಕನ ವಿರುದ್ಧ ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ನನ್ನ ವಿರುದ್ಧ ಷಡ್ಯಂತ್ರ ನಡೆಸಿದ ಡಿ.ಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಬೇಕು. ಸಿಬಿಐ ಸಂಪೂರ್ಣವಾಗಿ ವಿಚಾರಣೆ ನಡೆಸಬೇಕು ಎಂದಿದ್ದಾರೆ.  ಒಬ್ಬ ವ್ಯಕ್ತಿಯ ರಾಜಕೀಯ ಜೀವನವನ್ನು ಹಾಳು ಮಾಡಲು ಸಿಡಿ ಬಳಕೆ ಮಾಡಿದ ಆತ ರಾಜಕಾರಣದಲ್ಲಿ ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ. ನನ್ನ ಬಳಿ ಹಲವು ದಾಖಲೆಗಳಿವೆ, ತನಿಖೆಗಾಗಿ ನಾನು ಸಿಬಿಐಗೆ ನೀಡುತ್ತೇನೆ ಎಂದಿದ್ದಾರೆ.

1985 ರಲ್ಲಿ ನಾನು ಮತ್ತು ಡಿ.ಕೆ ಶಿವಕುಮಾರ್ ಇಬ್ಬರು ಒಟ್ಟಿಗೆ ಕಾಂಗ್ರೆಸ್ ನಿಂದ ಚುನಾವಣೆಗೆ ಸ್ಪರ್ಧಿಸಿದೆವು, ಇಬ್ಬರು ಸೋತೆವು, ಆಗ ಆತ ಹರಿದ ಚಪ್ಪಲಿ, ಎಚ್ ಎಂಟಿ ವಾಚ್ ಹಾಕಿದ್ದ, ಕೊರಳಲ್ಲಿ ಬೆಳ್ಳಿ ತಾಯಿತವಿತ್ತು ಈಗ ಸಾವಿರಾರು ಕೋಟಿ ರುಪಾಯಿ ಸಂಪಾದನೆ ಮಾಡಿ ರಾಜ್ಯವನ್ನೇ ಲೂಟಿ ಮಾಡಿ ಆಗರ್ಭ ಶ್ರೀಮಂತನಾಗಿದ್ದಾನೆ ಎಂದು ತಿಳಿಸಿದ್ದಾರೆ.  ಡಿ.ಕೆ ಶಿವಕುಮಾರ್ ಲಂಡನ್ ನಲ್ಲಿ ಮನೆ, 10 ಸಾವಿರ ಕೋಟಿ ಆಸ್ತಿಯಿದೆ ಎಂದು ಹೇಳಿಕೊಂಡಿರುವ ಆಡಿಯೋ ನನ್ನ ಬಳಿಯಿದೆ.

ನಾನು ಮತ್ತು ಡಿ.ಕೆ ಶಿವಕುಮಾರ್ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದೆವು, ನಮ್ಮಿಬ್ಬರಿಗೂ ಒಳ್ಳೆಯ ಭವಿಷ್ಯವಿತ್ತು, ಗ್ರಾಮೀಣ ಶಾಸಕಿಯಿಂದ ನನ್ನ ಸಂಬಂಧ ಹಾಳಾಯಿತು, ಮುಂದೆ ಕಾಂಗ್ರೆಸ್ ಸರ್ವನಾಶವಾಗುವುದು ವಿಷಕನ್ಯೆಯಿಂದಲೇ ಎಂದಿದ್ದಾರೆ. ಒಮ್ಮೆ ಶ್ರೀಮತಿ ಉಷಾ ಡಿ.ಕೆ ಶಿವಕುಮಾರ್ ಅವರು ನನ್ನ ಬಳಿ ಬಂದು ಪಕ್ಷ ಬಿಡದಂತೆ ಮನವಿ ಮಾಡಿದರು, ಆದರೆ ನಾನು ಹೇಳಿದ್ದೆ, ನಿಮ್ಮ ಗಂಡ ಸರಿಯಿಲ್ಲ, ನಾನು ಪಕ್ಷ ಬಿಡುತ್ತೇನೆ ಎಂದಿದ್ದೆ.

ಆಪರೇಷನ್​ ಕಮಲ ನಂತರ ಬಾಂಬೆಗೆ ತೆರಳಿದ್ದ ವೇಳೆ ಒಂದು ಕರೆ ಬಂತು. ಈ ವೇಳೆ ಡ್ಯಾಶ್​ ಡ್ಯಾಶ್​ ಎಂದು ಹೇಳಿದ್ದೆ. ಅದಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ಸೇರಿಸಿ ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡುವ ಷಡ್ಯಂತ್ರ ನಡೆಯುತ್ತಿದೆ. ನನ್ನ ಹೆಸರು ಹಾಳುಮಾಡಲು ಮತ್ತೊಂದು ಷಡ್ಯಂತ್ರ ನಡೆಯುತ್ತಿದೆ. 2000ನೇ ಇಸವಿಯಿಂದ ರಾಜ್ಯದಲ್ಲಿ ಸಿಡಿ ಪ್ರಕರಣ ನಡೆಯುತ್ತಿದೆ. ಹಲವಾರು ರಾಜಕಾರಣಿಗಳು, ಅಧಿಕಾರಿಗಳನ್ನು ಸಿಲುಕಿಸಿದ್ದಾರೆ. ಸಿಡಿ ತೋರಿಸಿ ಬ್ಲಾಕ್​ಮೇಲ್​ ತಮ್ಮ ಕೆಲಸ ಮಾಡಿಕೊಂಡಿದ್ದಾರೆ.

ನನ್ನನ್ನು ಟಾರ್ಗೆಟ್ ಮಾಡಿ ನನ್ನನ್ನು ಹೊಡೆದರಲ್ಲ ಡಿಕೆಶಿ. ಕಳೆದ ಒಂದೂವರೆ ವರ್ಷದಿಂದ ನಾನು ಕಾಯುತ್ತಿದ್ದೇನೆ. ರಾಜಕಾರಣ ಮಾಡಲು ಡಿ.ಕೆ.ಶಿವಕುಮಾರ್​ ನಾಲಾಯಕ್​. ನನ್ನ ಬಳಿ 120 ಸಾಕ್ಷ್ಯಗಳಿವೆ, ಯಾವುದನ್ನೂ ಬಿಡುಗಡೆ ಮಾಡಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಡಿ ತಯಾರಿಸಿ ಬ್ಯ್ಲಾಕ್​ ಮೇಲ್​ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಯವಿಟ್ಟು ಇದನ್ನು ಸಿಬಿಐ ತನಿಖೆ ಕೊಡಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಾಯಿಸಿದ್ದಾರೆ.

ಡಿಕೆ ಶಿವಕುಮಾರ್​ ಸಿಡಿ ಬಿಡುಗಡೆ ಮಾಡಿ ನನ್ನ ವೈಯಕ್ತಿಕ ಜೀವನ ಹಾಳುಮಾಡಿದ. ಒಬ್ಬ ಮಹಿಳೆ ಮೂಲಕ ನನ್ನ ತೇಜೋವಧೆ ಮಾಡಿದ. ಮಾರ್ಚ್ 21ರಂದು ನನ್ನ ಸಿಡಿ ಬಿಡುಗಡೆ ಮಾಡಿ ಹೆಸರು ಕೆಡಿಸಿದ. ನಾನು ಯಾವುದೆ ತಪ್ಪು ಮಾಡದಿದ್ದರೂ ಒಪ್ಪಿಕೊಳ್ಳಬೇಕಾಯಿತು. ಸಿಡಿ ಪ್ರಕರಣದ ಯುವತಿ, ನರೇಶ್ ಸೇರಿದಂತೆ 6 ಜನರನ್ನು ಬಂಧಿಸಿ. ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವೆ. ಎಲ್ಲಾ ದಾಖಲೆಗಳನ್ನು ಸಿಬಿಐಗೆ ವಹಿಸುತ್ತೇನೆ ಎಂದರು.

ಸಿ.ಡಿಯಲ್ಲಿದ್ದ ಹುಡುಗಿಯನ್ನು ಬಂಧಿಸಿದರೆ ಎಲ್ಲ ಸತ್ಯ ಹೊರಬರುತ್ತದೆ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಆಕೆಯನ್ನು ಮಹಿಳಾ ಕಾಂಗ್ರೆಸ್ ಪದಾಧಿಕಾರಿಯೊಬ್ಬರ ಮನೆಯಲ್ಲಿರಿಸಿದ್ದಾರೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಗ್ರಾಮೀಣ ಶಾಸಕಿಗೆ ಟಿಕೆಟ್ ಕೊಡಲು ಶಿವಕುಮಾರ್ ನಿರಾಕರಿಸಿದ್ದ, ಆದರೆ ನಾನು ಗಲಾಟೆ ಮಾಡಿ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com