ಉಚಿತ ಗ್ಯಾರಂಟಿ ಚುನಾವಣಾ ಗಿಮಿಕ್; ಅಧಿಕಾರ ಹಿಡಿಯಲು ಇದೊಂದು ಚೀಪ್ ಪಾಪ್ಯುಲಾರಿಟಿ: ಚಲುವರಾಯಸ್ವಾಮಿ ವಿಡಿಯೋ ವೈರಲ್

ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಉಚಿತ ಭಾಗ್ಯಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಿದೆ. ಈ ಸಂಬಂಧ ಸಿದ್ದರಾಮಯ್ಯ ಅವರು ತಮ್ಮ ಕಾರ್ಯ ಮುಂದುವರಿಸಿದ್ದಾರೆ.
ಚಲುವರಾಯಸ್ವಾಮಿ
ಚಲುವರಾಯಸ್ವಾಮಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಉಚಿತ ಭಾಗ್ಯಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಿದೆ. ಈ ಸಂಬಂಧ ಸಿದ್ದರಾಮಯ್ಯ ಅವರು ತಮ್ಮ ಕಾರ್ಯ ಮುಂದುವರಿಸಿದ್ದಾರೆ.

ಇದೇ ವೇಳೆ ಸಿದ್ದರಾಮಯ್ಯ ಸಂಪುಟದ ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಉಚಿತ ಭರವಸೆಗಳೆಲ್ಲ ಕೇವಲ ಚುನಾವಣಾ ಗಿಮಿಕ್ ಅಷ್ಟೆ. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಇಂಥ ಗಿಮಿಕ್​ಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

‘ಮೊದಲಿಗೆ ಉಚಿತ ಯೋಜನೆಗಳನ್ನು ಘೋಷಿಸುವ ಬಗ್ಗೆ ದೇಶದಲ್ಲೆಲ್ಲ ಚರ್ಚೆಯಾಯಿತು. ನಾವು ಕೂಡ ಚರ್ಚೆ ಮಾಡಿದೆವು. ಇದು ಒಳ್ಳೆಯದಲ್ಲ ಎಂಬುದಾಗಿ. ಮುಂದೆ ಫ್ರೀ ಫ್ರೀ ಅಂತ ಹೋದರೆ ಇದು ಎಲ್ಲಿಗೆ ಹೋಗಿ ಮುಟ್ಟಬಹುದು ಎಂಬ ಬಗ್ಗೆ ಚರ್ಚಿಸಲಾಯಿತು.

ಈಗ ನಾವುಗಳೂ ಅದೇ ಲೈನಲ್ಲಿ ಹೊರಟಿದ್ದೇವೆ. ಎಲ್ಲೋ ಒಂದು ಕಡೆ ಚುನಾವಣೆ, ರಿಸಲ್ಟ್, ಸರ್ಕಾರ ಬಂದ್ರೆ ತಾನೇ ನಾವೇನಾದ್ರೂ ಮಾಡಲು ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ನಾವು ಕೆಲಸ ಮಾಡಲು ಸಾಧ್ಯವಾಗುವುದು ಅನ್ನುವ ದೃಷ್ಟಿ ಬಂದಾಗ ಆವತ್ತಿಗೆ ರಿಸಲ್ಟ್ ಅನಿವಾರ್ಯ ಆಗುತ್ತದೆ. ರಿಸಲ್ಟ್ ಬರಬೇಕು ಎಂದಾಗ ಈ ರೀತಿಯ ಚೀಪ್ ಪಾಪ್ಯಲಾರಿಟಿ, ಇಲ್ಲದ್ದು ಬಲ್ಲದ್ದು ಎಲ್ಲ ಮಾಡ್ತೀವಿ.

ಬಟ್ ನಮ್ಮ ಮನಸಿಗೆ ಇಷ್ಟ ಆಗ್ತದೋ ಇಲ್ಲವೋ, ಸಿದ್ದರಾಮಯ್ಯನವರ ಮನಸಿಗೆ ಇಷ್ಟ ಆಗ್ತದೋ ಇಲ್ಲವೋ ಕೆಲವೊಂದನ್ನು ಮಾಡಿಕೊಂಡು ಹೋಗಬೇಕಾಗುತ್ತದೆ. ಕೆಲವನ್ನು ಆ್ಯಕ್ಸೆಪ್ಟ್ ಮಾಡಬೇಕಾಗುತ್ತದೆ’ ಎಂದು ಚೆಲುವರಾಯಸ್ವಾಮಿ ಹೇಳಿರುವುದು ವಿಡಿಯೋದಲ್ಲಿದೆ. ಈ ಸಂಬಂಧ ಎಲ್ಲೆಡೆ ಚರ್ಚೆಯಾಗುತ್ತಿದೆ, ಆದರೆ ಈ ಬಗ್ಗೆ ಸಿದ್ದರಾಮಯ್ಯ ಸಂಪುಟದ ಯಾರೋಬ್ಬ ಸಚಿವರು ಪ್ರತಿಕ್ರಿಯೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com