ಪರಿಷತ್ ಉಪ ಚುನಾವಣೆ: ಕಾಂಗ್ರೆಸ್ ಗೆ 3 ಸ್ಥಾನ ಖಚಿತ; ಬೋಸರಾಜು- ಚಿಂಚನಸೂರು ಆಯ್ಕೆ ನಿಶ್ಚಿತ; ಶೆಟ್ಟರ್ ಕಥೆ ಏನು?

ವಿಧಾನ ಪರಿಷತ್ ಉಪ ಚುನಾವಣೆಗೆ ಪ್ರತ್ಯೇಕ ಚುನಾವಣೆ ಅಧಿಸೂಚನೆ ಹೊರಡಿಸುವುದರಿಂದ ವಿಧಾನಸಭೆಯಲ್ಲಿ ಅತಿಹೆಚ್ಚಿನ ಶಾಸಕರ ಬಲ ಹೊಂದಿರುವ ಆಡಳಿತ ಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಗಳಿಸುವುದು ನಿಶ್ಚಿತವಾಗಿದೆ. 
ಶೆಟ್ಟರ್, ಬೋಸರಾಜು ಮತ್ತು ಚಿಂಚನಸೂರು
ಶೆಟ್ಟರ್, ಬೋಸರಾಜು ಮತ್ತು ಚಿಂಚನಸೂರು

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ಈ ತಿಂಗಳ ಅಂತ್ಯದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಎಲ್ಲ ಮೂರು ಸ್ಥಾನಗಳನ್ನು ಗೆದ್ದುಕೊಳ್ಳಲಿದೆ.

ಉಪ ಚುನಾವಣೆಗೆ ಪ್ರತ್ಯೇಕ ಚುನಾವಣೆ ಅಧಿಸೂಚನೆ ಹೊರಡಿಸುವುದರಿಂದ ವಿಧಾನಸಭೆಯಲ್ಲಿ ಅತಿಹೆಚ್ಚಿನ ಶಾಸಕರ ಬಲ ಹೊಂದಿರುವ ಆಡಳಿತ ಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಗಳಿಸುವುದು ನಿಶ್ಚಿತವಾಗಿದೆ.

ವಿಧಾನಸಭೆಯಲ್ಲಿ ಕಾಂಗ್ರೆಸ್‌ 135 ಸ್ಥಾನಗಳನ್ನು ಹೊಂದಿದ್ದು, ಪಕ್ಷೇತರರಾಗಿ ಗೆದ್ದಿರುವ ಲತಾ ಮಲ್ಲಿಕಾರ್ಜುನ, ಕೆ. ಪುಟ್ಟಸ್ವಾಮಿಗೌಡ, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ 66, ಜೆಡಿಎಸ್‌ 19 ಹಾಗೂ ಕಲ್ಯಾಣರಾಜ್ಯ ಪ್ರಗತಿ ಪಕ್ಷದ ಒಬ್ಬರು ಶಾಸಕರಿದ್ದಾರೆ.

ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಬಾಬೂರಾವ್‌ ಚಿಂಚನಸೂರ ಅವರ ಅವಧಿ 2024ರ ಜೂನ್‌ 17ರಂದು, ಆರ್‌. ಶಂಕರ್‌ ಅವರ ಅವಧಿ 2026 ಜೂನ್‌ 30, ಲಕ್ಷ್ಮಣ ಸವದಿ ಅವರ ಅವಧಿ 2028ರ ಜೂನ್‌14ರವರೆಗೆ ಇತ್ತು. ಈ ಮೂರು ಸ್ಥಾನಗಳಿಗೆ ಪ್ರತ್ಯೇಕವಾಗಿ ಉಪ ಚುನಾವಣೆ ಜೂನ್‌ 30ರಂದು ನಿಗದಿಯಾಗಿದೆ.

‘ಮೂರೂ ಸ್ಥಾನಗಳ ಮುಕ್ತಾಯದ ಅವಧಿ ಬೇರೆ ಇದೆ. ಈ ಮೂರೂ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಒಂದೇ ದಿನ ಉಪ ಚುನಾವಣೆ ನಡೆಸಲಿದ್ದು, ಪ್ರತ್ಯೇಕವಾಗಿ ಒಂದೇ ದಿನ (ಜೂನ್‌ 13) ಅಧಿಸೂಚನೆ ಹೊರಡಿಸಲಿದೆ. ಮೂರು ಸ್ಥಾನಗಳಿಗೆ ಪ್ರತ್ಯೇಕವಾಗಿ ಚುನಾವಣೆಯಲ್ಲಿ ನಡೆಯಲಿದ್ದು, ಎಲ್ಲ 224 ಶಾಸಕರೂ ಮತ  ಚಲಾಯಿಸಲು ಅರ್ಹರಾಗಿದ್ದಾರೆ.

ವಿಧಾನಸಭೆಯಲ್ಲಿ ಭಾರಿ ಬಹುಮತವನ್ನು ಕಾಂಗ್ರೆಸ್ ಹೊಂದಿದ್ದು, ಉಳಿದೆರಡು ಪಕ್ಷಗಳು ಸೇರಿಕೊಂಡರೂ ಆ  ಸಂಖ್ಯೆಯ ಹತ್ತಿರವೂ ಬರುವುದಿಲ್ಲ. ಹೀಗಾಗಿ ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ.

ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಬಾಬೂರಾವ್‌ ಚಿಂಚನಸೂರ ಅವರು ವಿಧಾನಸಭೆ ಚುನಾವಣೆಯಲ್ಲಿ ಗುರುಮಠಕಲ್‌ ಕ್ಷೇತ್ರದಿಂದ ಕಣಕ್ಕಿಳಿದು ಸೋಲು ಕಂಡಿದ್ದರು. ಆ ಸ್ಥಾನಕ್ಕೆ ಅವರನ್ನೇ ಅಭ್ಯರ್ಥಿ ಮಾಡಲು ಪಕ್ಷದ ನಾಯಕರು ಮುಂದಾಗಿದ್ದಾರೆ. ಆರ್‌. ಶಂಕರ್‌ ಮತ್ತು ಲಕ್ಷ್ಮಣ ಸವದಿ ಅವರಿಂದ ತೆರವಾದ ಸ್ಥಾನವನ್ನು ಪಕ್ಷದ ಕಾರ್ಯಕರ್ತರಿಗೆ ನೀಡುವ ಸಾಧ್ಯತೆಯಿದೆ. ಈ ಸ್ಥಾನಗಳ ಸದಸ್ಯತ್ವ ಅವಧಿ ಕಡಿಮೆ ಇದ್ದರೂ, 20ಕ್ಕೂ ಹೆಚ್ಚು ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವೆ ಉಮಾಶ್ರೀ, ಕಾಂಗ್ರೆಸ ಮುಖಂಡರಾದ ಬಿಎಲ್ ಶಂಕರ್, ವಿಎಲ್ ಸುದರ್ಶನ್, ಐವನ್ ಡಿಸೋಜಾ, ಲಕ್ಷ್ಮಣ್, ಕವಿತಾ ರೆಡ್ಡಿ, ಪುಷ್ಪಾ ಅಮರನಾಥ್, ಮಂಜುಳಾ ಮಾನಸ ಸೇರಿದಂತೆ ಇತರರ ಹೆಸರು ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com