ಕಾಂಗ್ರೆಸ್ ಸರ್ಕಾರ ಜವಾಬ್ದಾರಿ ಇಲ್ಲದ ಸರ್ಕಾರ; ವಿದ್ಯುತ್ ದರ ಏರಿಕೆ ನಮ್ಮ ಸರ್ಕಾರ‌ ಮಾಡಿಲ್ಲ: ಮಾಜಿ ಸಿಎಂ ಬೊಮ್ಮಾಯಿ‌

ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಜವಾಬ್ದಾರಿ ಇಲ್ಲದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಿಎಂ ಬೊಮ್ಮಾಯಿ
ಮಾಜಿ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಜವಾಬ್ದಾರಿ ಇಲ್ಲದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳು ಹತ್ತಿರ ಬಂದಿದೆ. ರಾಜ್ಯಕ್ಕೆ ನೈಸರ್ಗಿಕ ಆಪತ್ತು ಬರುತ್ತಿವೆ. ಮಾನ್ಸೂನ್ ಮಳೆ ತಡವಾಗಿದ್ದರಿಂದ ಬಿತ್ತನೆ ಕೂಡ ತಡವಾಗಿ ಆಗುತ್ತಿದೆ. ಮಾನ್ಸೂನ್ ಮಳೆ ಸಕಾಲಕ್ಕೆ ಬಾರದಿದ್ದರೆ ರೈತರಿಗೆ ಬಹಳಷ್ಟು ಕಷ್ಟವಾಗುತ್ತದೆ. ಮತ್ತೊಂದು ಕಡೆ ಭೀಕರ ಚಂಡಮಾರುತದ ಸೂಚನೆ ಸಹ ಬರುತ್ತಿವೆ. ಹೀಗಿದ್ದರೂ ಸಿಎಂ ಇವುಗಳನ್ನು ನಿಭಾಯಿಸಲು ಯಾವುದೇ ರೀತಿ  ಸನ್ನದ್ಧವಾಗಿಲ್ಲ ಎಂದರು.

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿರುವ ಡ್ಯಾಂ ಗಳ ನೀರು ಅತ್ಯಂತ ಕೆಳಮಟ್ಟದಲ್ಲಿದೆ‌. ಆದರೆ ನಾನು ಇಷ್ಟು ಬೇಗ ರಾಜ್ಯದಲ್ಲಿ ಬರಗಾಲ ಬರಲಿದೆ ಎಂದು ಹೇಳುವುದಿಲ್ಲ. ಆದರೆ ರಾಜ್ಯ ಸರ್ಕಾರ ಸಮರ್ಪಕವಾಗಿ ಯೋಜನೆಗಳನ್ನು ಮಾಡಿಕೊಳ್ಳಬೇಕು. ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿ ಅದರಲ್ಲಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿ, ಅವರಿಂದ ಸಹಕಾರ ಪಡೆಯಬೇಕು. ಈ ಕೂಡಲೇ 100 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಬೇಕು. ಎನ್‌ಡಿ‌ಆರ್‌ಎಫ್ ತಂಡಗಳನ್ನು ಚುರುಕುಗೊಳಸಬೇಕು.ನಗರ ಪ್ರದೇಶಗಳಲ್ಲಿಯೂ ಸಹ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಸರ್ಕಾರ ಜನರಿಗೆ ಸಹಾಯಕವಲ್ಲದ ಸರ್ಕಾರವಾಗಿದೆ ಎಂದರು.

ಗ್ಯಾರಂಟಿ ಬಗ್ಗೆ ಕಾದುನೋಡುವ ತಂತ್ರ ನಮ್ಮದಾಗಿದೆ. ಉಚಿತ ಬಸ್ ಪಾಸ್ ಆರಂಭದ ಶೂರತ್ವವನ್ನು ಸರ್ಕಾರ ತೋರಿಸುತ್ತಿದೆ. ಗ್ಯಾರಂಟಿ ರೂಪದಲ್ಲಿ ತಾಯಿಯಂದ್ರಿಗೆ ಉಚಿತ ನೀಡುವ ಸಲುವಾಗಿ ಅವರಿಗೆ ಸಮರ್ಪಕ ಪ್ರಯಾಣ ಇಲ್ಲದಂತೆ ಆಗುತ್ತಿದೆ. ರಾಜ್ಯದಲ್ಲಿ ಬಸ್ ಗಳ ಸಮಸ್ಯೆ ಆಗುತ್ತಿದೆ. ಈಗಾಗಲೇ ನಾವು ಡೀಸೆಲ್‌ ಅನುದಾನ ಬಿಡುಗಡೆ ಮಾಡಿದ್ದೇವೆ. ಅದನ್ನು ಮುಂದುವರಿಕೆ ಮಾಡಬೇಕು. ಗ್ಯಾರಂಟಿಗಳಿಗೆ ಹಣಕಾಸಿನ ಹೊಂದಾಣಿಕೆ ಬಗ್ಗೆ ಸರ್ಕಾರ‌ ಸ್ಪಷ್ಟವಾಗಿ ಹೇಳುತ್ತಿಲ್ಲ. ಹಣಕಾಸಿನ ವಿಚಾರದಲ್ಲಿ ಜನರನ್ನು ಕತ್ತಲಲ್ಲಿ ಇಡಲು ಸರ್ಕಾರ ಮುಂದಾಗಿದೆ. ಗ್ಯಾರಂಟಿ ವಿಚಾರದಲ್ಲಿ ಹಣಕಾಸಿನ ಬಗ್ಗೆ ಮಾಹಿತಿ ಪಡೆಯುವುದು ಪ್ರತಿಯೊಂದು ಕನ್ನಡಿಗನ ಹಕ್ಕು. ಇದು ಒಂದು ಕೈಯಲ್ಲಿ ತೆಗೆದುಕೊಂಡು ಮತ್ತೊಂದು ಕೈಯಲ್ಲಿ ಕೂಡುವಂತಾಗಿದೆ ಎಂದರು.

ವಿದ್ಯುತ್ ದರ ಏರಿಕೆ ನಾವು ಮಾಡಿಲ್ಲ: ರಾಜ್ಯದಲ್ಲಿ ಏಕಾಏಕಿ ವಿದ್ಯುತ್ ದರ ಏರಿಕೆ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಿಎಂ ಬೊಮ್ಮಾಯಿ, ನಾವು ವಿದ್ಯುತ್ ದರ ಏರಿಕೆ ಅನುಷ್ಠಾನ ತಂದಿಲ್ಲ. ವಿದ್ಯುತ್ ದರ ಏರಿಕೆ ನಮ್ಮ ಸರ್ಕಾರ‌ ಮಾಡಿಲ್ಲ. ದರ ಏರಿಕೆ ವರದಿಯನ್ನು ನಾವು ಒಪ್ಪಿರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ದರ ಏರಿಕೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಇದರಿಂದಾಗಿ ದರ ಜಾಸ್ತಿ ಆಗಿದೆ ಎಂದು ರಾಜ್ಯ ಸರ್ಕಾರದ ನಡೆಯ ವಿರುದ್ಧ ಮಾಜಿ‌ ಸಿಎಂ ಬಸವರಾಜ ಬೊಮ್ಮಾಯಿ ಅಸಮಾಧಾನ ಹೊರಹಾಕಿದರು.

ಅಧಿವೇಶನದ ವೇಳೆ ವಿಪಕ್ಷ ನಾಯಕನ ಆಯ್ಕೆ: ನಾನು ವಿಪಕ್ಷ ಸ್ಥಾನದ ಆಕಾಂಕ್ಷಿಯ ಪ್ರಶ್ನೆಯೇ ಇಲ್ಲ. ಈ ಸ್ಥಿತಿಯಲ್ಲಿ ವಿಳಂಬ ವಾಗ್ತಿಲ್ಲ. ಅಧಿವೇಶನ ಕರೆದ ಕೂಡಲೇ ವಿರೋಧ ಪಕ್ಷದ ನಾಯಕರ ಆಯ್ಕೆ ನಡೆಯುತ್ತೆ. ಪ್ರತಿ ಬಾರಿ ನಡೆಯುವ ಸಂಪ್ರದಾಯ ಇದಾಗಿದೆ ಎಂದರು.

ಜನರು ಕೊಟ್ಟ ತೀರ್ಪು ಒಪ್ಪಿಕೊಂಡಿದ್ದೇವೆ: ಸೋಲಿನ ಬಗ್ಗೆ ರಾಷ್ಟ್ರೀಯ ನಾಯಕರು ಬೇಸರ ಮಾಡಿಕೊಳ್ಳುವ ಪ್ರಶ್ನೆಯಿಲ್ಲ. ಜನ ಕೊಟ್ಟ ತೀರ್ಪು ನಾವು ಒಪ್ಪಿಕೊಂಡಿದ್ದೇವೆ. ನಾನೇ ಸೋಲಿನ ನೈತಿಕ ಹೊಣೆ ಹೊತ್ತಿದ್ದೇನೆ. ಲೋಕಸಭೆಯಲ್ಲಿ ಜೆಡಿಎಸ್ ಜೊತೆ ಕುರಿತು ಚರ್ಚೆಗಳು ನಡೆದಿಲ್ಲ. ಎಲ್ಲರ ಸೋಲಿಗೆ ನಾನೇ ಹೊಣೆ ಅಂದ ಮೇಲೆ ಶಾಸಕರ ಸೋಲಿನ ಆರೋಪದ ಬಗ್ಗೆ ಉತ್ತರಿಸುವ ಪ್ರಶ್ನೆಯಿಲ್ಲ. ಇನ್ನೂ ಇದೇ ವೇಳೆ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ, ಅವರೇ ಕಾಂಗ್ರೆಸ್ ಗೆ ಹೋಗಿದ್ದರಿಂದ ಸಂತೃಪ್ತಿ ಇದೆ ಅಂದಿದ್ದಾರೆ. ಹಾಗಿದ್ದಾಗ ಮತ್ತೆ ಬಿಜೆಪಿಗೆ ಬರೋ ಪ್ರಶ್ನೆ ಬರಲ್ಲ. ಪ್ರಹ್ಲಾದ್ ಜೋಶಿ ಗೆ ಟಿಕೇಟ್ ಕೊಡಬಾರದೆಂಬ ಅಭಿಯಾನ ಪ್ರತಿಬಾರಿ ಚುನಾವಣಾ ಪೂರ್ವದಲ್ಲಿ ಇಂತಹದ್ದು ನಡೆಯುತ್ತದೆ ಎಂದರು.

ವಿಧಾನ ಪರಿಷತ್ ನ ಮೂರು ಸ್ಥಾನಗಳಿಗೂ ಸ್ಪರ್ಧೆ: ವಿಧಾನ ಪರಿಷತ್ ಚುನಾವಣೆಯ ಮೂರೂ ಸ್ಥಾನಕ್ಕೆ ನಾವು ಸ್ಪರ್ಧಿಸುತ್ತೇವೆ. ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲೋದು ಖಚಿತ. ಆದರೂ ಪ್ರತಿಪಕ್ಷವಾಗಿ ಸ್ಪರ್ಧಿಸುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com