ಕೊಪ್ಪಳ: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ರಾಜ್ಯ ಬಿಜೆಪಿ ನಾಯಕರು ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದಾರೆ. ಇತ್ತ ಮಿಷನ್ 150 ಟಾರ್ಗೆಟ್ ಒಂದು ಕಡೆಯಾದ್ರೆ ಯಾರಿಗೆ ಟಿಕೆಟ್ ಸಿಗುತ್ತದೆ, ಯಾರಿಗೆ ಸಿಗುವುದಿಲ್ಲ, ಯಾವ ಮುಖಂಡರ ಮಕ್ಕಳಿಗೆ ಸಿಗುತ್ತದೆ ಎಂಬಿತ್ಯಾದಿ ಚರ್ಚೆಗಳು ಜೋರಾಗಿ ನಡೆಯುತ್ತಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದು, ಶಿಕಾರಿಪುರದಿಂದ ಬಿ.ವೈ ವಿಜಯೇಂದ್ರ ಹೈಕಮಾಂಡ್ ಒಪ್ಪಿದರೆ ಸ್ಪರ್ದಿಸುತ್ತಾರೆ ಎಂದು ಹೇಳಿದ್ದು, ಈ ಕುರಿತು ವಿಜಯೇಂದ್ರ ಟಿಕೆಟ್ ಕುರಿತು ಕಮಲ ಪಾಳಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಬಿ.ವೈ ವಿಜಯೇಂದ್ರ ಟಿಕೆಟ್ ನಿರ್ಧಾರ ಆಗುವುದು ಬಿ.ಎಸ್ ಯಡಿಯೂರಪ್ಪ ಕಿಚನ್ ನಲ್ಲೂ ಅಲ್ಲ, ಮತ್ತೊಬ್ಬರ ಕಿಚನ್ ನಲ್ಲೂ ಆಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದು, ಈ ಕುರಿತು ಸಿ.ಟಿ ರವಿ ಅವರಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ರಾಜಕಾರಣದಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾದಾಗ ಮಾತ್ರ ಎತ್ತರಕ್ಕೆ ಬೆಳೆಯಲು ಸಾಧ್ಯ. ಸಿ.ಟಿ.ರವಿ ಅವರು ಹಿರಿಯರು. ಯಡಿಯೂರಪ್ಪ ಅವರು ಎಷ್ಟು ಹಿರಿಯರು, ಬಿಜೆಪಿ ಕಟ್ಟಿದ್ದು ಅವರು ಎಂಬ ಕುರಿತು ಸಿ.ಟಿ.ರವಿ ಅವರಿಗೂ ಗೊತ್ತಿದೆ. ಹೀಗಾಗಿ ನಾನು ಆ ರೀತಿಯ ಹೇಳಿಕೆಗೆ ಉತ್ತರ ನೀಡಲ್ಲ ಎಂದರು.
ಮುಂದಿನ ದಿನಗಳಲ್ಲಿ ಪಕ್ಷ ಎಲ್ಲವನ್ನೂ ನಿರ್ಧರಿಸುತ್ತದೆ. ಪಕ್ಷ ಏನು ಜವಾಬ್ದಾರಿ ನೀಡಿದೆ ಅದನ್ನು ಮಾತ್ರ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ, ಅರುಣ್ ಸೋಮಣ್ಣ ಅವರ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಆ ಹೇಳಿಕೆಯನ್ನು ನಾನು ಕೇಳಿಲ್ಲ. ಹಾಗಾಗಿ ನಾನು ಆ ಕುರಿತು ಉತ್ತರ ನೀಡಲ್ಲ. ಪಕ್ಷ ಎಲ್ಲಿ ಸ್ಪರ್ಧೆ ಮಾಡು ಅಂತ ಹೇಳುತ್ತದೆಯೋ ಅಲ್ಲಿ ಸ್ಪರ್ಧಿಸುತ್ತೇನೆ. ಬೇಡ ಅಂದರೆ ಸ್ಪರ್ಧಿಸುವುದಿಲ್ಲ ಎಂದರು.
Advertisement