ಮೈಸೂರು: ಜೆಡಿಎಸ್ ಪಂಚರತ್ನ ರಥಯಾತ್ರೆ; ಸಮಾರೋಪ ಸಮಾವೇಶದಲ್ಲಿ ಭಾರಿ ಜನಸ್ತೋಮ!

ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಉತ್ತನಹಳ್ಳಿಯಲ್ಲಿ ಭಾನುವಾರ ನಡೆದ ಪ್ರಾದೇಶಿಕ ಪಕ್ಷ ಜೆಡಿಎಸ್ ನ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾರೀ ಜನಸ್ತೋಮವೇ ನೆರೆದಿತ್ತು.
ಜೆಡಿಎಸ್ ಪಂಚರತ್ನ ಸಮಾರೋಪ ಸಮಾರಂಭದ ಚಿತ್ರ
ಜೆಡಿಎಸ್ ಪಂಚರತ್ನ ಸಮಾರೋಪ ಸಮಾರಂಭದ ಚಿತ್ರ

ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಉತ್ತನಹಳ್ಳಿಯಲ್ಲಿ ಭಾನುವಾರ ನಡೆದ ಪ್ರಾದೇಶಿಕ ಪಕ್ಷ ಜೆಡಿಎಸ್ ನ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾರೀ ಜನಸ್ತೋಮವೇ ನೆರೆದಿತ್ತು. ವಿವಿಧ ಕಡೆಗಳಿಂದ ಆಗಮಿಸಿದ ಲಕ್ಷಾಂತರ ಜನರು ಜೈ, ಜೆಡಿಎಸ್, ಜೈ ದೇವೇಗೌಡ ಎಂಬ ಹರ್ಷೋದ್ಗಾರ ಮಾಡಿದರು. ಮೈಸೂರು ದಕ್ಷಿಣದ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು ಮತ್ತು ಬೀದಿಗಳು ಶನಿವಾರ ರಾತ್ರಿಯಿಂದಲೇ  ಫೋಸ್ಟರ್, ಫ್ಲೆಕ್ಸ್ ಗಳು ಮತ್ತು ಜೆಡಿಎಸ್ ಧ್ವಜಗಳಿಂದ ನಗರದಾದ್ಯಂತ ರಾರಾಜಿಸುತ್ತಿದ್ದವು. 

ಈ ಮೆಗಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಶನಿವಾರ ರಾತ್ರಿಯಿಂದಲೇ ಜನರು ಆಗಮಿಸುತ್ತಿದ್ದರು.  ವೇದಿಕೆ ಕಾರ್ಯಕ್ರಮ ಆರಂಭವಾಗುವ ಮುನ್ನವೇ ಚಾಮುಂಡೇಶ್ವರಿ ದೇವಸ್ಥಾನದ ಬಳಿಯ ಸೂರ್ಯ ಬೇಕರಿ ಬಳಿ ನೂರಾರು ಮಂದಿ ಬೈಕ್ ಮತ್ತು ಎತ್ತಿನ ಗಾಡಿಗಳಲ್ಲಿ ಜಮಾಯಿಸಿದ್ದರು. ನಂತರ ಅಲ್ಲಿಂದ ಬೃಹತ್ ರ್‍ಯಾಲಿಯಲ್ಲಿ ವೇದಿಕೆ ಸ್ಥಳಕ್ಕೆ ತಲುಪಿದರು. 100 ಎಕರೆ ಜಾಗದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೂ ಜನರು ರಸ್ತೆಯಲ್ಲೇ ನಿಂತು ಕಾರ್ಯಕ್ರಮ ವೀಕ್ಷಿಸಬೇಕಾಯಿತು. ಇತ್ತೀಚಿನ ದಿನಗಳಲ್ಲಿ ಯಾವುದೇ ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಳ್ಳದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ  ವಿಶೇಷ ಟ್ರಾಲಿಯಲ್ಲಿ ಕುಳಿತು ವೇದಿಕೆಗೆ ಆಗಮಿಸಲು ವ್ಯವಸ್ಥೆ ಮಾಡಲಾಗಿತ್ತು. 

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಚುನಾವಣೆಗೂ ಮುನ್ನ ಮುಸ್ಲಿಮರಿಗೆ  ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಪಡಿಸುವ ಬಿಜೆಪಿ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸರ್ಕಾರ ಜಾತಿ ಮತ್ತು ಧರ್ಮದ ಮೇಲೆ ಜನರನ್ನು ವಿಭಜಿಸುತ್ತಿದೆ ಎಂದು ಕಿಡಿಕಾರಿದರು. 

1995ರಲ್ಲಿ ಶಿವಾಜಿನಗರದಲ್ಲಿ ಅಂದಿನ ಆದಿಚುಂಚನಗಿರಿ ಮಠದ ಶ್ರೀಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೋರಿ ದೇವೇಗೌಡರಿಗೆ ಮನವಿ ನೀಡಲಾಗಿತ್ತು. ಇದರ ಮಹತ್ವವನ್ನು ಮನಗಂಡ ಗೌಡರು ದಿಟ್ಟ ಹೆಜ್ಜೆಯನ್ನಿಟ್ಟು ರಾಜ್ಯದಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಜಾರಿಗೆ ತಂದರು. ಆದರೆ, ದುರದೃಷ್ಟವಶಾತ್ ಈಗಿನ ಸರಕಾರ ಅದನ್ನು ರದ್ದುಗೊಳಿಸಿದೆ.ಈ ನಿರ್ಧಾರದ ವಿರುದ್ಧ ಸೋಮವಾರ ಪಕ್ಷದಿಂದ ಸಾಂಕೇತಿಕ ಪ್ರತಿಭಟನೆ ಆರಂಭಿಸಲಾಗುವುದು ಎಂದರು. 

ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಅಂಬಾನಿ ಮತ್ತು ಅದಾನಿ ಎಂಬ ಎರಡು ವಿಷಯಗಳ ಬಗ್ಗೆ ಚಿಂತಿತರಾಗಿದ್ದಾರೆ, ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಹುಡುಕಾಟ ಮತ್ತು ಯೋಜನೆಯಲ್ಲಿ ನಿರತರಾಗಿದ್ದಾರೆ, ಆದರೆ ಜೆಡಿಎಸ್ ಮಾತ್ರ ಕೆಲಸ ಮಾಡುತ್ತಿದೆ. ಜನರ ಆಕಾಂಕ್ಷೆಗಳನ್ನು ಈಡೇರಿಸುವುದು ಮತ್ತು ಅನನ್ಯ ಕಲ್ಯಾಣ ಕಾರ್ಯಕ್ರಮಗಳೊಂದಿಗೆ ಕೊನೆಯ ವ್ಯಕ್ತಿಯನ್ನು ಹೇಗೆ ತಲುಪುವುದು ಎಂಬುದರ ಕುರಿತು ಯೋಚಿಸುತ್ತಿದೆ ಎಂದು ಹೇಳಿದರು. 

ಹೆಚ್. ಡಿ. ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಮನೆ ಒದಗಿಸಲು ಸುವರ್ಣ ಗ್ರಾಮೋದಯ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com