ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹತೆ: ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸಬಲ್ಲದೇ ಕಾಂಗ್ರೆಸ್?

ಕರ್ನಾಟಕದಲ್ಲಿ ಈಗ ಚುನಾವಣೆ ಪರ್ವ. 2018ರಲ್ಲಿ ಕಳೆದುಕೊಂಡ ಅಧಿಕಾರವನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮರಳಿ ಪಡೆಯಬೇಕೆಂದು ಕಾಂಗ್ರೆಸ್ ಸತತ ಪ್ರಯತ್ನ ಮಾಡುತ್ತಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯ ಸಂಸತ್ ಭವನದಿಂದ ಹೊರಬರುತ್ತಿರುವುದು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯ ಸಂಸತ್ ಭವನದಿಂದ ಹೊರಬರುತ್ತಿರುವುದು

ಬೆಂಗಳೂರು: ಕರ್ನಾಟಕದಲ್ಲಿ ಈಗ ಚುನಾವಣೆ ಪರ್ವ. 2018ರಲ್ಲಿ ಕಳೆದುಕೊಂಡ ಅಧಿಕಾರವನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮರಳಿ ಪಡೆಯಬೇಕೆಂದು ಕಾಂಗ್ರೆಸ್ ಸತತ ಪ್ರಯತ್ನ ಮಾಡುತ್ತಿದೆ. ಇದೇ ಹೊತ್ತಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಮಾನನಷ್ಟ ಮೊಕದ್ದಮೆಗೆ ಸಂಬಂಧಪಟ್ಟಂತೆ ಗುಜರಾತ್ ನ ಸೂರತ್ ನ್ಯಾಯಾಲಯ 2 ವರ್ಷ ಜೈಲುಶಿಕ್ಷೆ ನೀಡಿದ ಬೆನ್ನಲ್ಲೇ ಅವರು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

ಇಂದು ಸಂಸತ್ತು ಅಧಿವೇಶನದಲ್ಲಿ ಕಾಂಗ್ರೆಸ್ ಖಂಡಿತವಾಗಿಯೂ ಈ ವಿಚಾರವನ್ನೆತ್ತಿ ಸದನದಲ್ಲಿ ತೀವ್ರ ಗದ್ದಲ-ಕೋಲಾಹಲ ನಡೆಯುವ ಸಾಧ್ಯತೆಯಿದೆ. ನ್ಯಾಯಾಲಯದಿಂದಲೂ ವಿನಾಯ್ತಿ ಸಿಗಬಹುದೆಂಬ  ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಆದರೆ ರಾಜಕೀಯ ಪಕ್ಷವಾಗಿ ಜನರ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸುವುದು, ಜನರಲ್ಲಿ ಯಾವ ಭಾವನೆ ತರಲು ಸಾಧ್ಯವಾಗುತ್ತದೆ ಎಂಬುದು ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಮುಖ್ಯವಾಗುತ್ತದೆ.

ಈ ಸಮಸ್ಯೆಯನ್ನು ಒಂದು ಅವಕಾಶವಾಗಿ ಬಳಸಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಪಕ್ಷದ ಪುನರುಜ್ಜೀವನದ ಸಾಧ್ಯತೆ ಮತ್ತು ಆಶಾವಾದದ ಮೇಲೆ ಇದು ನೇರವಾಗಿ ಪರಿಣಾಮ ಬೀರುತ್ತದೆ. 

ಕಾಂಗ್ರೆಸ್‌ಗೆ ಹಲವು ಸಕಾರಾತ್ಮಕ ಅಂಶಗಳಿರುವುದರಿಂದ ಇದು ಪಕ್ಷಕ್ಕೆ ಈಗ ಅಥವಾ ಎಂದಿಗೂ ಲಾಭವಾಗದು ಎಂದು ತಳ್ಳಿಹಾಕುವಂತಿಲ್ಲ. ಕರ್ನಾಟಕದಲ್ಲಿ ಗಾಂಧಿ ಕುಟುಂಬವನ್ನು ಪ್ರೀತಿಸುವವರು ಸಾಕಷ್ಟು ಮಂದಿ ಇದ್ದಾರೆ.  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಎಲ್ಲಕ್ಕಿಂತ ಉತ್ತಮವಾಗಿ ತಮ್ಮ ತವರು ರಾಜ್ಯದಲ್ಲಿ ಮತದಾರರನ್ನು ಸ್ಪರ್ಶಿಸಬಹುದು. ಇತ್ತೀಚಿನ ವರ್ಷಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿನ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ಹೊರತಾಗಿಯೂ, ಕಾಂಗ್ರೆಸ್ ತಳಮಟ್ಟದಲ್ಲಿ ಗಣನೀಯ ಬೆಂಬಲವನ್ನು ಹೊಂದಿದೆ.

ಆ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳುವುದೇ ನಿಜವಾದ ಸವಾಲು. ರಾಹುಲ್ ಗಾಂಧಿಯವರ ಅನರ್ಹತೆಗೆ ಕಾಂಗ್ರೆಸ್ ತಕ್ಷಣದ ಪ್ರತಿಕ್ರಿಯೆಯು ಪರಿಣಾಮಕಾರಿಯಾಗಿ ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತು. ಕರ್ನಾಟಕ ಚುನಾವಣೆಯ ಸಮಯದಲ್ಲಿ ಪಕ್ಷವು ಇದನ್ನು ಪ್ರಮುಖ ವಿಷಯಗಳಲ್ಲಿ ಒಂದನ್ನಾಗಿ ಮಾಡುವ ಸಾಧ್ಯತೆಯಿದೆ. ಆದರೆ ಅದನ್ನು ಚುನಾವಣಾ ಲಾಭಾಂಶಗಳಾಗಿ ಬದಲಾಯಿಸುವುದು ಕಾಂಗ್ರೆಸ್ ನಾಯಕರ ಮೇಲೆ ಅವಲಂಬಿತವಾಗಿದೆ. 

ಬಿಜೆಪಿಯ ಪ್ರಚಾರದ ಶೈಲಿಯನ್ನು ಹೊಂದಿಸಲು ಪ್ರಬಲ ನಾಯಕತ್ವ ಕೊರತೆ ಕಾಂಗ್ರೆಸ್‌ನ ದೊಡ್ಡ ನ್ಯೂನತೆಯಾಗಿದೆ. ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿ ಹಲವು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಅವರ ಕಡೆಯಿಂದ, ಕಾಂಗ್ರೆಸ್‌ನ ಕೇಂದ್ರ ನಾಯಕರು ಕರ್ನಾಟಕದಲ್ಲಿ ತಮ್ಮ ಅಸ್ತಿತ್ವವನ್ನು ಅಷ್ಟೇನೂ ತೋರಿಸುತ್ತಿಲ್ಲ. ಅವರು ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ತೋರುತ್ತದೆ, ಇದು ಬಿಜೆಪಿಯ ಕೇಂದ್ರ ನಾಯಕತ್ವ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಹೋರಾಟದಂತೆ ತೋರುತ್ತಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದ ವೇಗ ಮತ್ತು ರೀತಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ ಮತ್ತು ಪ್ರತಿಪಕ್ಷಗಳ ಹಕ್ಕು ಮತ್ತು ಕರ್ತವ್ಯದಂತಹ ದೊಡ್ಡ ಸಮಸ್ಯೆಗಳ ಬಗ್ಗೆಯೂ ರಾಹುಲ್ ಅವರನ್ನು ಆಡಳಿತ ಪಕ್ಷದವರು ನಿರಂತರವಾಗಿ ಹೇಗೆ ಗುರಿಯಾಗಿಸಿಕೊಂಡಿದ್ದಾರೆ ಎಂಬುದರ ಕುರಿತು ಮಾತನಾಡಬೇಕು ಎಂದು ಕಾಂಗ್ರೆಸ್‌ನ ಹಲವರು ಭಾವಿಸುತ್ತಾರೆ.

ಪಕ್ಷದ ಕೇಂದ್ರ ಅಥವಾ ರಾಜ್ಯ ಘಟಕಗಳು ಯಾವುದಾದರೂ ಪ್ರಚಾರ ಕಾರ್ಯತಂತ್ರಗಳನ್ನು ರೂಪಿಸುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ. ರಾಹುಲ್ ಅವರನ್ನು ಗಂಭೀರವಲ್ಲದ ರಾಜಕಾರಣಿ ಎಂದು ಬಿಂಬಿಸುವ ತನ್ನ ತಂತ್ರವನ್ನು ಬಿಜೆಪಿ ಮುಂದುವರಿಸುತ್ತಿದೆ.  ಇಂಗ್ಲೆಂಡಿನಲ್ಲಿ ಇತ್ತೀಚೆಗೆ ರಾಹುಲ್ ಗಾಂಧಿ ಅವರು ದೇಶದ ಪ್ರಜಾಪ್ರಭುತ್ವ ಬಗ್ಗೆ ಮಾಡಿರುವ ಟೀಕೆಗಳ ವಿರುದ್ಧ ಪಕ್ಷದ ಆಕ್ರಮಣಕಾರಿ ಪ್ರಚಾರವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅವರ ಭಾರತ್ ಜೋಡೋ ಯಾತ್ರೆಯ ನಂತರ ಅವರು ಗಳಿಸಿದ ಗಂಭೀರ ರಾಜಕಾರಣಿ ಎಂಬ ಅವರ ಇಮೇಜ್‌ಗೆ ಧಕ್ಕೆ ತರುವ ಪ್ರಯತ್ನವಾಗಿಯೂ ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com