ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಮೈಸೂರಿನಲ್ಲಿ ಬಿ ವೈ ವಿಜಯೇಂದ್ರ ಹೇಳಿದ್ದೇನು?
ಮೈಸೂರು : ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿಮಿತ್ತ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯನವರು ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರಕ್ಕೆ ಬಿಜೆಪಿ ಯಾವ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂಬುದು ಸದ್ಯದ ಕುತೂಹಲ. ವಿಜಯೇಂದ್ರರನ್ನು ಕಣಕ್ಕಿಳಿಸಲಾಗುತ್ತಿದೆ ಎಂಬ ಸುದ್ದಿ ಆಗಾಗ ತೇಲಿಹೋಗುತ್ತಿರುತ್ತದೆ.
ಇದಕ್ಕೆ ಇಂದು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ವಿಜಯೇಂದ್ರ, ವರುಣಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಎಲ್ಲಾ ವಾತಾವರಣ ಇದೆ. ಕ್ಷೇತ್ರದ ಜನ ಬಿಜೆಪಿಗೆ ಮತ ಹಾಕಲು ಉತ್ಸಾಹಕರಾಗಿದ್ದಾರೆ. ನಮ್ಮ ಪಕ್ಷದ ಸಂಘಟನೆ ಅತ್ಯತ್ತುಮವಾಗಿದೆ. ಯಾರು ಏನೇ ಹೇಳಲಿ ಬಿಜೆಪಿ ಗೆಲ್ಲುತ್ತದೆ ಎಂದರು.
ವರುಣಾದಲ್ಲಿ ವಿಜಯೇಂದ್ರ ಮುಖ್ಯವಲ್ಲ, ಬಿಜೆಪಿ ಮಾತ್ರ ಮುಖ್ಯ.ಕೆ.ಆರ್ ಪೇಟೆಯಲ್ಲಿ ನಾವು ಗೆಲ್ಲುತ್ತೇವೆ ಎಂಬುದು ಯಾರಿಗೆ ಗೊತ್ತಿತ್ತು.ಸ್ವತಃ ನಮಗೆ ಗೆಲ್ಲುತ್ತೇವೆ ಅಂತ ಗೊತ್ತಿರಲಿಲ್ಲ.ಅಂತಹ ಕ್ಷೇತ್ರವನ್ನೇ ನಾವು ಗೆದಿದ್ದೇವೆ. ಮತದಾರನ ವಿಶ್ವಾಸವೇ ಮುಖ್ಯ.ಯಾವ ಕ್ಷೇತ್ರವೂ ಅಸಾಧ್ಯವಲ್ಲ ಎಂದರು.
ವರುಣಾ ಕ್ಷೇತ್ರದ ಜನ ನನ್ನನ್ನು ರಾಜ್ಯಕ್ಕೆ ಪರಿಚಯಿಸಿದ್ದು: ವರುಣಾ ಕ್ಷೇತ್ರದ ಋಣ ನನ್ನ ಮೇಲೆ ಇದೆ. ನನ್ನನ್ನು ರಾಜ್ಯಕ್ಕೆ ಪರಿಚಯ ಮಾಡಿಸಿದ್ದೇ ವರುಣಾ ಕ್ಷೇತ್ರ. ನಾನು ವರುಣಾದಿಂದ ಸ್ಪರ್ಧೆ ಮಾಡಬೇಕೊ,ಶಿಕಾರಿಪುರದಿಂದ ಸ್ಪರ್ಧೆ ಮಾಡಬೇಕೋ ಅಥವಾ ಎಲ್ಲಿಂದಲೂ ಸ್ಪರ್ಧಿಸಬಾರದು ಎಲ್ಲವನ್ನೂ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದರಲ್ಲಿ ವಿಜಯೇಂದ್ರ, ಯಡಿಯೂರಪ್ಪನವರು, ರಾಘವೇಂದ್ರ ಅವರ ತೀರ್ಮಾನ ಎಂಬುದು ಇರುವುದಿಲ್ಲ. ಸಂಪೂರ್ಣವಾಗಿ ಹೈಕಮಾಂಡ್ ತೀರ್ಮಾನವೇ ನಮ್ಮಲ್ಲಿ ಅಂತಿಮ ಎಂದರು.
ನನಗೆ ವರುಣಾ ಕ್ಷೇತ್ರದಷ್ಟೇ ರಾಜ್ಯದ 223 ಕ್ಷೇತ್ರಗಳು ಮುಖ್ಯ.ಶಿಕಾರಿಪುರ ನಮ್ಮ ತಂದೆಯವರ ಕ್ಷೇತ್ರ. ಅಲ್ಲಿಂದಲೇ ನಾನು ಸ್ಪರ್ಧಿಸಬೇಕೆಂದು ತಂದೆಯವರು ಇಚ್ಚೆ. ಆ ಇಚ್ಚೆಯಂತೇ ಒಂದು ಸುತ್ತು ಪ್ರಚಾರ ಮುಗಿಸಿದ್ದೇನೆ. ಏಪ್ರಿಲ್ 3 ರ ನಂತರ ಮತ್ರೆ ಪ್ರಚಾರ ನಡೆಸುತ್ತೇನೆ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುತ್ತೊ ಇಲ್ಲವೊ ಗೊತ್ತಿಲ್ಲ.ಅಂತಹದರಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತೇನೆ ಅನ್ನುವುದು ಈಗ ಅಪ್ರಸ್ತುತ ವಿಚಾರ ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ