ಸಿದ್ದು-ಡಿಕೆಶಿ ನಡುವಿನ 'ಬಿರುಕು': ಈ ಬಗ್ಗೆ ಡಿ ಕೆ ಶಿವಕುಮಾರ್ ರಾಜಕೀಯ ತಂತ್ರಗಾರ ನರೇಶ್ ಅರೋರ ಹೇಳುವುದೇನು?
ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಸಾಧಿಸಿದೆ, ಬಿಜೆಪಿಯನ್ನು ಸೋಲಿಸಿ ವಿಜಯೋತ್ಸವ ಆಚರಿಸಿದೆ.
Published: 16th May 2023 01:07 PM | Last Updated: 16th May 2023 04:55 PM | A+A A-

ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್(ಸಂಗ್ರಹ ಚಿತ್ರ)
ನವದೆಹಲಿ: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಸಾಧಿಸಿದೆ, ಬಿಜೆಪಿಯನ್ನು ಸೋಲಿಸಿ ವಿಜಯೋತ್ಸವ ಆಚರಿಸಿದೆ.
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ನಂತರ ದಿನೇಶ್ ಗೂಂಡೂರಾವ್ ಅಲ್ಪಾವಧಿಗೆ ಕೆಪಿಸಿಸಿ ಅಧ್ಯಕ್ಷರಾದರು. ನಂತರ ಕೆಪಿಸಿಸಿ ಸಾರಥ್ಯ ವಹಿಸಿದವರು ಕನಕಪುರ ಬಂಡೆ ಎಂದು ಅಭಿಮಾನಿಗಳಿಂದ, ಮಾಧ್ಯಮಗಳಿಂದ ಕರೆಯಲ್ಪಡುವ ಡಿ ಕೆ ಶಿವಕುಮಾರ್.
ಶಿವಕುಮಾರ್ ಅವರೊಂದಿಗೆ ಕಳೆದ ಎರಡು ವರ್ಷಗಳಲ್ಲಿ ಒಂದು ಗುಂಪು ನಿಕಟವಾಗಿ ತಳಮಟ್ಟದಿಂದ ಕೆಲಸ ಮಾಡುತ್ತಾ ಬಂತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಯಶಸ್ಸು ಸಾಧಿಸಲು ಈ ಡಿ ಕೆ ಶಿವಕುಮಾರ್ ಅವರ ಈ ತಂಡದ ಸತತ ಪ್ರಯತ್ನ, ಕೆಲಸ ಮತ್ತು ಶ್ರಮ ಸಾಕಷ್ಟು ಇದೆ. ಅವರಲ್ಲಿ ಡಿಸೈನ್ಡ್ ಬಾಕ್ಸ್ ನ ಸ್ಥಾಪಕ ಮತ್ತು ನಿರ್ದೇಶಕ ನರೇಶ್ ಅರೋರ ಪ್ರಮುಖರು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಡಿ ಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದ (ED) ಮುಂದೆ ಹಾಜರಾದ ವೇಳೆ ಅವರ ಸೋದರ ಡಿ ಕೆ ಸುರೇಶ್ ಜೊತೆಗೆ ಇದ್ದವರು ಈ ಅರೋರ.
ಚುನಾವಣೆಯಲ್ಲಿ ಗೆದ್ದ ನಂತರ ಐಎಎನ್ಎಸ್ಗೆ ನೀಡಿದ ಸಂದರ್ಶನದಲ್ಲಿ ಅರೋರಾ, ಕಾಂಗ್ರೆಸ್ನ ಕರ್ನಾಟಕದ ಯಶಸ್ಸಿನ ಬಗ್ಗೆ ಹತ್ತು ಹಲವು ಸಂಗತಿಗಳನ್ನು ಮಾತನಾಡಿದ್ದಾರೆ. ಫಲಿತಾಂಶ ಬಂದಾಗ ನನಗೆ ಅಚ್ಚರಿಯಾಗಲಿಲ್ಲ ಎಂದಿದ್ದಾರೆ. ನಾವು ಕಳೆದ ಎರಡು ವರ್ಷಗಳಿಂದ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದೇವೆ, ನಿಯಮಿತವಾಗಿ ಕಾಂಗ್ರೆಸ್ ಪಕ್ಷದ ಜೊತೆ ನಿಂತು ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಾ ಸೇವಾ ವ್ಯವಸ್ಥೆಯನ್ನು ಪತ್ತೆಹಚ್ಚುತ್ತಾ ಇದ್ದೆವು. ಕಾಂಗ್ರೆಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಮಗೆ ಹಿಂದಿನಿಂದಲೂ ಅನಿಸುತ್ತಿತ್ತು ಎಂದಿದ್ದಾರೆ.
ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಿದ ಆಧಾರದಲ್ಲಿ ಈ ಬಾರಿ ಕಾಂಗ್ರೆಸ್ 135ರಿಂದ 145 ಸೀಟುಗಳನ್ನು ಗೆಲ್ಲುತ್ತದೆ ಎಂಬ ಖಚಿತ ಭರವಸೆ ನಮಗಿತ್ತು. ಕೆಲವು ಸ್ಥಾನಗಳನ್ನು ನಾವು ಬಹಳ ಕಡಿಮೆ ಅಂತರದಿಂದ ಕಳೆದುಕೊಂಡಿದ್ದೇವೆ, ಇಲ್ಲದಿದ್ದರೆ ಕಾಂಗ್ರೆಸ್ ಶಾಸಕರ ಸ್ಥಾನ 140 ದಾಟುತ್ತಿತ್ತು ಎಂದಿದ್ದಾರೆ.
ಕಾಂಗ್ರೆಸ್ ಪಾಳಯದಲ್ಲಿ ಆಂತರಿಕ ಜಗಳವಿದೆ, ವಿಶೇಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಆಗಾಗ ಪೈಪೋಟಿ ನಡೆಯುತ್ತವೆ, ಸಿದ್ದರಾಮಯ್ಯ ಬಣ ಮತ್ತು ಡಿ ಕೆ ಶಿವಕುಮಾರ್ ಬಣ ಎಂಬುದಿದೆ ಎಂದು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಪದೇ ಪದೇ ಸುದ್ದಿಯಾಗುತ್ತಿದ್ದಾಗ ಅವರನ್ನು ಸಾರ್ವಜನಿಕರ ಮುಂದೆ ಒಗ್ಗಟ್ಟಾಗಿ ಬಿಂಬಿಸಿದವರು ಇದೇ ನರೇಶ್ ಅರೋರ.

ಇಬ್ಬರ ಮಧ್ಯೆ ಸಹಕಾರ ತರಲು, ಇಬ್ಬರನ್ನು ಒಟ್ಟಿಗೆ ತರಲು ಹೇಗೆ ಸಾಧ್ಯವಾಯಿತು ಎಂದು ಕೇಳಿದಾಗ, ನಿಜ ಹೇಳಬೇಕೆಂದರೆ ಈ ಇಬ್ಬರು ನಾಯಕರು ಮಧ್ಯೆ ಭಿನ್ನಾಭಿಪ್ರಾಯ ಜಗಳಗಳಿಲ್ಲ, ಅವೆಲ್ಲ ತಪ್ಪು ಭಾವನೆ ಮತ್ತು ಸುಳ್ಳು ಪ್ರಚಾರಗಳು. ಈ ಇಬ್ಬರು ನಾಯಕರು ಪಕ್ಷದಲ್ಲಿ ತಮ್ಮದೇ ಆದ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಹೊಂದಿದ್ದಾರೆ ಮತ್ತು ತಮ್ಮದೇ ಆದ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದಾರೆ ಮತ್ತು ಅದು ತಪ್ಪೇನಲ್ಲ. ಆದರೆ ಪಕ್ಷದ ವಿಷಯಕ್ಕೆ ಬಂದಾಗ, ಅವರಿಬ್ಬರು ಒಂದಾಗಿದ್ದು, ಸಾಮಾನ್ಯ ಗುಣ ಹೊಂದಿದ್ದಾರೆ ಮತ್ತು ಇಬ್ಬರೂ ತಂತ್ರಗಳನ್ನು ಚರ್ಚಿಸುತ್ತಾರೆ ಎಂದರು.
ರಾಜ್ಯದಲ್ಲಿ ಮೊನ್ನೆ ಮೇ 10ರಂದು ಮತದಾನಕ್ಕೆ ದಿನಗಳ ಮೊದಲು ಬಿಡುಗಡೆಯಾದ ಇಬ್ಬರು ನಾಯಕರ ಸಂಭಾಷಣೆಯ ವೀಡಿಯೊಗಳ ಬಗ್ಗೆ ಹೇಳಿದ ಅರೋರ, ಕರ್ನಾಟಕದಲ್ಲಿ ಸರ್ಕಾರ ರಚನೆಯಾದ ನಂತರ ಅವರು ಕಾರ್ಯಗತಗೊಳಿಸಲು ಬಯಸುವ ನೀತಿಗಳು ಮತ್ತು ಯೋಜನೆ ಮತ್ತು ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ್ದರು.
ಇಬ್ಬರೂ ಪರಸ್ಪರ ಜಗಳವಾಡುತ್ತಾರೆ, ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬುದೆಲ್ಲ ಮಾಧ್ಯಮಗಳ ಸೃಷ್ಟಿಯಷ್ಟೆ. ರಾಜಕೀಯದಲ್ಲಿ ಎಲ್ಲರೂ ಇತರರಿಗಿಂತ ಮುಂದೆ ಇರಬೇಕೆಂದು ಬಯಸುತ್ತಾರೆ, ಆದರೆ ಪಕ್ಷವಿಲ್ಲದೆ ಅದು ಸಾಧ್ಯವಿಲ್ಲ ಎಂಬುದು ಇಬ್ಬರಿಗೂ ಗೊತ್ತಿದೆ. ಚುನಾವಣೆ ಸಂದರ್ಭದಲ್ಲಿ ನಿಕಟವಾಗಿ ಇಬ್ಬರೂ ಕೆಲಸ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಸಿಎಂ ಹುದ್ದೆ ರೇಸ್ ನಲ್ಲಿ ಸಿದ್ದು v/s ಡಿಕೆಶಿ: ಇಬ್ಬರು ನಾಯಕರ ಪ್ಲಸ್-ಮೈನಸ್ ಗಳೇನು?
ಕಳೆದ ಎರಡು ವರ್ಷಗಳಿಂದ ಪಕ್ಷದ ಕಾರ್ಯತಂತ್ರವನ್ನು ರೂಪಿಸುವಲ್ಲಿ ಅವರು ತೊಡಗಿಸಿಕೊಂಡಿದ್ದರು. ಇದರಲ್ಲಿ ಒಬ್ಬರು ಹೆಚ್ಚು, ಇನ್ನೊಬ್ಬರು ಕಡಿಮೆ ಎಂದು ಹೇಳಲು ಸಾಧ್ಯವಿಲ್ಲ. ಕಳೆದ ಎರಡು ವರ್ಷಗಳಲ್ಲಿ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಒಂದರ ಹಿಂದೆ ಒಂದರಂತೆ ನಿರಂತರ ಪ್ರಚಾರಗಳನ್ನು ನಡೆಸುತ್ತಿದೆ, ಇದರಲ್ಲಿ ಜನರೊಂದಿಗೆ ಸಂಪರ್ಕ ಸಾಧಿಸಲು, ತಮ್ಮದೇ ಪಕ್ಷದ ಕಾರ್ಯಕರ್ತರೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರೊಂದಿಗೆ ಸಂಪರ್ಕ ಸಾಧಿಸಿತ್ತು.
ಕರ್ನಾಟಕದ ಕಾಂಗ್ರೆಸ್ ನಾಯಕರಲ್ಲಿ ಸ್ಥಿರತೆ ಇತ್ತು, ಕಠಿಣ ಪರಿಶ್ರಮ ಎದ್ದುಕಾಣುತ್ತದೆ. ಜನರು ಅದನ್ನು ನೋಡಿದಾಗ ಖಂಡಿತವಾಗಿಯೂ ಪ್ರಶಂಸಿಸುತ್ತಾರೆ ಮತ್ತು ಪುರಸ್ಕರಿಸುತ್ತಾರೆ ಮತ್ತು ಕಾಂಗ್ರೆಸ್ಗೆ ಸಿಕ್ಕಿರುವಂತಹ ಸಂಖ್ಯೆಯ ಫಲಿತಾಂಶಗಳು ಇದನ್ನೇ ತಿಳಿಸಿವೆ ಎಂದರು.
ಕಳೆದ ವರ್ಷದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೃಷ್ಟಿಸಿದ 'ಗ್ಯಾರಂಟಿ' ಪದ ಮತ್ತು ಪ್ರತಿ ಮಹಿಳೆಯ ಖಾತೆಗೆ ಮಾಸಿಕ 2,000 ರೂಪಾಯಿಗಳನ್ನು ವರ್ಗಾಯಿಸುವ ಪಕ್ಷದ ಪ್ರಸ್ತಾಪವು ಅಸ್ಸಾಂನಲ್ಲಿ ಕೆಲಸ ಮಾಡಲಿಲ್ಲ, ಕರ್ನಾಟಕ ಜನತೆ ಹೇಗೆ ಒಪ್ಪಿಕೊಂಡರು, ಕರ್ನಾಟಕದ ರಾಜಕೀಯ ಸ್ಥಿತಿಗತಿ ಬೇರೆಯಿದೆ ಎಂದು ಅರೋರಾ ಹೇಳುತ್ತಾರೆ. ಅಸ್ಸಾಂ ಪ್ರಚಾರದಲ್ಲಿ ಗ್ಯಾರಂಟಿ ತಂತ್ರ ಕೆಲಸ ಮಾಡಲಿಲ್ಲ ಎನ್ನುತ್ತಾರೆ ಅರೋರ.
Best wishes to @DKShivakumar and @siddaramaiah for #KarnatakaAssemblyElection2023 https://t.co/wRXW0hVLP1 pic.twitter.com/kGsXZg2jFB
— Naresh Arora (@nishuarora) May 7, 2023