2019ರಲ್ಲಿ ನಾವು ರಾಜೀನಾಮೆ ನೀಡಿ ಕಾಂಗ್ರೆಸ್ ನಿಂದ ಹೊರಬರಲು ಸಿದ್ದರಾಮಯ್ಯ ಪ್ರಮುಖ ಕಾರಣ: ಡಾ ಸುಧಾಕರ್
2018ರಲ್ಲಿ ರಚನೆಯಾದ ಕಾಂಗ್ರೆಸ್ ಜೆಡಿಎಸ್-ಮೈತ್ರಿ ಸರ್ಕಾರ 2019ರಲ್ಲಿ ಪತನವಾಗಿದ್ದು ಈಗ ಇತಿಹಾಸ. 2018ರಲ್ಲಿ 104 ಸೀಟು ಗೆದ್ದಿದ್ದ ಬಿಜೆಪಿ ಜೆಡಿಎಸ್-ಕಾಂಗ್ರೆಸ್ ನ 16 ಶಾಸಕರನ್ನು ಆಪರೇಷನ್ ಕಮಲ ಮೂಲಕ ಸೆಳೆದು ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರ ರಚಿಸಿದರು.
Published: 17th May 2023 08:25 AM | Last Updated: 17th May 2023 08:39 AM | A+A A-

ಡಾ ಸುಧಾಕರ್-ಸಿದ್ದರಾಮಯ್ಯ
ಬೆಂಗಳೂರು: 2018ರಲ್ಲಿ ರಚನೆಯಾದ ಕಾಂಗ್ರೆಸ್ ಜೆಡಿಎಸ್-ಮೈತ್ರಿ ಸರ್ಕಾರ 2019ರಲ್ಲಿ ಪತನವಾಗಿದ್ದು ಈಗ ಇತಿಹಾಸ. 2018ರಲ್ಲಿ 104 ಸೀಟು ಗೆದ್ದಿದ್ದ ಬಿಜೆಪಿ ಜೆಡಿಎಸ್-ಕಾಂಗ್ರೆಸ್ ನ 16 ಶಾಸಕರನ್ನು ಆಪರೇಷನ್ ಕಮಲ ಮೂಲಕ ಸೆಳೆದು ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರ ರಚಿಸಿದರು.
2019ರಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದ್ದ 16 ಶಾಸಕರ ಪೈಕಿ ಈ ಬಾರಿಯ ಚುನಾವಣೆಯಲ್ಲಿ 8 ಮಂದಿ ಸೋಲು ಕಂಡಿದ್ದಾರೆ. ಅಂದು ಆಪರೇಷನ್ ಕಮಲಕ್ಕೆ ಬಲಿಯಾದವರು, ಕಾಂಗ್ರೆಸ್ ಜೆಡಿಎಸ್ ಬಿಟ್ಟು ಬಂದವರಿಗೆ, ಪಕ್ಷಾಂತರ ಮಾಡುವವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಹುತೇಕ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ಇದಕ್ಕೆ ಉತ್ತರ ಎಂಬಂತೆ ಮಾಜಿ ಆರೋಗ್ಯ ಸಚಿವ ಚಿಕ್ಕಬಳ್ಳಾಪುರದ ಡಾ ಸುಧಾಕರ್ ಟ್ವೀಟ್ ಮಾಡಿದ್ದಾರೆ. ನಾವು ಸುಮ್ಮನೆ ಕಾಂಗ್ರೆಸ್ ತೊರೆದು ಬಂದಿಲ್ಲ, ಅಂದು ಪಕ್ಷದಲ್ಲಿ ನಮ್ಮ ಅಸಹಾಯಕತೆ, ನಮ್ಮನ್ನು ನಂಬಿದ ಕಾರ್ಯಕರ್ತರನ್ನು, ಮುಖಂಡರನ್ನು ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023: ಪಕ್ಷಾಂತರಿಗಳಿಗೆ ಶಾಕ್ ಕೊಟ್ಟ ಮತದಾರ: 30 ಮಂದಿಯ ಪೈಕಿ 8 ಮಂದಿಗೆ ಜಯ
ಸಿದ್ದರಾಮಯ್ಯನವರು ಪ್ರಮುಖ ಕಾರಣ: ಇಲ್ಲಿ ಡಾ ಸುಧಾಕರ್ ತಾವು ಕಾಂಗ್ರೆಸ್ ತೊರೆದು ಬರುವಲ್ಲಿ ಸಿದ್ದರಾಮಯ್ಯನವರ ಪಾತ್ರ ಮುಖ್ಯವಾಗಿದೆ ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ. 2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರುಗಳು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು.
ಇದನ್ನೂ ಓದಿ: 2019 ರಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದ್ದ ಶಾಸಕರ ಪೈಕಿ 8 ಮಂದಿಗೆ ಈಗ ಸೋಲು
2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿನವೂ ಕುಮಾರಸ್ವಾಮಿ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು ಎಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು.
— Dr Sudhakar K (@mla_sudhakar) May 17, 2023
ನಮ್ಮ ನಡೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ?
3/3