ಕರ್ನಾಟಕಕ್ಕೆ 'ಸಿದ್ದ ಸರ್ಕಾರ': ಅಹಿಂದ ನಾಯಕನ ರಾಜಕೀಯ ಜೀವನದ ಸಂಕ್ಷಿಪ್ತ ವಿವರ

2013ರಲ್ಲಿ ಸಂಪೂರ್ಣ ಬಹುಮತ ಸಿಕ್ಕಿದಾಗ ಕಾಂಗ್ರೆಸ್ ನಿಂದ ಪ್ರಶ್ನಾತೀತ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು ಅಹಿಂದ ನಾಯಕ ಸಿದ್ದರಾಮಯ್ಯ.(Siddaramaiah Karnataka CM)
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: 2013ರಲ್ಲಿ ಸಂಪೂರ್ಣ ಬಹುಮತ ಸಿಕ್ಕಿದಾಗ ಕಾಂಗ್ರೆಸ್ ನಿಂದ ಪ್ರಶ್ನಾತೀತ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು ಅಹಿಂದ ನಾಯಕ ಸಿದ್ದರಾಮಯ್ಯ.(Siddaramaiah Karnataka CM)

2013ರ ಮೇ ತಿಂಗಳಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಿದ್ದರಾಮಯ್ಯನವರು ಇದೀಗ ಸರಿಯಾಗಿ ದಶಕದ ನಂತರ ಮತ್ತೊಮ್ಮೆ ಎರಡನೇ ಬಾರಿಗೆ 2023ರಲ್ಲಿ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅದೇ ಸ್ಥಳದಲ್ಲಿ ಅಧಿಕಾರದ ಗದ್ದುಗೆ ಏರಲು ಹೊರಟಿದ್ದಾರೆ. ಆದರೆ ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದರಿಂದ ಫಲಿತಾಂಶ ಬಂದು 5 ದಿನಗಳ ನಂತರ ಸಿಎಂ ಯಾರು ಎಂದು ಪ್ರಕಟವಾಯಿತು.

ಸಿದ್ದರಾಮಯ್ಯನವರಿಗೆ ಸಿಎಂ ಪಟ್ಟ ಒಲಿಯಲು ಕಾರಣ: ಎರಡನೇ ಬಾರಿ ಮುಖ್ಯಮಂತ್ರಿಯಾಗಬೇಕೆಂದು ಕನಸು, ಆಸೆ ಪಟ್ಟ ಸಿದ್ದರಾಮಯ್ಯನವರಿಗೆ ಈ ಬಾರಿ ಅಡ್ಡಬಂದಿದ್ದು ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದು ಹೆಸರು ಪಡೆದ ಡಿ ಕೆ ಶಿವಕುಮಾರ್. ಹೀಗಾಗಿ ಈ ಬಾರಿ 135 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದರೂ ಫಲಿತಾಂಶ ಬಂದು ಸಿಎಂ ಆಯ್ಕೆ ಮಾಡಲು ಹೈಕಮಾಂಡ್ ಗೆ 5 ದಿನಗಳು ಹಿಡಿಯಿತು. 

ಕೊನೆಗೂ ಸಿಎಂ ಗಾದಿ ಹಗ್ಗಜಗ್ಗಾಟದಲ್ಲಿ ಸಿದ್ದರಾಮಯ್ಯನವರದ್ದೇ ಕೈ ಮೇಲಾಯಿತು. ಹಾಗಾದರೆ ಹೈಕಮಾಂಡ್ ಸಿದ್ದರಾಮಯ್ಯನವರಿಗೆ ಪ್ರಾಶಸ್ತ್ಯ ನೀಡಲು ಕಾರಣವೇನು ಎಂದು ನೋಡಿದಾಗ:

-ಕರ್ನಾಟಕ ರಾಜಕೀಯದಲ್ಲಿ ಸಿದ್ದರಾಮಯ್ಯ ಜನಪ್ರಿಯ ನಾಯಕ
-ಬಡವರ ಪರ ಕಾಳಜಿ, ದೀನದಲಿತರ ಪರ ನಾಯಕ ಎಂದು ಸಿದ್ದರಾಮಯ್ಯ ಜನಪ್ರಿಯ. 
-ಕಾಂಗ್ರೆಸ್ ನ ಬಹುತೇಕ ಶಾಸಕರ ಬೆಂಬಲ 
-ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಬೆಂಬಲ 

ಸಿಎಂ ಮತ್ತು ಡಿಸಿಎಂ ಆಯ್ಕೆ ಕಗ್ಗಂಟು ಕೊನೆಗೂ ಬಗೆಹರಿದಿದೆ. ಆದರೆ ಇನ್ನು ಮುಂದೆ ಸಮನ್ವಯದಿಂದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಕೆಲಸ ಮಾಡಿಕೊಂಡು ಹೋಗುತ್ತಾರೆಯೇ, ಇನ್ನು ಎರಡೂವರೆ ವರ್ಷ ಕಳೆದ ನಂತರ ಸಿದ್ದರಾಮಯ್ಯನವರು ಸಂತೋಷದಿಂದ ಯಾವುದೇ ಸಮಸ್ಯೆ, ವಿವಾದಗಳಿಲ್ಲದೆ ಸಿಎಂ ಪಟ್ಟವನ್ನು ಡಿ ಕೆ ಶಿವಕುಮಾರ್ ಗೆ ಬಿಟ್ಟುಕೊಡುತ್ತಾರೆಯೇ ಎಂಬುದು ಸದ್ಯದ ಸಂದೇಹ.

ಸಿದ್ದರಾಮಯ್ಯನವರ ರಾಜಕೀಯ ಪಯಣದ ಸಂಕ್ಷಿಪ್ತ ನೋಟ: 1947ರ ಆಗಸ್ಟ್ 3ರಂದು ಮೈಸೂರು ಜಿಲ್ಲೆಯ ವರುಣಾ ತಾಲ್ಲೂಕಿನ ಸಿದ್ದರಾಮನಹುಂಡಿಯಲ್ಲಿ ಹಿಂದುಳಿದ ಕುರುಬ ಜನಾಂಗದಲ್ಲಿ ಜನನ. 
ವಿದ್ಯಾಭ್ಯಾಸ: ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಮಾಡಿದ ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಲ್ ಎಲ್ ಬಿ ವ್ಯಾಸಂಗ ಮಾಡಿ ಕೆಲಕಾಲ ವಕೀಲಿ ವೃತ್ತಿ ನಡೆಸಿದರು.
ಆರಂಭ ರಾಜಕೀಯ: ಅವರ ವಿದ್ಯಾರ್ಥಿ ದಿನಗಳಲ್ಲಿ, ಅವರು ನಿರರ್ಗಳ ಭಾಷಣಕಾರರಾಗಿದ್ದರು ಮತ್ತು ಅವರ ಭಾಷಣ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದರು. ಡಾ ರಾಮ್ ಮನೋಹರ್ ಲೋಹಿಯಾ ಪ್ರತಿಪಾದಿಸಿದ ಸಮಾಜವಾದದಿಂದ ಅವರು ಪ್ರಭಾವಿತರಾಗಿದ್ದರು.

ಶಾಸಕರಾಗಿ 4 ದಶಕಗಳ ಅನುಭವ: 1983 ರಲ್ಲಿ, ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳ ಪಕ್ಷವನ್ನು ಪ್ರತಿನಿಧಿಸಿ ಶಾಸಕರಾಗಿ ಏಳನೇ ಕರ್ನಾಟಕ ವಿಧಾನಸಭೆಗೆ ಪ್ರವೇಶಿಸಿದರು. ನಂತರ, ಅವರು ಆಡಳಿತಾರೂಢ ಜನತಾದಳ ಪಕ್ಷಕ್ಕೆ ಸೇರಿದರು. ಕನ್ನಡವನ್ನು ಅಧಿಕೃತ ಭಾಷೆಯಾಗಿ ಅನುಷ್ಠಾನಗೊಳಿಸುವುದನ್ನು ಮೇಲ್ವಿಚಾರಣೆ ಮಾಡಿದ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು.

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಮೃದ್ಧಿಗಾಗಿ ಶ್ರಮಿಸಿದರು. ರೇಷ್ಮೆ ಖಾತೆ ಸಚಿವರಾದರು. ರಾಜ್ಯದಲ್ಲಿ ರೇಷ್ಮೆ ಇಲಾಖೆ ಮತ್ತು ರೇಷ್ಮೆ ಉದ್ಯಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ತುಳಿತಕ್ಕೊಳಗಾದ ವರ್ಗಗಳ ಧ್ವನಿಯಾದರು.


ನಂತರ ಅಂದಿನ ಆಡಳಿತಾರೂಢ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿ(ನಂತರ ಜನತಾ ದಳ) ಸಮಾಜದ ದುರ್ಬಲ ವರ್ಗದ ನಾಯಕನಾಗಿ ಗುರುತಿಸುವಿಕೆ.

ಚಾಮುಂಡೇಶ್ವರಿ ಕ್ಷೇತ್ರದಿಂದ 183ರಿಂದ 1989, 1994ರಿಂದ 1999, 2004ರಿಂದ 2007ರವರೆಗೆ ಶಾಸಕರಾಗಿ ಆಯ್ಕೆ. ನಂತರ ಚಾಮುಂಡೇಶ್ವರಿ ತೊರೆದು ವರುಣಾ ಕ್ಷೇತ್ರದಿಂದ ಸ್ಪರ್ಧೆ(2008ರಿಂದ 2018ರವರೆಗೆ) 2018ರಲ್ಲಿ ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆ, 2023ರಲ್ಲಿ ಮತ್ತೆ ವರುಣಾದಲ್ಲಿ ಸ್ಪರ್ಧಿಸಿ ಗೆದ್ದು ಸಿಎಂ ಆಗಿ ಆಯ್ಕೆ.

ಮಾಜಿ ಮುಖ್ಯಮಂತ್ರಿ ಮತ್ತು ಪ್ರಧಾನಿ ಹೆಚ್ ಡಿ ದೇವೇಗೌಡರ ಗರಡಿಯಲ್ಲಿ ಪಳಗಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ನಾಯಕನಾಗಿ ಗುರುತಿಸಿಕೊಳ್ಳುವಿಕೆ. ಆದರೆ ಜೆಡಿಎಸ್ ನಲ್ಲಿ ಆಗ ದೇವೇಗೌಡರ ಪುತ್ರ ಹೆಚ್ ಡಿ ಕುಮಾರಸ್ವಾಮಿಯವರು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ, ದೇವೇಗೌಡರು ತಮ್ಮ ಪುತ್ರನನ್ನು ಬೆಳೆಸುತ್ತಿದ್ದಾರೆ ಎಂದು ಮನಗಂಡು ಬಂಡಾಯ.

ಜೆಡಿಎಸ್ ನಿಂದ ಹೊರನಡೆದು ರಾಜ್ಯದಲ್ಲಿ ಅಹಿಂದ ಚಳವಳಿ ಪ್ರಾರಂಭ. 2006ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಮೊದಲು ಅವರು 1996 ರಿಂದ 1999 ರವರೆಗೆ ಉಪಮುಖ್ಯಮಂತ್ರಿಯಾಗಿ ದಿವಂಗತ ಜೆ.ಎಚ್. ಪಟೇಲ್ ನೇತೃತ್ವದ ಜನತಾದಳ ಸರ್ಕಾರದಲ್ಲಿ ಸೇವೆ ಸಲ್ಲಿಸಿದ್ದರು. ಧರಂ ಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿ(ಎಸ್) ಸಮ್ಮಿಶ್ರ ಸರ್ಕಾರದಲ್ಲಿ ಅವರು 2004 ರಿಂದ 2005 ರವರೆಗೆ ಉಪಮುಖ್ಯಮಂತ್ರಿ ಹುದ್ದೆಯಲ್ಲಿದ್ದರು.

ಸಿದ್ದರಾಮಯ್ಯ ಅವರು 2009 ರಿಂದ 2013 ಮತ್ತು 2019 ರಿಂದ 2023 ರವರೆಗೆ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ.

ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಸಚಿವರಾಗಿ ಕೆಲಸ ಮಾಡಿದ್ದರು. ಸಿದ್ದರಾಮಯ್ಯ ಅವರು ಡಿಸಿಎಂ ಆಗಿ ಹಣಕಾಸು ಮತ್ತು ಅಬಕಾರಿ ಖಾತೆಗಳನ್ನು ನಿರ್ವಹಿಸಿದ್ದರು. ಹಣಕಾಸು ಸಚಿವರಾಗಿ 13 ಬಾರಿ ರಾಜ್ಯ ಬಜೆಟ್ ಮಂಡಿಸಿದ್ದಾರೆ. 
 

ಅಹಿಂದ ನಾಯಕ: ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರನ್ನೊಳಗೊಂಡ ಗುಂಪು, ಅದರ ಸಂಕ್ಷಿಪ್ತ ರೂಪವೇ ಅಹಿಂದ. 

ಈ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀಯ ತಂತ್ರಗಾರಿಕೆ ತೋರಿಸಿ ಕಾಂಗ್ರೆಸ್ ನಲ್ಲಿ ಹೈಕಮಾಂಡ್ ವಿಶ್ವಾಸ ಗಳಿಸಿ ಅಭಿವೃದ್ಧಿ ಕಂಡ ನಾಯಕ ಸಿದ್ದರಾಮಯ್ಯ.

1970ರ ದಶಕದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರಂತೆ ಜನಪ್ರಿಯತೆ, ಇಮೇಜ್ ಪಡೆದುಕೊಂಡ ಮತ್ತೊಬ್ಬ ರಾಜಕಾರಣಿ ಸಿದ್ದರಾಮಯ್ಯ. ಕರ್ನಾಟಕದ ಎರಡು ಜನಪ್ರಿಯ, ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತ ನಾಯಕರ ಎದುರು ರಾಜಕೀಯ ಪ್ರಭಾವ ಮೆರೆದ ಹಿಂದುಳಿದ ವರ್ಗದ ನಾಯಕರೆಂದರೆ ಸಿದ್ದರಾಮಯ್ಯ.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಆರೆಸ್ಸೆಸ್ ವಿರುದ್ಧ ಸಮರ್ಥವಾಗಿ ವಾಗ್ದಾಳಿ ನಡೆಸುವ ದೇಶದ ಕೆಲವೇ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಒಬ್ಬರು. ಕೇಸರಿ ಪಡೆಗಳ ಮೇಲೆ ಅವರ ಕಟುವಾದ ದಾಳಿಯು ಕಾಂಗ್ರೆಸ್ ಮತ್ತು ಜನಸಾಮಾನ್ಯರಲ್ಲಿ ಅವರ ಸ್ಥಾನಮಾನವನ್ನು ಹೆಚ್ಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com