ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದ್ದರೂ ಮುಖ್ಯಮಂತ್ರಿ ಹುದ್ದೆಗಾಗಿ ಭಾರಿ ಪೈಪೋಟಿ ನಡೆದಿದ್ದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ 30:30 ಸೂತ್ರವನ್ನು ಅನ್ವಯಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಬಿಜೆಪಿ ಹೇಳಿದೆ.
ಈ ಸಂಬಂಧ ಟ್ವೀಟ್ ಮೂಲಕ ಟಾಂಗ್ ನೀಡಿರುವ ಬಿಜೆಪಿ "ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವುದು ಇಲ್ಲ, ಅವರನ್ನು ಆಗಲು ಸಿದ್ದರಾಮ್ಯ ಅವರು ಬಿಡುವುದು ಇಲ್ಲ. ಎಂ.ಬಿ. ಪಾಟೀಲ್ ಅವರು ಈ ಹೇಳಿಕೆಯ ಮೂಲಕ ಡಿ.ಕೆ. ಶಿವಕುಮಾರ ಅವರಿಗೆ ನೇರವಾದ ಎಚ್ಚರಿಕೆ ರವಾನಿಸಿದ್ದಾರಷ್ಟೇ! ಅದೇನೆ ಇದ್ದರೂ ಬಹುಮತ ದೊರಕಿದ ನಂತರದ ಈವರೆಗಿನ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ, ಈ ಸರ್ಕಾರ ಸುಸ್ತಿರವಾಗಿರಲಿದೆ ಎಂಬ ಯಾವ ಲಕ್ಷಣವೂ ಕಾಣುತ್ತಿಲ್ಲ, ಗ್ಯಾರಂಟಿಯೂ ಇಲ್ಲ ಎಂದು ಟ್ವೀಟ್ ನಲ್ಲಿ ಹೇಳಿದೆ.
ದೆಹಲಿಯ ತಮ್ಮ ಹೈಕಮಾಂಡಿಗೆ ಕಪ್ಪ ಪೂರೈಸಬೇಕಾದ ಏಕೈಕ ಮಾನದಂಡದಲ್ಲಿ ಈ ಎಟಿಎಂ ಸರ್ಕಾರ (ATMSarkara) ರಚನೆಯಾಗಿರುವುದು ಮತ್ತು ಅದಷ್ಟೇ ಇದರ ಆದ್ಯತೆಯಾಗಿರುವುದು ರಾಜ್ಯದ ದುರಂತ!" ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದೆ.
ಜಲಸಂಪನ್ಮೂಲ ಖಾತೆಗಾಗಿಯೂ ವಾರ್ ಆರಂಭ: ಈಗಾಗಲೇ ದೆಹಲಿಯಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದರಾಮಯ್ಯ ಅವರೊಂದಿಗೆ ಜಂಗೀ ಕುಸ್ತಿ ನಡೆಸಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಈಗ ಲಿಂಗಾಯತ ನಾಯಕ ಎಂ.ಬಿ. ಪಾಟೀಲ್ ಜಲಸಂಪನ್ಮೂಲ ಖಾತೆಯನ್ನೇ ನೀಡಬೇಕು ಎಂದು ಸವಾಲೊಡ್ಡುತ್ತಿದ್ದಾರೆ. ಜಲಸಂಪನ್ಮೂಲ ಖಾತೆಗಾಗಿ ಆರಂಭವಾದ ಆಂತರಿಕ ಯುದ್ಧ ಈಗ ಬಹಿರಂಗಗೊಂಡಿದ್ದು, ದೆಹಲಿಯ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಖಾತೆ ಹಂಚಿಕೆ ಫೈಟ್, ಪವರ್ ಶೇರಿಂಗ್ ಅಸ್ತ್ರದ ಮೂಲಕ ಹೊರ ಬಂತಾ ಎನ್ನುವುದು ಕೂಡ ಅನುಮಾನವಾಗಿದೆ.
Advertisement