ಕೋಲಾರ: ಕೋಲಾರದಲ್ಲಿ ಪ್ರತಿಭಟನೆಗೆ ಬರಬಾದರು ಎಂದು ಹೇಳುತ್ತಾರೆ. ಇದೇನು ಪಾಕಿಸ್ತಾನದಲ್ಲಿದೆಯೇ, ನಾನು ತಾಲಿಬಾಲಿನವನಲ್ಲ, ಬಾಂಬ್ ಹಾಕಿದವನಲ್ಲ. ಕೋಲಾರದ ಜನರು ಉಂಡ ಮನೆಗೆ ಎರಡು ಬಗೆದವರ ಬಗ್ಗೆ ಎಚ್ಚರ ವಹಿಸಬೇಕು ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ರಾಜ್ಯ ಸರ್ಕಾರ, ಜಿಲ್ಲಾಡಳಿತ ವೈಫಲ್ಯ, ಸಂಸದ ಎಸ್.ಮುನಿಸ್ವಾಮಿ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ರೈತರ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ನಗರದಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಖಡ್ಗ ಅಳವಡಿಸುತ್ತೀರಾ? ಆ ಟಿಪ್ಪುವನ್ನು ಕೊಂದ ನಮ್ಮ ಉರಿಗೌಡ, ನಂಜೇಗೌಡರ ಬಳಿಯೂ ಖಡ್ಗ ಇತ್ತು. ಹಾಗೇ ಹನುಮನ ಗದೆ, ಕೃಷ್ಣನ ಸಂದರ್ಶನ ಚಕ್ರ, ಶಿವನ ತ್ರಿಶೂಲ ಹೊರ ತೆಗೆಯಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.
ಇದು ರೈತ, ದಲಿತ, ಹಿಂದೂ ವಿರೋಧಿ ಸರ್ಕಾರ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಕೊಡದಂತೆ ತಡೆಹಿಡಿಯಲು ಪ್ರಯತ್ನ ನಡೆದಿತ್ತು. ಕೋಲಾರ ಏನು ಪಾಕಿಸ್ತಾನದಲ್ಲಿಯೇ? ಅಕ್ರಂ ಪಾಷ ನವಾಜ್ ಷರೀಫ್ ತಮ್ಮನೋ, ಮಗನೋ? ನಾನು ಕೋಲಾರಕ್ಕೆ ಬರಬಾರದೆಂದು ಹೇಳಲು ಇವನಾರು? ನಾನು ಬಾಂಬ್ ಹಾಕಿಲ್ಲ. ತಾಲಿಬಾನಿ ಅಲ್ಲ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾವೇರಿ ನೀರು ಬಿಟ್ಟು ಸ್ಟಾಲಿನ್ ಋಣ ತೀರಿಸಿದೆ. ಟಿಪ್ಪು ಸುಲ್ತಾನ್ ಖಡ್ಗ ಅಳವಡಿಸಲು ಬಿಟ್ಟು ಜಿಹಾದಿ, ತಾಲಿಬಾನಿಗಳ ಋಣ ತೀರಿಸುತ್ತಿದೆ ಎಂದು ಟೀಕಿಸಿದರು.
ಇದು ಭೂಗಳ್ಳರ ಸರ್ಕಾರ, ಖದೀಮ ಸರ್ಕಾರ ಎಂದು ಜನತಾ ದರ್ಶನದಲ್ಲಿ ಹೇಳಬೇಕಿತ್ತು. ಆದರೆ, ಸಚಿವರ ಅಕ್ಕ ಪಕ್ಕದಲ್ಲಿ ಭೂಗಳ್ಳರು ಕುಳಿತಿದ್ದಾರೆ ಎಂಬುದಾಗಿ ನಮ್ಮ ಸಂಸದರು ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು. ಈ ಸರ್ಕಾರ ಚಾಮುಂಡಿ ವೈಭವ ಮಾಡುವುದನ್ನು ಬಿಟ್ಟು ಮಹಿಷಾಸುರನ ದಸರಾ ಮಾಡುತ್ತಿದೆ. ರಾಕ್ಷಸರ ರೀತಿ, ರಾಕ್ಷಸರಿಗೆ ಬೆಂಬಲ ನೀಡುತ್ತಿರುವ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.
Advertisement