ಲೋಕಸಭೆ ಚುನಾವಣೆ: ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ V/s 4 ಜನ ಮಂಜುನಾಥ್!
ರಾಮನಗರ: ರಾಜ್ಯದಲ್ಲಿ ಲೋಕಸಭೆ ಚುನಾವಣಾ ಕಣ ರಂಗೇರುತ್ತಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ ತಮ್ಮ ವಿರುದ್ಧ ಮಂಜುನಾಥ್ ಎಂಬ ಅನೇಕ ಹೆಸರುಗಳು ಕಣದಲ್ಲಿದ್ದು, ಇದು ಪ್ರತಿಸ್ಪರ್ಧಿ ಪಾಳೆಯದ ಹಳೆಯ ತಂತ್ರ ಎಂದು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರು ಗುರುವಾರ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇಂದು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎನ್ ಮಂಜುನಾಥ್ ಅವರು, ಇವು ಬಹಳ ಹಳೆಯ ತಂತ್ರಗಳು. ಇದರಿಂದ ಕೆಲವರು ಭಯಭೀತರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಡಾ.ಮಂಜುನಾಥ್ ಅವರಿಗೆ ಮಂಜುನಾಥ್ ಎಂಬ ಹೆಸರಿನ ಹಲವು ಪ್ರತಿಸ್ಪರ್ಧಿಗಳಾಗಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರಾದ ಮಂಜುನಾಥ ಸಿ ಎನ್ ಎಂಬ ವ್ಯಕ್ತಿ ಸಹ ಕಣದಲ್ಲಿದ್ದು, ಅವರ ತಂದೆಯ ಹೆಸರು ನಂಜುಂಡಪ್ಪ.
ಡಾ. ಮಂಜುನಾಥ್ ಅವರ ತಂದೆಯ ಹೆಸರು ನಂಜಪ್ಪ. ಈ ಇಬ್ಬರು ಅಭ್ಯರ್ಥಿಗಳ ಪಾಸ್ಪೋರ್ಟ್ ಸೈಜಿನ ಫೋಟೋಗಳು ಕಪ್ಪು ಬ್ಲೇಜರ್ ಮತ್ತು ಟೈನಲ್ಲಿ ಇವೆ.
ಇತರ ಹೆಸರುಗಳೆಂದರೆ ಬೆಂಗಳೂರಿನ ಪಾಪರೆಡ್ಡಿಪಾಳ್ಯದ ಮಂಜುನಾಥ್ ಕೆ, ಬೆಂಗಳೂರಿನ ರಾಜಾಜಿನಗರದ ಎನ್ ಮಂಜುನಾಥ್ ಮತ್ತು ಬೆಂಗಳೂರಿನ ಮೂಡಲಪಾಳ್ಯದ ಶಕ್ತಿ ಗಾರ್ಡನ್ನ ಮಂಜುನಾಥ್ ಸಿ ಎಂಬುವವರು ಡಾ. ಮಂಜುನಾಥ್ ಅವರ ವಿರುದ್ಧ ಸ್ಪರ್ಧಿಸಿದ್ದಾರೆ.
ಜನ ಬುದ್ಧಿವಂತರು, ವಿದ್ಯಾವಂತರು ಮತ್ತು ಚಿಂತನಶೀಲರು. ನಾನು ರಾಷ್ಟ್ರೀಯ ಪಕ್ಷ ಬಿಜೆಪಿಯಿಂದ ಕಮಲದ ಚಿಹ್ನೆಯ ಮೇಲೆ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಅವರಿಗೆ ತಿಳಿದಿದೆ ಎಂದು ಮಂಜುನಾಥ್ ಹೇಳಿದರು.
ಒಂದೇ ಹೆಸರಿನ ಹಲವು ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಮತದಾರರಲ್ಲಿ ಗೊಂದಲ ಸೃಷ್ಟಿಯಾಗುವ ಸಾಧ್ಯತೆಗಳನ್ನು ತಳ್ಳಿಹಾಕಿದ ಡಾ. ಮಂಜುನಾಥ್ ಅವರು, ನಮ್ಮ ಲೆಕ್ಕಾಚಾರದ ಪ್ರಕಾರ, ನಾವು ಅವರಿಗಿಂತ(ಕಾಂಗ್ರೆಸ್) ಮುಂದಿದ್ದೇವೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ