ಕಾರವಾರ: ಬಿಜೆಪಿಯಲ್ಲಿದ್ದರೂ ಅಂತರ ಕಾಯ್ದುಕೊಂಡು ಬಂದಿರುವ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರ ಪುತ್ರ ವಿವೇಕ್ ಹೆಬ್ಬಾರ್ ಅವರು ಗುರುವಾರ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಿಜೆಪಿ ತೊರೆದ ವಿವೇಕ್ ಹೆಬ್ಬಾರ್ ಅವರು ಇಂದು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ಮಾಜಿ ಎಂಎಲ್ ಸಿ ಐವನ್ ಡಿಸೋಜಾ ಮತ್ತು ಇತರ ಸ್ಥಳೀಯ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ವಿವೇಕ ಹೆಬ್ಬಾರ್, ನನ್ನ ತಂದೆಯವರು ಕಾಂಗ್ರೆಸ್ ಸೆರ್ಪಡೆ ಆಗುವುದರ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಕಾರ್ಯರ್ತರಿಗೆ ಪಕ್ಷದಲ್ಲಿ ಆದ ತಾರತಮ್ಯ ಮನಗಂಡು ಈ ನಿರ್ಧಾರಕ್ಕೆ ಬಂದಿದ್ದೆನೆ. ನಮ್ಮ ಕಾರ್ಯರ್ತರಿಗೆ ಪಕ್ಷದಲ್ಲಿ ಸ್ಥಾನ ಮಾನ ಕೊಡಿಸುವ ವಿಚಾರದಲ್ಲಿ ಅಸಮಾಧಾನ ಇತ್ತು. ವಿಧಾನ ಸಭೆ ಚುನಾವಣೆಯಲ್ಲಿ ಕೆಲ ಬಿಜೆಪಿಯವರೆ ನಮ್ಮ ತಂದೆಯವರನ್ನ ಸೋಲಿಸಲು ಪ್ರಯತ್ನಿಸಿದರು. ಆದ್ರು ಅವರು ಗೆಲುವು ಸಾಧಿಸಿದರು ಎಂದರು.
ಫೆಬ್ರವರಿ 27 ರಂದು ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ವಿಪ್ ನೀಡಿದ್ದರೂ ಮತದಾನಕ್ಕೆ ಗೈರು ಆಗುವ ಮೂಲಕ ಕೇಸರಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕೂಡ ಕಾಂಗ್ರೆಸ್ ಸೇರಲು ಯೋಜಿಸುತ್ತಿದ್ದಾರೆ ಎಂಬ ಊಹಾಪೋಹಗಳ ನಡುವೆ ಅವರ ಪುತ್ರ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.
ಪಕ್ಷದ ವಿಪ್ ಉಲ್ಲಂಘಿಸಿದ್ದಕ್ಕೆ ಬಿಜೆಪಿ ಹೆಬ್ಬಾರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅದಕ್ಕೆ ಅವರು ಉತ್ತರ ಸಹ ನೀಡಿದ್ದಾರೆ.
ಈಗ ಲೋಕಸಭಾ ಚುನಾವಣೆ ಪ್ರಚಾರದ ಭರಾಟೆ ಜೋರಾಗಿದ್ದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿವರಾಂ ಹೆಬ್ಬಾರ್ ಅವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿಲ್ಲ.
Advertisement