ದಾವಣಗೆರೆ: ದಾವಣಗೆರೆ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೇ ದೊಡ್ಡದಿತ್ತು. ಈ ಮಧ್ಯೆ ಸಂಸದ ಸಿದ್ದೇಶ್ವರ ಅವರು ತಮ್ಮ ಪತ್ನಿಗೆ ಟಿಕೆಟ್ ಕೊಡಿಸಿದ್ದರಿಂದ ಬೇಸರಗೊಂಡಿರುವ ದಾವಣಗೆರೆ ಜಗಳೂರು ಕ್ಷೇತ್ರದ ಮಾಜಿ ಶಾಸಕ, ಆರ್ಎಸ್ಎಸ್ ಕಟ್ಟಾಳು ಟಿ ಗುರುಸಿದ್ದನಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು, ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡರು. ಇದೇ ವೇಳೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಟಿ.ಗುರುಸಿದ್ದನಗೌಡ ಪುತ್ರ ಡಾ.ರವಿಕುಮಾರ್ ಸಹ ಕಾಂಗ್ರೆಸ್ ಸೇರಿದ್ದಾರೆ.
ನಂತರ ಮಾತನಾಡಿದ ಟಿ ಗುರುಸಿದ್ದನಗೌಡ ಅವರು, ನಾವು ಪಕ್ಷಕ್ಕಾಗಿ ನಿರಂತರವಾಗಿ ದುಡಿದಿದ್ದೇವೆ. ಆದರೆ ನಮಗೆ ಪಕ್ಷದಿಂದ ಅನ್ಯಾಯವಾಗಿದೆ. 20 ವರ್ಷಗಳಿಂದ ಸಂಸದರಾಗಿರುವ ಸಿದ್ದೇಶ್ವರ ಅವರು ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಕೊಡಿಸಬೇಕಿತ್ತು. ಈ ಬಾರಿ ನನ್ನ ಪುತ್ರ ಡಾ.ರವಿಕುಮಾರ್ಗೆ ಬಿಜೆಪಿ ಟಿಕೆಟ್ ಕೊಡಬೇಕಿತ್ತು. ಸಿದ್ದೇಶ್ವರಗೆ ವಯಸ್ಸಾಗಿದೆ. ಹೀಗಾಗಿ ತಮ್ಮ ಪತ್ನಿಗೆ ಟಿಕೆಟ್ ಕೊಡಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಬಿಜೆಪಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಕಿಡಿಕಾರಿದರು.
Advertisement